ಕೊಲ್ಕತ: ಅಗ್ನಿಪಥ್ ಯೋಜನೆ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಸೋಮವಾರ ವಾಗ್ದಾಳಿ ನಡೆಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಹೊಸ ಸೇನಾ ನೇಮಕಾತಿ ಯೋಜನೆ ಮೂಲಕ ಬಿಜೆಪಿ ತನ್ನ ಸ್ವಂತ ಸಶಸ್ತ್ರ ಪಡೆ ರಚಿಸಿಕೊಳ್ಳಲು ಪ್ರಯತ್ನದಲ್ಲಿದೆ ಎಂದು ಆರೋಪಿಸಿದ್ದಾರೆ.
ಅಗ್ನಿಪಥ್ ಯೋಜನೆ ಸಶಸ್ತ್ರ ಪಡೆಯನ್ನು ಅಪಮಾನಿಸುತ್ತಿದೆ ಎಂದಿರುವ ಬ್ಯಾನರ್ಜಿ, ಅಗ್ನಿವೀರರನ್ನು ನಾಲ್ಕು ವರ್ಷ ಸೇವೆ ಸಲ್ಲಿಸಿದ ಬಳಿಕ ಬಿಜೆಪಿ ತನ್ನ ಪಕ್ಷದ ವಾಚ್ ಮ್ಯಾನ್ ಗಳಾಗಿ ನೇಮಿಸಿಕೊಂಡರೂ ಅಚ್ಚರಿಪಡಬೇಕಾಗಿಲ್ಲ ಎಂದು ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿಂದು ಹೇಳಿದರು.
ಈ ಯೋಜನೆ ಮೂಲಕ ಬಿಜೆಪಿ ತನ್ನ ಸ್ವಂತ ಸಶಸ್ತ್ರ ಪಡೆ ರಚಿಸಿಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ. ನಾಲ್ಕು ವರ್ಷಗಳ ನಂತರ ಅವರು ಏನು ಮಾಡ್ತಾರೆ? ಯುವಕರ ಕೈಗೆ ಸಶಸ್ತ್ರ ಕೊಡಲು ಬಿಡೆಪಿ ಬಯಸಿದೆಯೇ? ಎಂದು ಪ್ರಶ್ನಿಸಿರುವ ಮಮತಾ ಬ್ಯಾನರ್ಜಿ,2024ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ಯೋಜನೆ ಘೋಷಿಸುವ ಮೂಲಕ ಬಿಜೆಪಿ ಜನರನ್ನು ದಡ್ಡರನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ಪ್ರತಿವರ್ಷ ಎರಡು ಕೋಟಿ ಉದ್ಯೋಗದ ಭರವಸೆ ನೀಡಿದ್ದ ಬಿಜೆಪಿ, ಇಂತಹ ಯೋಜನೆ ಘೋಷಣೆ ಮೂಲಕ ದೇಶದ ಜನರನ್ನು ವಂಚಿಸುತ್ತಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದರು. ಮಮತಾ ಬ್ಯಾನರ್ಜಿ ಹೇಳಿಕೆ ವಿರೋಧಿಸಿ ಬಿಜೆಪಿ ಶಾಸಕರು ಸದನದಿಂದ ಹೊರ ನಡೆದರು.
Advertisement