ಹರ್ಯಾಣ ಗಲಭೆ ಕುರಿತು ಪ್ರಚೋದನಕಾರಿ ಪೋಸ್ಟ್; ಟಿವಿ ಚಾನೆಲ್ ಎಡಿಟರ್ ಬಂಧನ
ಗುರುಗ್ರಾಮ: ಹರ್ಯಾಣದ ನುಹ್ ನಲ್ಲಿ ನಡೆದಿದ್ದ ಕೋಮು ಗಲಭೆ ವೇಳೆ ಪ್ರಚೋದನಕಾರಿ ಪೋಸ್ಟ್ ಮಾಡಿದ ಆರೋಪದಡಿಯಲ್ಲಿ ಟಿವಿ ಚಾನೆಲ್ ಸಂಪಾದಕನನ್ನು ಹರ್ಯಾಣ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಹರ್ಯಾಣದ ಸ್ಥಳೀಯ ಸುದರ್ಶನ್ ನ್ಯೂಸ್ ಸಂಪಾದಕ ಹಾಗೂ ಟಿವಿ ಚಾನೆಲ್ನ ವ್ಯವಸ್ಥಾಪಕ ಸಂಪಾದಕ ಮುಖೇಶ್ ಕುಮಾರ್ ಎಂಬುವವರನ್ನು ಗುರುಗ್ರಾಮ್ನಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹರ್ಯಾಣದ ನುಹ್ ಮತ್ತು ಅದರ ಪಕ್ಕದ ಜಿಲ್ಲೆಗಳಲ್ಲಿ ನಡೆದ ಕೋಮು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಆಪಾದಿತ ವ್ಯಕ್ತಿ ಪ್ರಚೋದನಕಾರಿ ಪೋಸ್ಟ್ಗಳನ್ನು ಮಾಡಿದ ಹಿನ್ನಲೆಯಲ್ಲಿ ಗುರುಗ್ರಾಮ್ ಸೈಬರ್ ಠಾಣೆ ಪೂರ್ವ ಪೊಲೀಸರು ಮುಖೇಶ್ ಕುಮಾರ್ ಅವರನ್ನು ಬಂಧಿಸಿದ್ದಾರೆ.
ಜುಲೈ 31 ರಂದು ವಿಶ್ವ ಹಿಂದೂ ಪರಿಷತ್ತ್ ಮೆರವಣಿಗೆಯ ಮೇಲೆ ದಾಳಿ ಮಾಡಿದ ನಂತರ ನುಹ್ನಲ್ಲಿ ಭುಗಿಲೆದ್ದ ಕೋಮು ಹಿಂಸಾಚಾರದಲ್ಲಿ ಆರು ಜನರು ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಪೊಲೀಸರು ಈ ವರೆಗೂ 150ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದು, 100ಕ್ಕೂ ಅಧಿಕ ಎಫ್ಐಆರ್ ಗಳನ್ನು ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ