ಅಮಿತ್ ಶಾ ಸರಿಯಾದ ಹೇಳಿಕೆ ನೀಡಿದ್ದಾರೆ; ಅಚ್ಚರಿ ಮೂಡಿಸಿದ ಮಮತಾ ಬ್ಯಾನರ್ಜಿ ಸಮರ್ಥನೆ!: ವಿಷಯ ಏನು ಅಂದ್ರೆ...
ನವದೆಹಲಿ: ವಿಪಕ್ಷಗಳ ಮೈತ್ರಿ ಕುರಿತ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯನ್ನು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸಮರ್ಥಿಸಿದ್ದಾರೆ.
I.N.D.I.A ಮೈತ್ರಿಕೂಟದ ಕುರಿತು ಅಮಿತ್ ಶಾ ಹೇಳಿಕೆ ನೀಡಿದ್ದರು. ಈ ಮೈತ್ರಿಕೂಟದ ಭಾಗವಾಗಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಈಗ ಅಮಿತ್ ಶಾ ಹೇಳಿಕೆಯನ್ನು ಸಮರ್ಥಿಸಿದ್ದಾರೆ.
ದೆಹಲಿ ಆಡಳಿತದ ವಿಷಯದಲ್ಲಿ ಕೇಂದ್ರ ಸರ್ಕಾರ ಮಂಡಿಸಿರುವ ಮಸೂದೆಯ ಕುರಿತು ವಿಪಕ್ಷಗಳ ಮೈತ್ರಿಕೂಟ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸದಂತೆ ಕರೆ ನೀಡಿದ್ದರು.
ಈ ಹೇಳಿಕೆ ಬೆನ್ನಲ್ಲೇ ತಮ್ಮ ಮೈತ್ರಿಕೂಟ ದೇಶದ ಪರವಾಗಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಬಿಜೆಪಿ ವಿರುದ್ಧ ಹಿಂಸಾಚಾರವನ್ನು ಬೆಂಬಲಿಸುತ್ತಿರುವ ಆರೋಪ ಮಾಡಿರುವ ಮಮತಾ ಬ್ಯಾನರ್ಜಿ, ಲೋಕಸಭಾ ಚುನಾವಣೆಯಲ್ಲಿ ತಮ್ಮ ಮೈತ್ರಿಕೂಟ ಗೆದ್ದು ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೈತ್ರಿಕೂಟದಲ್ಲಿರುವ ಮಾತ್ರಕ್ಕಾಗಿ "ದೆಹಲಿಯಲ್ಲಿನ ಭ್ರಷ್ಟಾಚಾರವನ್ನು ಬೆಂಬಲಿಸಬೇಡಿ", ಏಕೆಂದರೆ ಮೈತ್ರಿ ಇಲ್ಲದೆಯೂ ಪ್ರಧಾನಿ ಮೋದಿ ಬಹುಮತದೊಂದಿಗೆ ಚುನಾವಣೆಯನ್ನು ಗೆಲ್ಲಲಿದ್ದಾರೆ ಎಂದು ಅಮಿತ್ ಶಾ ಸಂಸತ್ ನಲ್ಲಿ ಹೇಳಿದ್ದರು.
ಅಮಿತ್ ಶಾ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಮಮತಾ ಬ್ಯಾನರ್ಜಿ, ಅಮಿತ್ ಶಾ ಗೊತ್ತೋ ಗೊತ್ತಿಲ್ಲದೆಯೋ ಸರಿಯಾಗಿಯೇ ಹೇಳಿದ್ದಾರೆ. ಏಕೆಂದರೆ ದೆಹಲಿಯ ಗೆಲುವು ಅಂದರೆ ಅದು ಇಂಡಿಯಾ ಮೈತ್ರಿಕೂಟದ ಗೆಲುವೂ ಹೌದಾಗಿದೆ.
ನಮ್ಮ ಮೈತ್ರಿ ಕೂಟ ಹೊಸದಾಗಿದೆ. ದೇಶಾದ್ಯಂತ ನಮ್ಮ ಅಸ್ತಿತ್ವವಿದೆ. ಇಂಡಿಯಾ ಸರ್ಕಾರ ದೆಹಲಿಯಲ್ಲಿ ಮೈತ್ರಿಕೂಟವನ್ನು ರಚಿಸಲಿದೆ. ದೆಹಲಿಯಲ್ಲಿ ನಮ್ಮ ಸಂಸತ್ ಇದ್ದು, ತಿಳಿದೋ ತಿಳಿಯದೆಯೋ ಅಮಿತ್ ಶಾ ಸರಿಯಾಗಿ ಹೇಳಿಕೆ ನೀಡಿದ್ದಾರೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ