ಹೈದರಾಬಾದ್: ಮುಂಬರುವ ರಾಜ್ಯ ಮತ್ತು ಲೋಕಸಭೆ ಚುನಾವಣೆಗಳಲ್ಲಿ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಪಕ್ಷದ ಯಶಸ್ಸಿಗೆ ಆದ್ಯತೆ ನೀಡಬೇಕು ಮತ್ತು ಎದುರಾಳಿಗಳನ್ನು ಪೂರ್ಣ ಶಕ್ತಿಯಿಂದ ಎದುರಿಸಬೇಕೆಂದು ಪಕ್ಷದ ನಾಯಕರಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾನುವಾರ ಹೇಳಿದ್ದಾರೆ.
ಎರಡನೇ ದಿನದ ಸಿಡಬ್ಲ್ಯುಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಖರ್ಗೆ, 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದು ಮತ್ತು ದೇಶದಲ್ಲಿ ಪರ್ಯಾಯ ಸರ್ಕಾರ ರಚಿಸಲು ಶ್ರದ್ಧೆಯಿಂದ ಕೆಲಸ ಮಾಡುವುದು ಪಕ್ಷದ ಗುರಿಯಾಗಬೇಕು ಎಂದರು.
ಮೋದಿ ಸರ್ಕಾರದ ವಿರುದ್ಧ ಕಟುವಾಗಿ ವಾಗ್ದಾಳಿ ನಡೆಸಿದ ಅವರು, ಬಿಜೆಪಿ ರಾಜಕೀಯ ಮಾಡುತ್ತಿದೆ ಮತ್ತು ಹೊಸದೇನನ್ನೋ ತರುವ ಮೂಲಕ ಜನರನ್ನು ಮೂಲಭೂತ ಸಮಸ್ಯೆಗಳಿಂದ ದಿಕ್ಕು ತಪ್ಪಿಸುತ್ತಿದೆ. ಇತ್ತೀಚೆಗೆ, ಇಂಡಿಯಾ ಮೈತ್ರಿಕೂಟದ ಮುಂಬೈ ಸಭೆಯ ಸಮಯದಲ್ಲಿ, ಮೋದಿ ಸರ್ಕಾರವು 'ಒಂದು ರಾಷ್ಟ್ರ, ಒಂದು ಚುನಾವಣೆ' ಕುರಿತು ಸಮಿತಿಯನ್ನು ರಚಿಸಿತು. ಎಲ್ಲಾ ಸಂಪ್ರದಾಯಗಳಿಗೆ ವಿರುದ್ಧವಾಗಿ ಸಮಿತಿಗೆ ಮಾಜಿ ರಾಷ್ಟ್ರಪತಿಯನ್ನು ಸಹ ಸೇರಿಸಿದೆ' ಎಂದು ಹೇಳಿದರು.
ಐದು ರಾಜ್ಯಗಳಲ್ಲಿ ಇನ್ನೆರಡ್ಮೂರು ತಿಂಗಳಲ್ಲಿ ಚುನಾವಣೆ ನಡೆಯಲಿದ್ದು, ಲೋಕಸಭೆ ಚುನಾವಣೆಗೆ ಇನ್ನು ಆರು ತಿಂಗಳು ಮಾತ್ರ ಬಾಕಿ ಇದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಭವನೀಯ ವಿಧಾನಸಭಾ ಚುನಾವಣೆಗೆ ಕೂಡ ಪಕ್ಷವು ಸಿದ್ಧವಾಗಿರಬೇಕು ಎಂದು ಖರ್ಗೆ ಹೇಳಿದರು.
ಛತ್ತೀಸಗಢ ಮತ್ತು ರಾಜಸ್ಥಾನದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರಗಳು 'ಸಾಮಾಜಿಕ ನ್ಯಾಯ ಮತ್ತು ಕಲ್ಯಾಣದ ಹೊಸ ಮಾದರಿ' ನೀಡಿವೆ ಮತ್ತು ದೇಶದಾದ್ಯಂತ ಈ ಕಲ್ಯಾಣ ಕಾರ್ಯಕ್ರಮಗಳನ್ನು ಪ್ರಚಾರ ಮಾಡಬೇಕು. ಜನರು ಪರ್ಯಾಯವನ್ನು ಹುಡುಕುತ್ತಿದ್ದಾರೆ. ಹಿಮಾಚಲ ಪ್ರದೇಶ ಮತ್ತು ಕರ್ನಾಟಕ ಚುನಾವಣೆಗಳಲ್ಲಿ ಪಕ್ಷದ ಗೆಲುವು ಇದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ ಎಂದು ಖರ್ಗೆ ಪ್ರತಿಪಾದಿಸಿದರು.
ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗೊತ್ತಿ ಅವಿರತವಾಗಿ ಕೆಲಸ ಮಾಡಬೇಕು. ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಪಕ್ಷದ ಯಶಸ್ಸಿಗೆ ಆದ್ಯತೆ ನೀಡಬೇಕು. ಮುಖಂಡರು ಸ್ವಯಂ ಸಂಯಮದಿಂದ ತಮ್ಮ ಪಕ್ಷದ ಸಹೋದ್ಯೋಗಿಗಳು ಪಕ್ಷದ ವಿರುದ್ಧ ಮತ್ತು ಮಾಧ್ಯಮಗಳಲ್ಲಿ ಮುಖಂಡರ ವಿರುದ್ಧ ಹೇಳಿಕೆ ನೀಡುವುದನ್ನು ತಪ್ಪಿಸಬೇಕು. ನಮ್ಮ ವಿರೋಧಿಗಳನ್ನು ಸೋಲಿಸಿ, ಇದು ಕರ್ನಾಟಕದಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ. ಅಲ್ಲಿ ನಾವು ಯಶಸ್ಸನ್ನು ಸಾಧಿಸಲು ಒಗ್ಗಟ್ಟು ಮತ್ತು ಶಿಸ್ತಿನಿಂದ ಹೋರಾಡಿದ್ದೇವೆ ಎಂದು ಅವರು ಹೇಳಿದರು.
2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದು ಮತ್ತು ದೇಶದಲ್ಲಿ ಪರ್ಯಾಯ ಸರ್ಕಾರ ರಚಿಸಲು ಶ್ರದ್ಧೆಯಿಂದ ಕೆಲಸ ಮಾಡುವುದು ನಮ್ಮ ಗುರಿಯಾಗಬೇಕು. ಮುಂದೆ ಸವಾಲುಗಳಿವೆ. ಈ ಸವಾಲುಗಳು ಕೇವಲ ಕಾಂಗ್ರೆಸ್ನ ಸವಾಲುಗಳಲ್ಲ ಮತ್ತು ಅವು ಭಾರತೀಯ ಪ್ರಜಾಪ್ರಭುತ್ವದ ಉಳಿವು ಮತ್ತು ಭಾರತೀಯ ಸಂವಿಧಾನದ ಸಂರಕ್ಷಣೆಗೆ ಸಂಬಂಧಿಸಿವೆ ಎಂದು ಹೇಳಿದರು.
ಇದು ನಾವು ವಿಶ್ರಾಂತಿ ಪಡೆಯುವ ಸಮಯವಲ್ಲ. ಕಳೆದ 10 ವರ್ಷಗಳಲ್ಲಿ ಬಿಜೆಪಿ ಆಡಳಿತದಲ್ಲಿ ಸಾಮಾನ್ಯ ಜನರು ಎದುರಿಸುತ್ತಿರುವ ಸವಾಲುಗಳು ಹೆಚ್ಚಾಗಿವೆ. ಪ್ರಧಾನಿ (ನರೇಂದ್ರ ಮೋದಿ) ಬಡವರು, ರೈತರು, ಕಾರ್ಮಿಕರು, ಮಹಿಳೆಯರು ಮತ್ತು ಯುವಕರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲರಾಗಿದ್ದಾರೆ. ಇಂತಹ ಸಂದರ್ಭಗಳಲ್ಲಿ, ನಾವು ಮೂಕ ಪ್ರೇಕ್ಷಕರಾಗಿ ಉಳಿಯಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವವನ್ನು ಉಳಿಸಲು ನಾಯಕರು ಒಗ್ಗೂಡಿ, 'ಈ ಸರ್ವಾಧಿಕಾರಿ ಸರ್ಕಾರ'ವನ್ನು ಕಿತ್ತೊಗೆಯಬೇಕು ಎಂದು ಖರ್ಗೆ ಒತ್ತಾಯಿಸಿದರು.
2024ಕ್ಕೆ ಮಹಾತ್ಮ ಗಾಂಧಿಯವರು ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿ ಶತಮಾನೋತ್ಸವವಾಗುತ್ತದೆ. ಹೀಗಾಗಿ, 2024 ರಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯುವುದೇ ಮಹಾತ್ಮರಿಗೆ ಅತ್ಯಂತ ಸೂಕ್ತವಾದ ಗೌರವ. ತೆಲಂಗಾಣದಿಂದ, ನಾವು ಹೊಸ ಶಕ್ತಿ ಮತ್ತು ಸ್ಪಷ್ಟ ಸಂದೇಶದೊಂದಿಗೆ ಹೋಗುತ್ತೇವೆ. ನಾವು ಇಂದು ಹೈದರಾಬಾದ್ನಿಂದ ದೃಢವಾದ ಬದ್ಧತೆಯೊಂದಿಗೆ ಹೊರಡುತ್ತೇವೆ. ಬಿಜೆಪಿಯ ದುರಾಡಳಿತದ ದುಃಖದಿಂದ ಜನರನ್ನು ಮುಕ್ತಗೊಳಿಸಲು ತೆಲಂಗಾಣದಲ್ಲಿ ಮಾತ್ರವಲ್ಲದೆ ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಗೆಲ್ಲುತ್ತೇವೆ' ಎಂದು ಅವರು ಹೇಳಿದರು.
Advertisement