ಆಪರೇಷನ್ ಕಾವೇರಿ: ಸ್ವಂತ ನಾಗರಿಕರಲ್ಲದೆ ಸುಡಾನ್ ನ ಫ್ರೆಂಚ್ ರಾಯಭಾರ ಕಚೇರಿಯ ಸಿಬ್ಬಂದಿಯನ್ನು ರಕ್ಷಿಸಿದ ಭಾರತ!

ಆಪರೇಷನ್ ಕಾವೇರಿ ಅಡಿಯಲ್ಲಿ ಸುಡಾನ್‌ನಿಂದ ಭಾರತೀಯ ಪ್ರಜೆಗಳ ಸ್ಥಳಾಂತರಿಸುವಿಕೆ ಮುಂದುವರೆದಿದ್ದು, ಇದೀಗ ಭಾರತೀಯ ಸೇನಾಪಡೆಗಳು ಒಂದು ಹೆಜ್ಜೆ ಮುಂದೆ ಹೋಗಿ ಖಾರ್ಟೂಮ್‌ನಿಂದ ಫ್ರೆಂಚ್ ರಾಯಭಾರಿ ಕಚೇರಿಯ ಸಿಬ್ಬಂದಿಗಳನ್ನು ಸ್ಥಳಾಂತರಿಸಲು ಸಹಾಯ ಮಾಡಿದೆ.
ಆಪರೇಷನ್ ಕಾವೇರಿ ಕಾರ್ಯಾಚರಣೆ
ಆಪರೇಷನ್ ಕಾವೇರಿ ಕಾರ್ಯಾಚರಣೆ

ನವದೆಹಲಿ: ಆಪರೇಷನ್ ಕಾವೇರಿ ಅಡಿಯಲ್ಲಿ ಸುಡಾನ್‌ನಿಂದ ಭಾರತೀಯ ಪ್ರಜೆಗಳ ಸ್ಥಳಾಂತರಿಸುವಿಕೆ ಮುಂದುವರೆದಿದ್ದು, ಇದೀಗ ಭಾರತೀಯ ಸೇನಾಪಡೆಗಳು ಒಂದು ಹೆಜ್ಜೆ ಮುಂದೆ ಹೋಗಿ ಖಾರ್ಟೂಮ್‌ನಿಂದ ಫ್ರೆಂಚ್ ರಾಯಭಾರಿ ಕಚೇರಿಯ ಸಿಬ್ಬಂದಿಗಳನ್ನು ಸ್ಥಳಾಂತರಿಸಲು ಸಹಾಯ ಮಾಡಿದೆ.

ಖಾರ್ಟೌಮ್‌ನಲ್ಲಿರುವ ಫ್ರೆಂಚ್ ರಾಯಭಾರಿ ಕಚೇರಿಯ ಸ್ಥಳೀಯ ಸಿಬ್ಬಂದಿ ಮತ್ತು ಅವರ ಕುಟುಂಬವನ್ನು ಭಾರತೀಯ ಸೇನಾಪಡೆಗಳು ಸುರಕ್ಷಿತವಾಗಿ ಸ್ಥಳಾಂತರಿಸಿವೆ. ಈ ಬಗ್ಗೆ ಭಾರತದಲ್ಲಿ ಫ್ರಾನ್ಸ್‌ನ ರಾಯಭಾರಿ ಎಮ್ಯಾನುಯೆಲ್ ಲೆನೈನ್ ಮಾಹಿತಿ ನೀಡಿದ್ದು, "ಗುರುವಾರ ರಾತ್ರಿ IAF ವಿಮಾನದಲ್ಲಿ ಖಾರ್ಟೌಮ್‌ನಲ್ಲಿರುವ ಫ್ರೆಂಚ್ ರಾಯಭಾರಿ ಕಚೇರಿಯ ಸ್ಥಳೀಯ ಸಿಬ್ಬಂದಿ ಮತ್ತು ಅವರ ಕುಟುಂಬವನ್ನು ಸ್ಥಳಾಂತರಿಸಿದ್ದಕ್ಕಾಗಿ ಭಾರತಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಇಂಡೋ-ಫ್ರೆಂಚ್ ಐಕಮತ್ಯವು ಎಂದಿಗೂ ಕುಂದುವುದಿಲ್ಲ" ಎಂದು ಹೇಳಿದ್ದಾರೆ.

ಎರಡು ದಿನಗಳ ಹಿಂದೆ, ಫ್ರೆಂಚ್ ಪ್ರಜೆಗಳನ್ನು ಸ್ಥಳಾಂತರಿಸುವ ತಂಡವು ಅವರೊಂದಿಗೆ ಐದು ಭಾರತೀಯರನ್ನು ಕೂಡ ಸುಡಾನ್‌ನಿಂದ ಸುರಕ್ಷಿತವಾಗಿ ಸ್ಥಳಾಂತರಿಸಿತ್ತು. 

ಏತನ್ಮಧ್ಯೆ, ಕದನ ವಿರಾಮ ಉಲ್ಲಂಘನೆಗಳ ಹೊರತಾಗಿಯೂ, ಆಪರೇಷನ್ ಕಾವೇರಿ ಮುಂದುವರೆದಿದೆ. ಇಲ್ಲಿಯವರೆಗೆ, ಸುಡಾನ್ ನಲ್ಲಿ ಸಿಕ್ಕಿಬಿದ್ದಿದ್ದ ಭಾರತೀಯರ 11 ಬ್ಯಾಚ್‌ಗಳು ಜೆಡ್ಡಾಕ್ಕೆ ಸ್ಥಳಾಂತರಿಸಲಾಗಿದೆ. ಅವರನ್ನು ಪೋರ್ಟ್ ಸುಡಾನ್‌ನಿಂದ ಜೆಡ್ಡಾಕ್ಕೆ IAF C130J ವಿಮಾನದಲ್ಲಿ ಸಾಗಿಸಲಾಯಿತು.

ಈ ಬಗ್ಗೆ ಮಾಹಿತಿ ನೀಡಿರುವ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಅವರು, 'ಸುಡಾನ್‌ನಿಂದ 326 ಭಾರತೀಯ ಸ್ಥಳಾಂತರಿಸುವವರ 10 ನೇ ಬ್ಯಾಚ್ ಐಎನ್‌ಎಸ್ ತರ್ಕಾಶ್ ಮೂಲಕ ಜೆಡ್ಡಾವನ್ನು ತಲುಪಿತು. ಅವರನ್ನು ಶೀಘ್ರದಲ್ಲೇ ಭಾರತಕ್ಕೆ ಕಳುಹಿಸಲಾಗುವುದು. ನಾವು ಬೆಂಗಳೂರಿಗೆ ಹೋಗುವ ವಿಮಾನದಲ್ಲಿ 362 ಭಾರತೀಯರನ್ನು ವಾಪಸ್ ಕಳುಹಿಸಿದ್ದೇವೆ - ಅವರಲ್ಲಿ ಹೆಚ್ಚಿನವರು ಹಕ್ಕಿ ಪಕ್ಕಿ ಬುಡಕಟ್ಟು ಜನಾಂಗದವರು' ಎಂದು ಹೇಳಿದ್ದಾರೆ.

"392 ಭಾರತೀಯರ ಬ್ಯಾಚ್ IAF C17 ಗ್ಲೋಬ್‌ಮಾಸ್ಟರ್‌ನಲ್ಲಿ ಜೆಡ್ಡಾದಿಂದ ದೆಹಲಿಗೆ ಮರಳಿದೆ. ಅವರು ಶೀಘ್ರದಲ್ಲೇ ತಮ್ಮ ಪ್ರೀತಿಪಾತ್ರರ ಜೊತೆಗೆ ಇರುತ್ತಾರೆ" ಎಂದು ಮುರಳೀಧರನ್ ಹೇಳಿದರು.

ಸುಡಾನ್‌ನಿಂದ ಜೆಡ್ಡಾ ಮೂಲಕ ಭಾರತಕ್ಕೆ ಭಾರತೀಯರನ್ನು ಸ್ಥಳಾಂತರಿಸುವ ಮೇಲ್ವಿಚಾರಣೆಗಾಗಿ ಮುರಳೀಧರನ್ ಜೆಡ್ಡಾದಲ್ಲಿ ಬೀಡುಬಿಟ್ಟಿದ್ದಾರೆ. ಅಂದಾಜಿನ ಪ್ರಕಾರ, ಸುಮಾರು 2000 ಭಾರತೀಯರು ಈಗ ಸುರಕ್ಷಿತ ವಲಯದಲ್ಲಿದ್ದಾರೆ. ಅಂದರೆ ಅವರು ಸಂಘರ್ಷ ಪೀಡಿತ ಖಾರ್ಟೂಮ್‌ನ ಕಲಹ-ಹಾನಿಗೊಳಗಾದ ಪ್ರದೇಶಗಳಿಂದ ಹೊರಗಿದ್ದು, ಪೋರ್ಟ್ ಸುಡಾನ್ ಅಥವಾ ಜೆಡ್ಡಾದಲ್ಲಿದ್ದಾರೆ ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com