ಚಂಡೀಗಢ: ಪಂಜಾಬ್ನ ಗುರುದಾಸ್ಪುರ ಜಿಲ್ಲೆಯಲ್ಲಿ ಪತ್ನಿಯನ್ನು ಥಳಿಸಿ ಕೊಲೆಗೈದು, ತನ್ನ ನಿವಾಸದಲ್ಲಿಯೇ ಆಕೆಯ ಶವವನ್ನು ಅಂತ್ಯಸಂಸ್ಕಾರ ಮಾಡಲು ಯತ್ನಿಸಿದ 60 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಗುರುವಾರ ರಾತ್ರಿ ಈ ಘಟನೆ ನಡೆದಿದ್ದು, ಗುರುದಾಸ್ಪುರದ ದೀನಾನಗರದ ಪನಿಯಾರ್ ಗ್ರಾಮದ ನಿವಾಸಿ ಸನ್ಸಾರ್ ಚಾಂದ್ ಎಂಬಾತ ಯಾವುದೋ ವಿಷಯಕ್ಕೆ ಜಗಳವಾಡಿದ ನಂತರ ತನ್ನ ಹೆಂಡತಿಯನ್ನು ಥಳಿಸಿದ್ದಾನೆ. ಮಹೀಂದ್ರೋ (55) ಗಂಭೀರವಾಗಿ ಗಾಯಗೊಂಡು, ಬಳಿಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕೂಲಿ ಕೆಲಸ ಮಾಡುತ್ತಿದ್ದ ಸನ್ಸಾರ್ ಚಾಂದ್, ಕಟ್ಟಿಗೆಗಳನ್ನು ಸಂಗ್ರಹಿಸಿ ಆಕೆಯ ದೇಹವನ್ನು ತನ್ನ ಮನೆಯಲ್ಲಿಯೇ ಸುಡಲು ಪ್ರಯತ್ನಿಸಿದ್ದಾನೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ನಂತರ ಪೊಲೀಸ್ ತಂಡವು ಸ್ಥಳಕ್ಕೆ ಆಗಮಿಸಿ ಅರ್ಧ ಸುಟ್ಟ ದೇಹವನ್ನು ಹೊರತೆಗೆದಿದೆ ಎಂದು ಅವರು ಹೇಳಿದ್ದಾರೆ ಎಂದು ದೀನಾನಗರ ಪೊಲೀಸ್ ಠಾಣೆಯ ಉಸ್ತುವಾರಿ ಮೇಜರ್ ಸಿಂಗ್ ಹೇಳಿದ್ದಾರೆ.
ಸನ್ಸಾರ್ ಚಾಂದ್ ತನ್ನ ಪತ್ನಿಯೊಂದಿಗೆ ಜಗಳವಾಡುತ್ತಿದ್ದ ಮತ್ತು ಆಕೆಯ ಮೇಲೆ ಹಲ್ಲೆ ನಡೆಸುತ್ತಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಸಿಂಗ್ ಹೇಳಿದ್ದಾರೆ. ದಂಪತಿಯ ಮಗ ಹಿಮಾಚಲ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದಾನೆ.
ಪತಿ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಪತ್ನಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
Advertisement