ಪ್ರಬಲ ಭೂಕಂಪಕ್ಕೆ ತತ್ತರಿಸಿದ ಸಿರಿಯಾ, ಟರ್ಕಿ: ನೆರವಿಗೆ ಭಾರತ ಮುಂದು, ರಕ್ಷಣಾ, ವೈದ್ಯ ತಂಡಗಳ ರವಾನೆ

ಪ್ರಬಲ ಭೂಕಂಪಕ್ಕೆ ಟರ್ಕಿ, ಸಿರಿಯಾ ತತ್ತರಿಸಿ ಹೋಗಿದ್ದು, ಸಂತ್ರಸ್ತ ದೇಶಗಳಿಗೆ ನೆರವಿನ ಹಸ್ತ ಚಾಚಿರುವ ಭಾರತ, ವೈದ್ಯಕೀಯ ತಂಡ, ರಕ್ಷಣಾ ಪಡೆಗಳನ್ನು ರವಾನಿಸಿದೆ.
ಎನ್'ಡಿಆರ್'ಎಫ್ ಪಡೆ
ಎನ್'ಡಿಆರ್'ಎಫ್ ಪಡೆ
Updated on

ನವದೆಹಲಿ: ಪ್ರಬಲ ಭೂಕಂಪಕ್ಕೆ ಟರ್ಕಿ, ಸಿರಿಯಾ ತತ್ತರಿಸಿ ಹೋಗಿದ್ದು, ಸಂತ್ರಸ್ತ ದೇಶಗಳಿಗೆ ನೆರವಿನ ಹಸ್ತ ಚಾಚಿರುವ ಭಾರತ, ವೈದ್ಯಕೀಯ ತಂಡ, ರಕ್ಷಣಾ ಪಡೆಗಳನ್ನು ರವಾನಿಸಿದೆ.

ಭೂಕಂಪ ಪೀಡಿತ ರಾಷ್ಟ್ರಗಳಿಗೆ 48 ಜನರ ರಕ್ಷಣಾ, ವೈದ್ಯ ಪಡೆಯ ಮೊದಲ ತಂಡ ತೆರಳಿದ್ದು, ನೆರವಿನ ಕಾರ್ಯಾಚರಣೆಯನ್ನು ಆರಂಭಿಸಲು ಮುಂದಾಗಿದ್ದಾರೆಂದು ತಿಳಿದುಬಂದಿದೆ.

ಪ್ರಕೃತಿ ಮುನಿಸಿಗೆ ವಿನಾಶಕಾರಿ ಪ್ರಮಾಣದಲ್ಲಿ ಹಾನಿಯಾದ ದೇಶಗಳಿಗೆ ನೆರವು ನೀಡುವುದಾಗಿ ಪ್ರಧಾನಮಂತ್ರಿ ಕಾರ್ಯಾಲಯ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಭಾರತೀಯ ವಾಯುಪಡೆಯ ವಿಮಾನದಲ್ಲಿ ಪರಿಹಾರ ಸಾಮಗ್ರಿಗಳ ಜೊತೆಗೆ ಮೊದಲ ತಂಡ ಟರ್ಕಿಗೆ ಹಾರಿದೆ.

ಪುರುಷ ಮತ್ತು ಮಹಿಳಾ ಸಿಬ್ಬಂದಿ, ನುರಿತ ಶ್ವಾನದಳಗಳು, ವೈದ್ಯಕೀಯ ಸಾಮಗ್ರಿಗಳು, ಸುಧಾರಿತ ಕೊರೆಯುವ ಉಪಕರಣಗಳು ಸೇರಿದಂತೆ ಇತರ ಸಾಧನಗಳನ್ನು ಒಳಗೊಂಡಂತೆ ಪರಿಣಿತ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ(ಎನ್​ಡಿಆರ್​ಎಫ್​) ತಂಡ ನೆರವಿಗೆ ತೆರಳಿದೆ. ಟರ್ಕಿ ಮತ್ತು ಸಿರಿಯಾಗೆ ಭಾರತದಿಂದ ಮಾನವೀಯ ನೆರವು ನೀಡಲು ವಿಪತ್ತು ಪರಿಹಾರ ತಂಡಗಳು ಸಜ್ಜಾಗಿವೆ.

ಈ ಸಂಬಂಧ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಬಾಗ್ಚಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದು, ಎನ್'ಡಿಆರ್'ಎಫ್ ತಂಡ ಅಗತ್ಯ ಸಾಮಗ್ರಿಗಳ ಜೊತೆಗೆ ತೆರಳುತ್ತಿದೆ ಎಂದು ಹೇಳಿದ್ದಾರೆ.

ಭಾರತದಲ್ಲಿರುವ ಟರ್ಕಿಯ ರಾಯಭಾರಿ ಫಿರತ್ ಸುನೆಲ್ ಅವರು ಭಾರತ ಸರ್ಕಾರದ ನೆರವಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

"ಅಗತ್ಯಕ್ಕೆ ಬೇಕಾಗುವವ ನಿಜವಾದ ಸ್ನೇಹಿತ" ಎಂದು ಫಿರತ್ ಸುನೆಲ್ ಹೇಳಿದ್ದು, ಟರ್ಕಿಶ್​ ಭಾಷೆಯಲ್ಲಿನ ಗಾದೆಯನ್ನೂ ಉಲ್ಲೇಖಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com