ಗಡಿ ವಿವಾದ: ಮಹಾರಾಷ್ಟ್ರ, ಕರ್ನಾಟಕ ಸಿಎಂಗಳೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ!

ಮಹಾರಾಷ್ಟ್ರ, ಕರ್ನಾಟಕ ಎರಡು ರಾಜ್ಯಗಳ ನಡುವಿನ ಗಡಿ ವಿವಾದವನ್ನು ಶಮನಗೊಳಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉಭಯ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಹತ್ವ ಸಭೆ ಕರೆದಿದ್ದಾರೆ ಎಂದು ತಿಳಿದುಬಂದಿದೆ.
ಕೇಂದ್ರ ಸಚಿವ ಅಮಿತ್ ಶಾ
ಕೇಂದ್ರ ಸಚಿವ ಅಮಿತ್ ಶಾ

ನವದೆಹಲಿ: ಮಹಾರಾಷ್ಟ್ರ, ಕರ್ನಾಟಕ ಎರಡು ರಾಜ್ಯಗಳ ನಡುವಿನ ಗಡಿ ವಿವಾದವನ್ನು ಶಮನಗೊಳಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉಭಯ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಹತ್ವ ಸಭೆ ಕರೆದಿದ್ದಾರೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಇದೇ ಡಿಸೆಂಬರ್ 14 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಹಾರಾಷ್ಟ್ರ ಮತ್ತು ಕರ್ನಾಟಕದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಿದ್ದಾರೆ ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ ಸಿಪಿ)ದ ನಾಯಕ ಅಮೋಲ್ ಕೋಲ್ಹೆ ಶುಕ್ರವಾರ ಹೇಳಿದ್ದಾರೆ.

ದೆಹಲಿಯಲ್ಲಿ ಮಹಾರಾಷ್ಟ್ರ ವಿಕಾಸ್ ಅಘಾಡಿ (ಎಂವಿಎ) ಸಂಸದರ ನಿಯೋಗದೊಂದಿಗೆ ಅಮಿತ್ ಶಾ ಅವರನ್ನು ಭೇಟಿ ಮಾಡಿದ ನಂತರ ಶಿರೂರಿನ ಲೋಕಸಭಾ ಸದಸ್ಯ ಕೋಲ್ಹೆ ಸುದ್ದಿಗಾರರೊಂದಿಗೆ ಮಾಹಿತಿ ನೀಡಿದ್ದು, ಮಹಾರಾಷ್ಟ್ರ ಮತ್ತು ಕರ್ನಾಟಕ ನಡುವಿನ ಗಡಿ ವಿವಾದವು ಪೂರ್ಣ ಹಿಂಸಾಚಾರದ ಹಂತಕ್ಕೆ ತಲುಪುವ ಹಂತವನ್ನು ತಲುಪಿದೆ ಎಂದು ಎಂವಿಎ ನಿಯೋಗವು ಸಭೆಯಲ್ಲಿ ಶಾ ಅವರಿಗೆ ಮನವರಿಕೆ ಮಾಡಿದೆ. ಹೀಗಾಗಿ ಡಿಸೆಂಬರ್ 14 ರಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಭೆಯನ್ನು ಅಮಿತ್ ಶಾ ಚರ್ಚೆಗೆ ಕರೆದಿದ್ದಾರೆ ಎಂದು ಕೋಲ್ಹೆ ಹೇಳಿದರು.

ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ನಡೆಯುತ್ತಿರುವ ಗಡಿ ವಿವಾದ ತಾರಕಕ್ಕೇರಿದ್ದು, ಉಭಯ ರಾಜ್ಯಗಳಲ್ಲಿ ಹೋರಾಟಗಾರರು ಬಸ್ ಗಳಿಗೆ ಮಸಿ ಬಳಿದು, ಕಲ್ಲು ಹೊಡೆಯುವ ಕುಕೃತ್ಯನವೆಸಗಿದ್ದು, ಇದು ಉಭಯ ರಾಜ್ಯಗಳ ನಡುವಿನ ಸಾರಿಗೆ ವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಅಲ್ಲದೆ ಗಡಿ ಗ್ರಾಮಗಳಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಪರಿಸ್ಥಿತಿ ಯಾವುದೇ ಸಂದರ್ಭದಲ್ಲೂ ಬಿಗಾಡಾಯಿಸಬಹುದು ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com