ಶ್ರೀನಗರ: ಆಘಾತಕಾರಿ ಮತ್ತು ವಿಲಕ್ಷಣ ಘಟನೆಯೊಂದರಲ್ಲಿ, ವ್ಯಕ್ತಿಯೊಬ್ಬ 30 ವರ್ಷದ ಮಹಿಳೆಯ ತಲೆಯನ್ನು ಕತ್ತರಿಸಿ ದೇಹವನ್ನು ತುಂಡುಗಳಾಗಿ ಕತ್ತರಿಸಿ ಮತ್ತು ಭಾಗಗಳನ್ನು ಮಧ್ಯ ಕಾಶ್ಮೀರದ ಬುಡ್ಗಾಂ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಹೂತುಹಾಕಿರುವ ಘಟನೆ ವರದಿಯಾಗಿದೆ.
ಮಾರ್ಚ್ 8 ರಂದು ಮಧ್ಯ ಕಾಶ್ಮೀರದ ಬುಡ್ಗಾಂ ಜಿಲ್ಲೆಯ ಸೋಬುಗ್ನ ತನ್ವೀರ್ ಅಹ್ಮದ್ ಖಾನ್ ಎಂಬಾತ ತನ್ನ 30 ವರ್ಷದ ಸಹೋದರಿ ಮಾರ್ಚ್ 7 ರಿಂದ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಹಿಳೆ ಮಾರ್ಚ್ 7 ರಂದು ಮನೆಯಿಂದ ಕೋಚಿಂಗ್ ತರಗತಿಗಳಿಗೆ ಹೋಗಿದ್ದರು ಆದರೆ ಸಂಜೆ ಮನೆಗೆ ಹಿಂತಿರುಗಿರಲಿಲ್ಲ. ಬಳಿಕ, ಪೊಲೀಸರು ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದರು.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಶಬೀರ್ ಅಹ್ಮದ್ ವಾನಿ ಆರ್/ಒ ಮೋಹನ್ಪೋರಾ ಸೇರಿದಂತೆ ಹಲವು ಶಂಕಿತರನ್ನು ಬಂಧಿಸಿದ್ದಾರೆ. ನಿರಂತರ ವಿಚಾರಣೆಯ ವೇಳೆ ಶಬೀರ್, ನಾಪತ್ತೆಯಾಗಿರುವ ಮಹಿಳೆಯ ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ ತಾನು ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವೃತ್ತಿಯಲ್ಲಿ ಬಡಗಿಯಾಗಿರುವ ಆರೋಪಿಯು, ಮಹಿಳೆಯನ್ನು ಕೊಂದ ನಂತರ ಆಕೆಯ ತಲೆಯನ್ನು ಕತ್ತರಿಸಿ, ದೇಹವನ್ನು ತುಂಡುತುಂಡುಗಳಾಗಿ ಕತ್ತರಿಸಿದ್ದಾನೆ. ನಂತರ ದೇಹದ ಒಂದೊಂದೆ ಭಾಗಗಳನ್ನು ವಿವಿಧ ಸ್ಥಳಗಳಲ್ಲಿ ಹೂತು ಹಾಕಿರುವುದಾಗಿ ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ.
ಆರೋಪಿ ನೀಡಿದ ಮಾಹಿತಿ ಮೇರೆಗೆ, ಸಂತ್ರಸ್ತೆಯ ದೇಹದ ಭಾಗಗಳನ್ನು ವಶಪಡಿಸಿಕೊಳ್ಳಲಾಗಿದೆ. ವೈದ್ಯಕೀಯ-ಕಾನೂನು ವಿಧಿವಿಧಾನಗಳು ನಡೆಯುತ್ತಿವೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ ಅಧಿಕಾರಿಯೊಬ್ಬರು ತಿಳಿಸಿದರು.
ಈ ಆಘಾತಕಾರಿ ಘಟನೆಯು ಕಣಿವೆಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದು, ಇಂತಹ ಘಟನೆಗಳು ನಡೆಯದಂತೆ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಜನರು ಒತ್ತಾಯಿಸಿದ್ದಾರೆ.
ಇದಕ್ಕೂ ಮೊದಲು, ಕಳೆದ ವರ್ಷ ನವೆಂಬರ್ನಲ್ಲಿ, ದೆಹಲಿಯಲ್ಲಿ ಕೂಡ ಇದೇ ರೀತಿಯ ಘಟನೆ ವರದಿಯಾದ ನಂತರ ದೇಶವು ಬೆಚ್ಚಿಬಿದ್ದಿತ್ತು. ಅಲ್ಲಿ ಅಫ್ತಾಬ್ ಅಮೀನ್ ಪೂನಾವಾಲಾ ಎಂಬಾತ ತನ್ನ ಲಿವ್-ಇನ್ ಪಾರ್ಟ್ನರ್ ಆಗಿದ್ದ ಶ್ರದ್ಧಾಳನ್ನು ಬರ್ಬರವಾಗಿ ಕೊಂದು, ದೇಹದ 35 ಭಾಗಗಳನ್ನು ವಿವಿಧೆಡೆ ಎಸೆದಿದ್ದ.
Advertisement