

ಮುಂಬೈ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕೇಸರಿ ಬಟ್ಟೆ ವಿರುದ್ಧ ಮಹಾರಾಷ್ಟ್ರದ ಹಿರಿಯ ಕಾಂಗ್ರೆಸ್ ಮುಖಂಡ ಹುಸೇನ್ ದಳವಾಯಿ ವಿವಾದಾತ್ಮಾಕ ಹೇಳಿಕೆ ನೀಡಿದ್ದಾರೆ.
ಯೋಗಿ ಆದಿತ್ಯನಾಥ್ ಕೇಸರಿ ಬಣ್ಣದ ಬಟ್ಟೆ ಧರಿಸದೆ, ಆಧುನಿಕ ಯುಗದ ಬಣ್ಣ ಬಣ್ಣದ ಬಟ್ಟೆ ಧರಿಸುವಂತೆ ಹೇಳಿದ್ದಾರೆ. ಪ್ರತಿದಿನ ಧರ್ಮದ ಬಗ್ಗೆ ಮಾತನಾಡಬೇಡಿ, ಕೇಸರಿ ಬಟ್ಟೆ ಧರಿಸಬೇಡಿ, ಸ್ವಲ್ಪ ಆಧುನಿಕವಾಗಿ, ಆಧುನಿಕ ವಿಚಾರ ಬೆಳೆಸಿಕೊಳ್ಳಿ ಎಂದು ದಳವಾಯಿ ಹೇಳಿದ್ದಾರೆ.
ಮುಂದಿನ ತಿಂಗಳು ಲಖನೌದಲ್ಲಿ ಆಯೋಜಿಸಲಾಗಿರುವ ಜಾಗತಿಕ ಹೂಡಿಕೆದಾರರ ಸಮ್ಮೇಳನ ಹಿನ್ನೆಲೆಯಲ್ಲಿ ದೇಶದ ಹೂಡಿಕೆದಾರರನ್ನು ಸೆಳೆಯಲು ಮುಂಬೈಗೆ ಎರಡು ದಿನಗಳ ಭೇಟಿ ನೀಡಿರುವ ಯೋಗಿ ಆದಿತ್ಯನಾಥ್ ವಿರುದ್ಧ ಕಾಂಗ್ರೆಸ್ ನಾಯಕರು ಟೀಕಾ ಪ್ರಹಾರ ನಡೆಸುತ್ತಿದ್ದಾರೆ.
ಮಹಾರಾಷ್ಟ್ರದಿಂದ ಉದ್ಯಮಗಳನ್ನು ಉತ್ತರ ಪ್ರದೇಶಕ್ಕೆ ತೆಗೆದುಕೊಂಡು ಹೋಗುವ ಬದಲು ತನ್ನದೇ ರಾಜ್ಯದಲ್ಲಿ ಹೊಸದಾಗಿ ಉದ್ಯಮಗಳನ್ನು ಯೋಗಿ ಆದಿತ್ಯನಾಥ್ ಆರಂಭಿಸಲಿ ಎಂದು ಕಾಂಗ್ರೆಸ್ ಮುಖಂಡ ಸಲಹೆ ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ ಉದ್ಯಮಗಳಿಗೆ ಉತ್ತಮ ಸೌಕರ್ಯ ನೀಡಲಾಗಿದೆ. ಆದ್ದರಿಂದ ಇಲ್ಲಿಂದ ಕೈಗಾರಿಕೆಗಳನ್ನು ತೆಗೆದುಕೊಂಡು ಹೋಗುವ ಬದಲು ಅಲ್ಲಿಯೇ ಹೊಸ ಕೈಗಾರಿಕೆಗಳನ್ನು ಸ್ಥಾಪಿಸಿ, ಅವುಗಳು ಬೆಳವಣಿಗೆಯಾಗಲು ಪೂರಕ ಪರಿಸರವನ್ನು ಸೃಷಿಸಲಿ ಎಂದು ದಳವಾಯ್ ಸುದ್ದಿಗಾರರಿಗೆ ತಿಳಿಸಿದರು.
ಉದ್ಯಮಗಳು ಆಧುನಿಕತೆಯ ಸಂಕೇತವಾಗಿದ್ದು, ಸಿಎಂ ಯೋಗಿ ಆದಿತ್ಯನಾಥ್ ಕೆಲ ಆಧುನಿಕ ಸಿದ್ಧಾಂತಗಳಿಗೆ ಮುಜುಗರವನ್ನುಂಟು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಟೀಕಿಸಿದ್ದಾರೆ.