'INDIA' ಮೈತ್ರಿಕೂಟವು 'ಭಾರತ್' ಎಂದು ಮರುನಾಮಕರಣ ಮಾಡಿಕೊಂಡರೆ, ಬಿಜೆಪಿ ಮತ್ತೆ ಹೆಸರು ಬದಲಿಸುತ್ತದೆಯೇ: ಅರವಿಂದ್ ಕೇಜ್ರಿವಾಲ್

ರಾಷ್ಟ್ರಪತಿಗಳ ಕಚೇರಿಯಿಂದ ಜಿ20 ಪ್ರತಿನಿಧಿಗಳಿಗೆ ಕಳುಹಿಸಲಾದ ಔತಣಕೂಟದ ಆಮಂತ್ರಣದಲ್ಲಿ ದ್ರೌಪದಿ ಮುರ್ಮು ಅವರನ್ನು 'ಪ್ರೆಸಿಡೆಂಟ್ ಆಫ್ ಇಂಡಿಯಾ' ಬದಲಿಗೆ 'ಪ್ರೆಸಿಡೆಂಟ್ ಆಫ್ ಭಾರತ್' ಎಂದು ನಮೂದಿಸಿರುವುದು ವಿವಾದಕ್ಕೆ ಕಾರಣವಾಗಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಂಗಳವಾರ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್

ನವದೆಹಲಿ: ರಾಷ್ಟ್ರಪತಿಗಳ ಕಚೇರಿಯಿಂದ ಜಿ20 ಪ್ರತಿನಿಧಿಗಳಿಗೆ ಕಳುಹಿಸಲಾದ ಔತಣಕೂಟದ ಆಮಂತ್ರಣದಲ್ಲಿ ದ್ರೌಪದಿ ಮುರ್ಮು ಅವರನ್ನು 'ಪ್ರೆಸಿಡೆಂಟ್ ಆಫ್ ಇಂಡಿಯಾ' ಬದಲಿಗೆ 'ಪ್ರೆಸಿಡೆಂಟ್ ಆಫ್ ಭಾರತ್' ಎಂದು ನಮೂದಿಸಿರುವುದು ವಿವಾದಕ್ಕೆ ಕಾರಣವಾಗಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಂಗಳವಾರ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಒಂದು ವೇಳೆ ವಿರೋಧ ಪಕ್ಷಗಳ ಮೈತ್ರಿಕೂಟವಾದ ಇಂಡಿಯಾವು ತನ್ನ ಹೆಸರನ್ನು 'ಭಾರತ್' ಎಂದು ಮರುನಾಮಕರಣ ಮಾಡಿದರೆ, 'ಗೊಂದಲಕ್ಕೊಳಗಾದ' ಬಿಜೆಪಿ ಆಗ ಮತ್ತೆ ಭಾರತ್ ಹೆಸರನ್ನು ಬದಲಾಯಿಸುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.

ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಜಿ20 ಶೃಂಗಸಭೆ ನಿಮಿತ್ತ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಿರುವ ಔತಣಕೂಟಕ್ಕೆಂದು ಕಳುಹಿಸಿರುವ ಆಹ್ವಾನ ಪತ್ರಿಕೆಯಲ್ಲಿ ರಾಷ್ಟ್ರಪತಿಯನ್ನು 'ಪ್ರೆಸಿಡೆಂಟ್ ಆಫ್ ಇಂಡಿಯಾ' ಬದಲಿಗೆ 'ಪ್ರೆಸಿಡೆಂಟ್ ಆಫ್ ಭಾರತ್' ಎಂದು ಉಲ್ಲೇಖಿಸಿದೆ ಎಂದು ಮಂಗಳವಾರ ಆರೋಪಿಸಿದೆ.

'ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ ಆದರೆ ನಾನು ವದಂತಿಗಳನ್ನು ಕೇಳಿದ್ದೇನೆ. ಇದು ಏಕೆ ನಡೆಯುತ್ತಿದೆ? ಕೆಲವು ವಿರೋಧ ಪಕ್ಷಗಳು ಒಗ್ಗೂಡಿ INDIA ಮೈತ್ರಿಕೂಟವನ್ನು ರಚಿಸಿವೆ. ಒಂದು ವೇಳೆ INDIA ಮೈತ್ರಿಕೂಟವು ತನ್ನ ಹೆಸರನ್ನು 'ಭಾರತ್' ಬದಲಾಯಿಸಿದರೆ, ಅವರು (ಬಿಜೆಪಿ) ಭಾರತ್ ಹೆಸರನ್ನು ಮರುನಾಮಕರಣ ಮಾಡುತ್ತಾರೆಯೇ?' ಎಂದು ಕೇಜ್ರಿವಾಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

'ಇದು ದೇಶದ್ರೋಹ. ವಿರೋಧ ಪಕ್ಷದ ಮೈತ್ರಿಯಿಂದಾಗಿ ಬಿಜೆಪಿ ಎಷ್ಟು ವಿಚಲಿತವಾಗಿದೆಯೆಂದರೆ, ಮೈತ್ರಿಯನ್ನು ಮೊದಲು ಘೋಷಿಸಿದಾಗ ಅದು (ಕೇಂದ್ರ ಸರ್ಕಾರ) ತನ್ನ 'ಒಂದು ರಾಷ್ಟ್ರ, ಒಂದು ಚುನಾವಣೆ' ಪ್ರಸ್ತಾಪದೊಂದಿಗೆ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸಿತು' ಎಂದು ದೂರಿದರು.

ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮದ ಕುರಿತು ನೀಡಿರುವ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಕೇಜ್ರಿವಾಲ್, ಜನರು ಎಲ್ಲಾ ಧರ್ಮಗಳನ್ನು ಗೌರವಿಸಬೇಕು ಎಂದರು. 

'ನಾನು ಸನಾತನ ಧರ್ಮದಿಂದ ಬಂದವನು. ನಿಮ್ಮಲ್ಲಿ ಹಲವರು ಸನಾತನ ಧರ್ಮಕ್ಕೆ ಸೇರಿದವರು. ನಾವು ಪರಸ್ಪರರ ಧರ್ಮವನ್ನು ಗೌರವಿಸಬೇಕು ಮತ್ತು ಅದರ ವಿರುದ್ಧ ತಪ್ಪಾಗಿ ಮಾತನಾಡಬಾರದು' ಎಂದು ಅವರು ಹೇಳಿದರು.

'ಸನಾತನ ಧರ್ಮ' ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಸನಾತನ ಧರ್ಮವನ್ನು ವಿರೋಧಿಸುವ ಬದಲು ಅದನ್ನು ನಿರ್ಮೂಲನೆ ಮಾಡಬೇಕು ಎಂದು ತಮಿಳುನಾಡು ಯುವ ಕಲ್ಯಾಣ ಸಚಿವ ಉದಯನಿಧಿ ಸ್ಟಾಲಿನ್ ಶನಿವಾರ (ಸೆಪ್ಟೆಂಬರ್ 2) ಹೇಳಿದ್ದಾರೆ. 

'ಕೆಲವು ವಿಷಯಗಳನ್ನು ವಿರೋಧಿಸಲು ಸಾಧ್ಯವಿಲ್ಲ. ಅವುಗಳನ್ನು ನಿರ್ಮೂಲನೆ ಮಾಡಬೇಕು. ನಾವು ಡೆಂಗ್ಯು, ಮಲೇರಿಯಾ ಅಥವಾ ಕೊರೊನಾವೈರಸ್ ಅನ್ನು ವಿರೋಧಿಸಲು ಸಾಧ್ಯವಿಲ್ಲ. ಬದಲಿಗೆ ನಾವು ಅವುಗಳನ್ನು ನಿರ್ಮೂಲನೆ ಮಾಡಬೇಕು. ಅದೇ ರೀತಿ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ಅವರು ಶನಿವಾರ ಹೇಳಿದ್ದಾರೆ.

ಚೆನ್ನೈನಲ್ಲಿ ನಡೆದ ತಮಿಳುನಾಡು ಪ್ರಗತಿಪರ ಲೇಖಕರು ಮತ್ತು ಕಲಾವಿದರ ಸಂಘದ ಸಭೆಯಲ್ಲಿ ಅವರು ತಮಿಳಿನಲ್ಲಿ ಮಾಡಿದ ಭಾಷಣದಲ್ಲಿ ಸನಾತನ ಧರ್ಮವನ್ನು 'ಸನಾತನಂ' ಎಂದು ಉಲ್ಲೇಖಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com