'ನಮ್ಮ ಪಾಲಿನ ನರ ರಾಕ್ಷಸ': ತಾಯಿಯ ಜೀವಂತವಾಗಿ ಸುಟ್ಟ ತಂದೆಗೆ ಶಿಕ್ಷೆ ಕೊಡಿಸಲು ಸಹಾಯ ಮಾಡಿದ ಪುತ್ರಿಯರು!

ಗಂಡುಮಗುವಿಗೆ ಜನ್ಮ ನೀಡಲಿಲ್ಲ ಎಂಬ ಒಂದೇ ಕಾರಣಕ್ಕೆ ತಾಯಿಯನ್ನು ಜೀವಂತವಾಗಿ ಸುಟ್ಟ ತಂದೆಗೆ ಶಿಕ್ಷೆ ಕೊಡಿಸಲು ಹಗಲಿರುವ ಶ್ರಮಿಸಿದ ಪುತ್ರಿಯರಿಗೆ ಕೊನೆಗೂ ಜಯ ಸಂದಿದ್ದು, ಕೋರ್ಟ್ ಪಾಪಿ ತಂದೆಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ತಂದೆಗೆ ಶಿಕ್ಷೆ ಕೊಡಿಸಿದ ಸಹೋದರಿಯರು
ತಂದೆಗೆ ಶಿಕ್ಷೆ ಕೊಡಿಸಿದ ಸಹೋದರಿಯರು

ಲಖನೌ: ಗಂಡುಮಗುವಿಗೆ ಜನ್ಮ ನೀಡಲಿಲ್ಲ ಎಂಬ ಒಂದೇ ಕಾರಣಕ್ಕೆ ತಾಯಿಯನ್ನು ಜೀವಂತವಾಗಿ ಸುಟ್ಟ ತಂದೆಗೆ ಶಿಕ್ಷೆ ಕೊಡಿಸಲು ಹಗಲಿರುವ ಶ್ರಮಿಸಿದ ಪುತ್ರಿಯರಿಗೆ ಕೊನೆಗೂ ಜಯ ಸಂದಿದ್ದು, ಕೋರ್ಟ್ ಪಾಪಿ ತಂದೆಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಹೌದು.. ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಜೂನ್ 14, 2016 ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಸ್ವಂತ ತಂದೆಯ ವಿರುದ್ಧವೇ 6 ವರ್ಷಗಳ ನಿರಂತರವಾಗಿ ಕಾನೂನು ಹೋರಾಟ ಮಾಡಿದ್ದ ಇಬ್ಬರು ಸಹೋದರಿಯರು ಪಾಪಿ ತಂದೆಗೆ ಶಿಕ್ಷೆ ಕೊಡಿಸುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ. ಪಾಪಿ ತಂದೆಗೆ ಬುಲಂದ್‌ಶಹರ್‌ನ ಸ್ಥಳೀಯ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಏನಿದು ಪ್ರಕರಣ? 
ಜೂನ್ 14, 2016 ರಂದು ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಮನೋಜ್ ಬನ್ಸಾಲ್‌ ಎಂಬಾತ ತನ್ನ ಪತ್ನಿ ಅನು ಎಂಬುವವರನ್ನು ಜೀವಂತವಾಗಿ ಸುಟ್ಟು ಹಾಕಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಕೌಟುಂಬಿಕ ಕಲಹ ಮತ್ತು ಗಂಡುಮಗುವಿಗಾಗಿ ಆತ ನಿತ್ಯ ಪತ್ನಿಗೆ ಕಿರುಕುಳ ನೀಡುತ್ತಿದ್ದ ವಿಚಾರ ಬೆಳಕಿಗೆ ಬಂದಿತ್ತು. ಅಂದು ತಮ್ಮ ತಾಯಿಯ ವಿರುದ್ಧ ತಂದೆ ಮೆರೆದಿದ್ದ ಕೌರ್ಯವನ್ನು ಹತ್ತಿರದಿಂದ ನೋಡಿದ್ದ ತಮ್ಮ ಸ್ವಂತ ತಂದೆಯ ವಿರುದ್ಧ ಪುತ್ರಿಯರೇ ಪೊಲೀಸ್ ಠಾಣೆ ಮೆಟ್ಟಿಲೇರಿ ನ್ಯಾಯಾಲಯದಲ್ಲಿ ಕಾನೂನು ಸಮರ ಸಾರಿದ್ದರು.ಇದೀಗ ಸತತ ಆರು ವರ್ಷಗಳ ಕಾನೂನು ಹೋರಾಟದ ಬಳಿಕ ತಾಯಿಯನ್ನು ಬರ್ಬರವಾಗಿ ಕೊಂದ ತಂದೆಗೆ ಶಿಕ್ಷೆ ಕೊಡಿಸುವಲ್ಲಿ 18 ವರ್ಷದ ತಾನ್ಯಾ ಮತ್ತು 20 ವರ್ಷದ ಲತಿಕಾ ಸಹೋದರಿಯರು ಯಶಸ್ವಿಯಾಗಿದ್ದಾರೆ. ತೀರ್ಪು ಪ್ರಕಟವಾಗುತ್ತಿದ್ದಂತೆಯೇ ಪರಸ್ಪರ ಅಪ್ಪಿಕೊಂಡು ಅತ್ತ ಸಹೋದರಿಯರು ಕೊನೆಗೂ ತಮ್ಮ ತಾಯಿ ಸಾವಿಗೆ ನ್ಯಾಯ ಕೊಡಿಸಿದ್ದಾರೆ.

ನ್ಯಾಯ ಕೋರಿ ಸಿಎಂಗೆ ರಕ್ತದಲ್ಲಿ ಪತ್ರ ಬರೆದಿದ್ದ ಪುತ್ರಿ
ಅಂದು ಆಗಸ್ಟ್ 2016 ರಲ್ಲಿ, ಲತಿಕಾ ಬನ್ಸಾಲ್ ತಮ್ಮ ಕೊಲೆಯ ಸಾವಿಗೆ ನ್ಯಾಯ ಕೋರಿ ರಕ್ತದಲ್ಲಿ ಅಂದಿನ ಸಿಎಂ ಅಖಿಲೇಶ್ ಯಾದವ್ ಅವರಿಗೆ ಪತ್ರ ಬರೆದಿದ್ದರು. ಅವರ ತಂದೆ ಮತ್ತು ತಂದೆಯ ಸಂಬಂಧಿಕರು ತಮ್ಮ ತಾಯಿಯನ್ನು ಜೀವಂತವಾಗಿ ಸುಟ್ಟುಹಾಕಿದ್ದಾರೆ ಮತ್ತು ಸ್ಥಳೀಯ ಪೊಲೀಸರು ತಮ್ಮ ದೂರಿಗೆ ಯಾವುದೇ ಗಮನ ನೀಡಿಲ್ಲ. ಪೊಲೀಸರು ಆತ್ಮಹತ್ಯೆ ಎಂದು ಹೇಳುವ ಮೂಲಕ ಅಪರಾಧವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ. ಅಲ್ಲದೆ ತಂದೆ ತಾಯಿಗೆ ನೀಡಿದ್ದ ಇಂಚಿಂಚೂ ಕಿರುಕುಳವನ್ನು ಮತ್ತು ಜಗಳಕ್ಕೆ ಕಾರಣವಾದ ಅಂಶಗಳ ಬಗ್ಗೆ ಬರೆಯಲಾಗಿತ್ತು.  ಈ ಪತ್ರ ದೊರೆತು ಈ ಬಗ್ಗೆ ಗಮನ ಹರಿಸಿದ್ದ ಸಿಎಂ ಅಖಿಲೇಶ್ ಯಾದವ್ ಅವರು ಸಹೋದರಿಯರಿಗೆ 10 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಿದ್ದರು. ಅವರು ತಮ್ಮ ಸೊಸೆಯಂದಿರನ್ನು ಸಾಕಬಹುದೆಂದು ಖಚಿತಪಡಿಸಿಕೊಳ್ಳಲು ಅವರ ತಾಯಿಯ ಚಿಕ್ಕಪ್ಪನಿಗೆ ಸರ್ಕಾರಿ ಕೆಲಸವನ್ನು ಸಹ ನೀಡಿದ್ದರು.

ನಿರಂತರ ಕಾನೂನು ಹೋರಾಟ
ನ್ಯಾಯಾಲಯದಲ್ಲಿ ಸಹೋದರಿಯರನ್ನು ಪ್ರತಿನಿಧಿಸಿದ ವಕೀಲ ಸಂಜಯ್ ಶರ್ಮಾ ಅವರು ಈ ಬಗ್ಗೆ ಮಾತನಾಡಿದ್ದು, "ಅಂತಿಮವಾಗಿ ನ್ಯಾಯವನ್ನು ಪಡೆಯಲು ನಮಗೆ ಆರು ವರ್ಷ, ಒಂದು ತಿಂಗಳು ಮತ್ತು 13 ದಿನಗಳನ್ನು ತೆಗೆದುಕೊಂಡಿದೆ. ಕಳೆದ ಆರು ವರ್ಷಗಳಿಂದ ಸಹೋದರಿಯರು "100 ಕ್ಕೂ ಹೆಚ್ಚು ಬಾರಿ" ನ್ಯಾಯಾಲಯಕ್ಕೆ ಹಾಜರಾಗಿದ್ದರು ಮತ್ತು ಅವರು "ಒಂದು ದಿನಾಂಕವನ್ನು ಎಂದಿಗೂ ತಪ್ಪಿಸಲಿಲ್ಲ". ಮಗುವಿನ ಲಿಂಗವನ್ನು ನಿರ್ಧರಿಸುವುದು ಮಹಿಳೆಯ ಕೈಯಲ್ಲಿಲ್ಲ, ಆಕೆಗೆ ಏಕೆ ಚಿತ್ರಹಿಂಸೆ ಮತ್ತು ಶಿಕ್ಷೆ ನೀಡಬೇಕು? ಇದು ದುಷ್ಟ ಕೃತ್ಯ" ಎಂದು ವಕೀಲರು ಹೇಳಿದರು. 

ಅಂತೆಯೇ ಸಹೋದರಿಯರ ಪರ ವಾದ ಮಾಡಲು ವಕೀಲ ಸಂಜಯ್ ಶರ್ಮಾ ಅವರು ಯಾವುದೇ ಹಣ ಪಡೆದಿಲ್ಲ ಎಂದು ಹೇಳಿದ್ದಾರೆ. ಪ್ರಕರಣದಲ್ಲಿ ಇತರ ಏಳು ಆರೋಪಿಗಳಿದ್ದು, ಅವರ ತಂದೆ ಮನೋಜ್ ಬನ್ಸಾಲ್ ವಿರುದ್ಧ ನ್ಯಾಯಾಲಯ ಶಿಕ್ಷೆ ನೀಡಿದೆ. ಅವರ ಸಂಬಂಧಿಕರ ಪ್ರಕರಣಗಳು ಹೈಕೋರ್ಟ್‌ನಲ್ಲಿ ಬಾಕಿ ಉಳಿದಿದ್ದು, ಆಗಸ್ಟ್‌ನಲ್ಲಿ ವಿಚಾರಣೆ ನಡೆಯುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com