ತಿರುವನಂತಪುರಂ: ಶಸ್ತ್ರಸಜ್ಜಿತವಾದ ದಾಳಿಕೋರನನ್ನು ಪೊಲೀಸ್ ಅಧಿಕಾರಿಯೊಬ್ಬರು ಧೈರ್ಯದಿಂದ ಬಗ್ಗುಬಡಿಯುತ್ತಿರುವ ವೀಡಿಯೊ ಟ್ವಿಟರ್ನಲ್ಲಿ ವೈರಲ್ ಆಗಿದೆ. ಕೇರಳದ ಕಾಯಂಕುಲಂ ಬಳಿಯ ಪಾರಾ ಜಂಕ್ಷನ್ ನಲ್ಲಿ ಈ ಘಟನೆ ನಡೆದಿದೆ.
ಪೊಲೀಸ್ ವಾಹನವು ಆರೋಪಿಯ ಪಕ್ಕದಲ್ಲಿ ಬಂದು ನಿಲ್ಲುತ್ತಿದ್ದಂತೆ ಆತ ತನ್ನ ವಾಹನದಿಂದ ಮಚ್ಚು ಹಿಡಿದು ಪೊಲೀಸ್ ಅಧಿಕಾರಿಯ ಮೇಲೆ ದಾಳಿ ಮಾಡಲು ಸಜ್ಜಾದನು. ಆದಾಗ್ಯೂ, ಸಬ್ ಇನ್ಸ್ ಪೆಕ್ಟರ್ ವೀರಾವೇಶದಿಂದ ದಾಳಿಕೋರನ ವಿರುದ್ಧ ಹೋರಾಡುತ್ತಾರೆ. ಅವನನ್ನು ನೆಲಕ್ಕೆ ಬೀಳಿಸುವ ಮೂಲಕ ಅವನನ್ನು ವಶಕ್ಕೆ ಪಡೆಯುತ್ತಾರೆ. ದಾರಿಹೋಕರು ಘಟನಾ ಸ್ಥಳಕ್ಕೆ ಧಾವಿಸಿ ಅಧಿಕಾರಿಗೆ ಸಹಾಯ ಮಾಡುತ್ತಾರೆ.
ಈ ವಿಡಿಯೋವನ್ನು ಭಾರತೀಯ ಪೊಲೀಸ್ ಸೇವಾ ಅಧಿಕಾರಿ ಸ್ವಾತಿ ಲಾಕ್ರಾ ಅವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. “ನಿಜವಾದ ಹೀರೋ ಹೇಗಿರುತ್ತಾರೆ… ಕೇರಳದ ಈ ಪೊಲೀಸ್ ಸಬ್ ಇನ್ಸ್ ಪೆಕ್ಟರ್ಗೆ ವಂದನೆಗಳು.” ಎಂದು ವಿಡಿಯೋ ಹಂಚಿಕೊಂಡು ಟ್ವೀಟ್ ಮಾಡಿದ್ದಾರೆ.
ಸಾಮಾಜಿಕ ಮಾಧ್ಯಮ ಬಳಕೆದಾರರು ಪೊಲೀಸ್ ಅಧಿಕಾರಿಯ ಧೈರ್ಯವನ್ನು ಶ್ಲಾಘಿಸಿದ್ದಾರೆ.
ಕೇರಳ ಪೊಲೀಸರ ಫೇಸ್ಬುಕ್ ಪೋಸ್ಟ್ ಪ್ರಕಾರ ಅಧಿಕಾರಿಯನ್ನು ಆಲಪ್ಪುಳ ನೂರನಾಡ್ ಪೊಲೀಸ್ ಠಾಣೆಯಲ್ಲಿ ಪ್ರಭಾರಿಯಾಗಿರುವ ಸಬ್ ಇನ್ಸ್ಪೆಕ್ಟರ್ ಅರುಣ್ ಕುಮಾರ್ ಎಂದು ಗುರುತಿಸಲಾಗಿದೆ. ಜೂನ್ 12 ರಂದು ಸಂಜೆ 6 ಗಂಟೆಗೆ ಪ್ಯಾರಾ ಜಂಕ್ಷನ್ ಬಳಿ ಈ ಘಟನೆ ನಡೆದಿದೆ ಎಂದು ಪೋಸ್ಟ್ ನಲ್ಲಿ ಬರೆಯಲಾಗಿದೆ. ಗಾಯದಿಂದಾಗಿ ಅಧಿಕಾರಿ ಬೆರಳುಗಳಿಗೆ ಏಳು ಹೊಲಿಗೆ ಹಾಕಲಾಗಿದೆ. ಮಚ್ಚನ್ನು ಹಿಡಿದ ವ್ಯಕ್ತಿಯನ್ನು ಸುಗತನ್ ಎಂದು ಗುರುತಿಸಲಾಗಿದೆ.
Advertisement