ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲೆ ಹಲ್ಲೆ: ನಕಲಿ ವಿಡಿಯೋ ಹಂಚಿಕೊಂಡಿದ್ದ ಯೂಟ್ಯೂಬರ್ ಮನೀಶ್ ಕಶ್ಯಪ್ ಪೊಲೀಸರಿಗೆ ಶರಣು
ಬಿಹಾರದ ವಲಸೆ ಕಾರ್ಮಿಕರನ್ನು ತಮಿಳುನಾಡಿನಲ್ಲಿ ಅಮಾನವೀಯವಾಗಿ ಥಳಿಸುತ್ತಿದ್ದಾರೆ ಎಂದು ನಕಲಿ ವಿಡಿಯೋವನ್ನು ಹಂಚಿಕೊಂಡ ಪ್ರಕರಣಕ್ಕೆ ಸಂಬಂಧಿಸಿದ ಬಿಹಾರ ಮೂಲದ ಖ್ಯಾತ ಯೂಟ್ಯೂಬರ್ ಮನೀಶ್ ಕಶ್ಯಪ್ ಶನಿವಾರ ಪೊಲೀಸರಿಗೆ ಶರಣಾಗಿದ್ದಾನೆ.
Published: 18th March 2023 01:22 PM | Last Updated: 04th April 2023 10:57 AM | A+A A-

ಮನೀಶ್ ಕಶ್ಯಪ್.
ಪಾಟ್ನಾ: ಬಿಹಾರದ ವಲಸೆ ಕಾರ್ಮಿಕರನ್ನು ತಮಿಳುನಾಡಿನಲ್ಲಿ ಅಮಾನವೀಯವಾಗಿ ಥಳಿಸುತ್ತಿದ್ದಾರೆ ಎಂದು ನಕಲಿ ವಿಡಿಯೋವನ್ನು ಹಂಚಿಕೊಂಡ ಪ್ರಕರಣಕ್ಕೆ ಸಂಬಂಧಿಸಿದ ಬಿಹಾರ ಮೂಲದ ಖ್ಯಾತ ಯೂಟ್ಯೂಬರ್ ಮನೀಶ್ ಕಶ್ಯಪ್ ಶನಿವಾರ ಪೊಲೀಸರಿಗೆ ಶರಣಾಗಿದ್ದಾನೆ.
ಬಿಹಾರ ಪೊಲೀಸರು ಹಾಗೂ ಅದರ ಆರ್ಥಿಕ ಅಪರಾಧಗಳ ಘಟಕವು ಕಶ್ಯಪ್ ಆಸ್ತಿಯನ್ನು ಮುಟ್ಟುಗೋಲು ಹಾಕಲು ಆತನ ಮನೆಗೆ ಭೇಟಿ ನೀಡದ್ದವು. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಕಶ್ಯಪ್ ಪೊಲೀಸರ ಮುಂದೆ ಶರಣಾಗತನಾಗಿದ್ದಾನೆಂದು ತಿಳಿದುಬಂದಿದೆ.
ತಮಿಳುನಾಡಿನಲ್ಲಿ ಕೆಲಸ ಮಾಡುತ್ತಿರುವ ಬಿಹಾರದ ನಿವಾಸಿಗಳ ಬಗ್ಗೆ ಸುಳ್ಳು ಹಾಗೂ ತಪ್ಪುದಾರಿಗೆಳೆಯುವ ವೀಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ ಆರೋಪ ಕಶ್ಯಪ್ ಮೇಲಿದೆ.
ಬಿಹಾರದ ಆರ್ಥಿಕ ಅಪರಾಧಗಳ ಘಟಕ (ಇಒಯು)ವು ಕಶ್ಯಪ್ ಹಾಗೂ ಇತರರ ವಿರುದ್ಧ "ತಮಿಳುನಾಡಿನಲ್ಲಿ ವಲಸಿಗರನ್ನು ಕೊಲ್ಲುವ ಮತ್ತು ಥಳಿಸುವ ನಕಲಿ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಡುವಲ್ಲಿ ತೊಡಗಿಸಿಕೊಂಡಿದೆ" ಎಂಬ ಆರೋಪದ ಮೇಲೆ ಮೂರು ಪ್ರಕರಣಗಳನ್ನು ದಾಖಲಿಸಿಕೊಂಡಿದೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಬಿಹಾರ ಪೊಲೀಸ್ ಇಲಾಖೆಯ ಆರ್ಥಿಕ ಅಪರಾಧಗಳ ಘಟಕವು, “ದಕ್ಷಿಣ ಭಾರತದ ರಾಜ್ಯವಾದ ತಮಿಳುನಾಡಿನಲ್ಲಿ ಬಿಹಾರ ಕಾರ್ಮಿಕರ ಮೇಲೆ ಹಲ್ಲೆ ನಡೆದಿದೆ ಎಂದು ನಕಲಿ ವೀಡಿಯೋ ಹಂಚಿದ್ದ ಆರೋಪದಲ್ಲಿ ಕಶ್ಯಪ್ ಬಿಹಾರ ಮತ್ತು ತಮಿಳುನಾಡು ಪೊಲೀಸರಿಗೆ ಬೇಕಾಗಿದ್ದರು. ಬಂಧನ ಹಾಗೂ ಆಸ್ತಿಗಳ ಮುಟ್ಟುಗೋಲು ಭೀತಿಯಿಂದ ಅವರು ಶನಿವಾರ ಪೊಲೀಸರೆದುರು ಶರಣಾಗಿದ್ದಾರೆ” ಎಂದು ಹೇಳಿದೆ,
ಇದಕ್ಕೂ ಮುನ್ನ ತಮಿಳುನಾಡಿನಲ್ಲಿ ಬಿಹಾರ ಕಾರ್ಮಿಕರ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ನಕಲಿ ವಿಡಿಯೋ ವೈರಲ್ ಆದ ಬಳಿಕ ಬಿಹಾರ ಸರ್ಕಾರವು ಉನ್ನತ ಅಧಿಕಾರಗಳನ್ನೊಳಗೊಂಡ ನಾಲ್ಕು ಸದಸ್ಯರ ತಂಡವನ್ನು ರಚಿಸಿತ್ತು. ಈ ತಂಡವನ್ನು ಪ್ರಕರಣದ ಕುರಿತು ತನಿಖೆ ನಡೆಸಲು ತಮಿಳುನಾಡು ಅಧಿಕಾರಿಗಳೊಂದಿಗೆ ಸಹಕರಿಸಲು ತಮಿಳುನಾಡಿಗೆ ಕಳುಹಿಸಿಕೊಟ್ಟಿತ್ತು.