ದೆಹಲಿಯಲ್ಲಿ ಜಿ20 ಶೃಂಗಸಭೆ: ಗಮನ ಸೆಳೆಯುತ್ತಿದೆ ಒಡಿಶಾ ಸೂರ್ಯ ದೇಗುಲದ ಕೋನಾರ್ಕ್ ಚಕ್ರ

ರಾಷ್ಟ್ರ ರಾಜಧಾನಿ ನವದೆಹಲಿಯ ಜಿ20 ಶೃಂಗಸಭೆ ಶನಿವಾರ ಆರಂಭಗೊಂಡಿದ್ದು, ಪ್ರಗತಿ ಮೈದಾನದಲ್ಲಿರುವ ಭಾರತ ಮಂಟಪದಲ್ಲಿ ಜಿ20 ನಾಯಕರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬರಮಾಡಿಕೊಂಡರು.
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯ ಜಿ20 ಶೃಂಗಸಭೆ ಶನಿವಾರ ಆರಂಭಗೊಂಡಿದ್ದು, ಪ್ರಗತಿ ಮೈದಾನದಲ್ಲಿರುವ ಭಾರತ ಮಂಟಪದಲ್ಲಿ ಜಿ20 ನಾಯಕರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬರಮಾಡಿಕೊಂಡರು.

ಹಸ್ತಲಾಘವ ನೀಡುವ ಮೂಲಕ ಜಿ20 ನಾಯಕರನ್ನು ಪ್ರಧಾನಿ ಮೋದಿಯವರು ಸ್ವಾಗತಿಸಿದರು. ಈ ವೇಳೆ ಸ್ಥಳದ ಹಿಂಬದಿಯಲ್ಲಿ ಒಡಿಶಾದ ಸೂರ್ಯ ದೇಗುಲದ ಕೋನಾರ್ಕ್ ಚಕ್ರವನ್ನು ಪ್ರದರ್ಶಿಸಲಾಗಿದ್ದು, ಇದು ಎಲ್ಲರ ಗಮನ ಸೆಳೆಯುತ್ತಿದೆ.

ಶೃಂಗಸಭೆಯ ಹಿನ್ನೆಲೆಯಲ್ಲಿ ರಾಷ್ಟ್ರದ ರಾಜಧಾನಿಯಾದ್ಯಂತ ಸರ್ಕಾರವು ಅನೇಕ ಸಾಂಸ್ಕೃತಿಕ ಸಂಕೇತಗಳನ್ನು ಸ್ಥಾಪನೆ ಮಾಡಿದ್ದು, ಇದರಲ್ಲಿ ಕೋನಾರ್ಕ್‌ ಚಕ್ರವೂ ಒಂದಾಗಿದೆ. ‘ಒಂದು ಭೂಮಿ’ ಶೀರ್ಷಿಕೆಯ ಮೊದಲ ಅಧಿವೇಶನ ಇಂದು ಬೆಳಗ್ಗೆ 10.30ಕ್ಕೆ ಆರಂಭಗೊಂಡಿದೆ. ಇದು ಭಾರತದ ಅಧ್ಯಕ್ಷತೆಯಲ್ಲಿನ ಈ ವರ್ಷದ ಶೃಂಗಸಭೆಯ ಥೀಮ್‌ “ವಸುಧೈವ ಕುಟುಂಬಕಂ”ಗೆ ಅನುಗುಣವಾಗಿದೆ.

ಕೋನಾರ್ಕ್ ಚಕ್ರವನ್ನು 13 ನೇ ಶತಮಾನದಲ್ಲಿ ರಾಜ ನರಸಿಂಹದೇವ-I ರ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. 24 ಕಡ್ಡಿಗಳ ಚಕ್ರವನ್ನು ಭಾರತದ ರಾಷ್ಟ್ರೀಯ ಧ್ವಜಕ್ಕೆ ಅಳವಡಿಸಲಾಗಿದೆ ಮತ್ತು ಭಾರತದ ಪ್ರಾಚೀನ ಬುದ್ಧಿವಂತಿಕೆ, ಮುಂದುವರಿದ ನಾಗರಿಕತೆ ಮತ್ತು ಕೃಷಿ ಶ್ರೇಷ್ಠತೆಯನ್ನು ಸಾರುತ್ತದೆ.

ಕೋನಾರ್ಕ್ ಚಕ್ರದ ತಿರುಗುವ ಚಲನೆಯು ಸಮಯ ಮತ್ತು ಪ್ರಗತಿ ಮತ್ತು ನಿರಂತರ ಬದಲಾವಣೆಯನ್ನು ಸಂಕೇತಿಸುತ್ತದೆ. ಇದು ಪ್ರಜಾಪ್ರಭುತ್ವದ ಚಕ್ರದ ಸಂಕೇತವಾಗಿ ಕಾರ್ಯನಿರ್ವಹಿಸುತ್ತದೆ, ಇದು ಪ್ರಜಾಪ್ರಭುತ್ವದ ಆದರ್ಶಗಳ ಸ್ಥಿತಿಸ್ಥಾಪಕತ್ವ ಮತ್ತು ಸಮಾಜದಲ್ಲಿ ಪ್ರಗತಿಗೆ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ಪ್ರಧಾನಿ ಮೋದಿಯವರು ಇಂದು ಭಾರತ್ ಮಂಟಪದಲ್ಲಿ ಜಿ20 ನಾಯಕರಿಗೆ “ವರ್ಕಿಂಗ್‌ ಲಂಚ್”‌ ಅನ್ನು ಆಯೋಜಿಸಲಿದ್ದಾರೆ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗಾಗಿ ಭೋಜನಕೂಟವನ್ನು ಏರ್ಪಡಿಸಲಿದ್ದಾರೆ.

ಈ ವರ್ಷದ ಶೃಂಗಸಭೆಯ ಥೀಮ್ ವಸುಧೈವ ಕುಟುಂಬಕಂ ಅಥವಾ ‘ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’. ಇದನ್ನು ಮಹಾ ಉಪನಿಷತ್ತಿನ ಪ್ರಾಚೀನ ಸಂಸ್ಕೃತ ಪಠ್ಯದಿಂದ ಪಡೆಯಲಾಗಿದೆ.

ವಿಶ್ವದ ಅಗ್ರಗಣ್ಯರ ಎರಡು ದಿನಗಳ ಸಭೆಯನ್ನು ಆಯೋಜಿಸಲು ಪ್ರಧಾನಿ ಮೋದಿ ಇಂದು ಬೆಳಿಗ್ಗೆ ಭಾರತ್ ಮಂಟಪವನ್ನು ತಲುಪಿದ್ದು, ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡಿಪಿವಾಲ್ ಸೇರಿದಂತೆ ಇತರರು ಅವರಿಗೆ ಸಾಥ್‌ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com