ಪ್ರಧಾನಿ ಕಚೇರಿ ಅಧಿಕಾರಿ ಸೋಗಿನಲ್ಲಿ 'ಐಷಾರಾಮಿ' ಪ್ರವಾಸ: ಗುಜರಾತ್ ವಂಚಕನ ಬಗ್ಗೆ ಮೋದಿ ಪ್ರತಿಕ್ರಿಯೆಗೆ ಕಾಂಗ್ರೆಸ್ ಆಗ್ರಹ
ಪ್ರಧಾನ ಮಂತ್ರಿ ಕಚೇರಿಯ ಅಧಿಕಾರಿಯ ಸೋಗಿನಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿ, ಝಡ್ ಪ್ಲಸ್ ಭದ್ರತೆಯೊಂದಿಗೆ 'ಐಷಾರಾಮಿ' ಪ್ರವಾಸ ಮಾಡಿದ ಗುಜರಾತ್ ವಂಚಕ ಕಿರಣ್ ಪಟೇಲ್ ವಿರುದ್ಧ ಕಠಿಣ...
Published: 17th March 2023 07:40 PM | Last Updated: 17th March 2023 07:40 PM | A+A A-

ವಂಚಕ ಕಿರಣ್ ಪಟೇಲ್
ಅಹಮದಾಬಾದ್: ಪ್ರಧಾನ ಮಂತ್ರಿ ಕಚೇರಿಯ ಅಧಿಕಾರಿಯ ಸೋಗಿನಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿ, ಝಡ್ ಪ್ಲಸ್ ಭದ್ರತೆಯೊಂದಿಗೆ 'ಐಷಾರಾಮಿ' ಪ್ರವಾಸ ಮಾಡಿದ ಗುಜರಾತ್ ವಂಚಕ ಕಿರಣ್ ಪಟೇಲ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗುಜರಾತ್ ಕಾಂಗ್ರೆಸ್ ಶುಕ್ರವಾರ ಒತ್ತಾಯಿಸಿದೆ.
ಇಂದು ಅಹಮದಾಬಾದ್ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಗುಜರಾತ್ ಕಾಂಗ್ರೆಸ್ ವಕ್ತಾರ ಮನೀಶ್ ದೋಷಿ, "ಜಮ್ಮು ಮತ್ತು ಕಾಶ್ಮೀರ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು, ಕಿರಣ್ ಪಟೇಲ್ ಎಂಬ ವಂಚಕ ಪಿಎಂಒ ಅಧಿಕಾರಿ ಎಂದು ಹೇಳಿಕೊಂಡು ಝಡ್ ಪ್ಲಸ್ ಭದ್ರತೆ ಪಡೆದಿರುವುದು ಆತಂಕಕಾರಿ ಬೆಳವಣಿಗೆ. ವಿಶೇಷವಾಗಿ ಇದು ರಾಷ್ಟ್ರೀಯ ಭದ್ರತೆಗೆ ಅಪಾಯ ಎಂದು ಹೇಳಿದ್ದಾರೆ.
ಇದನ್ನು ಓದಿ: ನಟಿ ಸ್ವರ ಭಾಸ್ಕರ್-ಫಹಾದ್ ಅಹ್ಮದ್ 'ಶಾದಿ' ರಿಸೆಪ್ಷನ್ ಗೆ ತೆರಳಿ ಶುಭಕೋರಿದ ರಾಹುಲ್ ಗಾಂಧಿ
ಪ್ರಧಾನಿ ಕಚೇರಿಯ ಅಧಿಕಾರಿ ಸೋಗಿನಲ್ಲಿ ಕಾಶ್ಮೀರಕ್ಕೆ ಭೇಟಿ ನೀಡಿದ ಗುಜರಾತ್ ವಂಚಕ ಕಿರಣ್ ಪಟೇಲ್ ಬಗ್ಗೆ ಪ್ರಧಾನಿ ಮೋದಿ ಪ್ರತಿಕ್ರಿಯೆ ನೀಡಬೇಕು ಎಂದು ಮನೀಶ್ ದೋಷಿ ಅವರು ಆಗ್ರಹಿಸಿದ್ದಾರೆ.
ಪಟೇಲ್ ತಾನು ಪ್ರಧಾನ ಮಂತ್ರಿ ಕಚೇರಿಯಲ್ಲಿ ಹೆಚ್ಚುವರಿ ನಿರ್ದೇಶಕನಾಗಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದು, ಆತ ಬಳಿ PMO ವಿಸಿಟಿಂಗ್ ಕಾರ್ಡ್ ಸಹ ಹೊಂದಿದ್ದರು. ಮಾರ್ಚ್ 3 ರಂದು ಶ್ರೀನಗರದಲ್ಲಿ ಪಟೇಲ್ ನನ್ನು ಪೊಲೀಸರು ಬಂಧಿಸಿದ್ದು, 15 ದಿನಗಳ ಪೊಲೀಸ್ ಕಸ್ಟಡಿ ಅವಧಿ ಮುಗಿದ ನಂತರ, ಈಗ 15 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ತಾನು ಪ್ರಧಾನಿ ಕಚೇರಿ ಅಧಿಕಾರಿ ಎಂದು ಹೇಳಿಕೊಂಡ ಕಿರಣ್ ಪಟೇಲ್ ಗೆ ಜಮ್ಮು ಮತ್ತು ಕಾಶ್ಮೀರ ಆಡಳಿತ ಝೆಡ್ ಪ್ಲಸ್ ಭದ್ರತಾ ಸೌಲಭ್ಯ, ಬುಲೆಟ್ಪ್ರೂಫ್ ಮಹೀಂದ್ರಾ ಸ್ಕಾರ್ಪಿಯೋ ಎಸ್ಯುವಿ, ಪಂಚತಾರಾ ಹೋಟೆಲ್ನಲ್ಲಿ ಅಧಿಕೃತ ವಾಸಕ್ಕೆ ವ್ಯವಸ್ಥೆ, ಇಷ್ಟೇ ಅಲ್ಲದೆ ಇನ್ನೂ ಅನೇಕ ಸವಲತ್ತುಗಳನ್ನು ಕ್ಷಣಮಾತ್ರದಲ್ಲಿ ಕಲ್ಪಿಸಿತ್ತು. ಈ ನಕಲಿ 'ಅಧಿಕಾರಿ' ಹೋದಲ್ಲಿ ಬಂದಲೆಲ್ಲಾ ಯೋಧರು ಬಿಗಿ ಭದ್ರತೆಯನ್ನು ಒದಗಿಸಲಾಗಿತ್ತು.