ಅಕ್ರಮ ಮೀನುಗಾರಿಕೆ; 15 ಭಾರತೀಯ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ
ರಾಮನಾಥಪುರಂ: ಸಮುದ್ರದ ಗಡಿ ದಾಟಿ ಅಕ್ರಮವಾಗಿ ಮೀನುಗಾರಿಕೆ ಮಾಡುತ್ತಿದ್ದ ಆರೋಪದ ಮೇಲೆ ರಾಮೇಶ್ವರಂ ಮೂಲದ ಎರಡು ದೋಣಿಗಳಲ್ಲಿದ್ದ 15 ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆಯು ಬಂಧಿಸಿದೆ. ಈ ಎಲ್ಲಾ 15 ಮೀನುಗಾರರನ್ನು ಮುಂದಿನ ಕ್ರಮಕ್ಕಾಗಿ ಮೈಲಾಡಿ ಮೀನುಗಾರಿಕೆ ಇಲಾಖೆಗೆ ಹಸ್ತಾಂತರಿಸಲಾಗಿದೆ.
ಹವಾಮಾನ ವೈಪರೀತ್ಯದಿಂದ ಒಂದು ವಾರದ ವಿರಾಮದ ನಂತರ, ರಾಮೇಶ್ವರಂನಿಂದ ಸುಮಾರು 400 ದೋಣಿಗಳಲ್ಲಿ ಸುಮಾರು 2,500 ಮೀನುಗಾರರು ಸಮುದ್ರಕ್ಕೆ ಹೋಗಿದ್ದರು. ಈ ವೇಳೆ ಮೀನುಗಾರಿಕೆ ಮಾಡುತ್ತಿದ್ದ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಶನಿವಾರ ರಾತ್ರಿ ಬೆನ್ನಟ್ಟಿದೆ ಎಂದು ಮೂಲಗಳು ತಿಳಿಸಿವೆ.
ಅದರಂತೆ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದ ಎರಡು ದೋಣಿಗಳನ್ನು ಶ್ರೀಲಂಕಾ ನೌಕಾಪಡೆ ವಶಪಡಿಸಿಕೊಂಡಿದೆ. ಈ ಎರಡೂ ದೋಣಿಗಳಲ್ಲಿ ಕ್ರಮವಾಗಿ ಏಳು ಮತ್ತು ಎಂಟು ಮೀನುಗಾರರಿದ್ದರು. ಐಎಂಬಿಎಲ್ ಉಲ್ಲಂಘನೆ ಆರೋಪದ ಮೇಲೆ ಶ್ರೀಲಂಕಾ ನೌಕಾಪಡೆಯು ಒಟ್ಟಾರೆಯಾಗಿ ಸುಮಾರು 15 ಮೀನುಗಾರರನ್ನು ಬಂಧಿಸಿದೆ.
ಶ್ರೀಲಂಕಾದ ಡೆಲ್ಫ್ಟ್ ದ್ವೀಪದಲ್ಲಿ ಅಕ್ರಮ ಮೀನುಗಾರಿಕೆಯಲ್ಲಿ ತೊಡಗಿದ್ದ ಭಾರತೀಯ ಮೀನುಗಾರರ ಎರಡು ಟ್ರಾಲರ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮುಂದಿನ ಕಾನೂನು ಕ್ರಮಗಳಿಗಾಗಿಗಿ ಬಂಧಿತರನ್ನು ಕಂಕಸಂತುರೈ ಬಂದರಿಗೆ ಕಳುಹಿಸಲಾಗಿದ್ದು, ಮೈಲಾಡಿ ಮೀನುಗಾರಿಕಾ ನಿರೀಕ್ಷಕರಿಗೆ ಹಸ್ತಾಂತರಿಸಲಾಗಿದೆ ಎಂದು ಶ್ರೀಲಂಕಾ ನೌಕಾಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಶ್ರೀಲಂಕಾ ನೌಕಾಪಡೆಯಿಂದ ತಮಿಳುನಾಡಿನ 22 ಮೀನುಗಾರರ ಬಂಧನ
2023 ರಲ್ಲಿ ಇಲ್ಲಿಯವರೆಗೆ ಶ್ರೀಲಂಕಾ ನೌಕಾಪಡೆಯು 12 ಭಾರತೀಯ ಮೀನುಗಾರರ ಟ್ರಾಲರ್ಗಳನ್ನು ಮತ್ತು 74 ಭಾರತೀಯ ಮೀನುಗಾರರನ್ನು ಬಂಧಿಸಿದೆ. ಶ್ರೀಲಂಕಾದ ಮೀನುಗಾರರ ಹಿತದೃಷ್ಟಿಯಿಂದ ಕಾನೂನು ಕ್ರಮಕ್ಕಾಗಿ ಅಧಿಕಾರಿಗಳಿಗೆ ಹಸ್ತಾಂತರಿಸಿದೆ ಎಂದು ನೌಕಾಪಡೆ ತಿಳಿಸಿದೆ.
ಬಂಧಿತ ಮೀನುಗಾರರನ್ನು ಕೂಡಲೇ ಬಿಡುಗಡೆ ಮಾಡಲು ಮತ್ತು ದೀರ್ಘಕಾಲದ ಸಮಸ್ಯೆಗಳನ್ನು ಪರಿಹರಿಸಲು ತಮಿಳುನಾಡು ಮತ್ತು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮೀನುಗಾರರ ಸಂಘ ಒತ್ತಾಯಿಸಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ