DOORDARSHAN ಲಾಂಛನದ ಬಣ್ಣ ಬದಲು: ಕೇಸರಿಕರಣದ ಮುನ್ಸೂಚನೆ ಎಂದ ತಮಿಳುನಾಡು ಸಿಎಂ MK ಸ್ಟಾಲಿನ್
ನವದೆಹಲಿ: ಸರ್ಕಾರಿ ಸ್ವಾಮ್ಯದ ದೂರದರ್ಶನದ ಲಾಂಛನದ ಬಣ್ಣ ಬದಲಾವಣೆ ಕುರಿತು ಪ್ರತಿಕ್ರಿಯೆ ನೀಡಿರುವ ತಮಿಳುನಾಡು ಸಿಎಂ MK ಸ್ಟಾಲಿನ್ ಕೇಸರಿಕರಣದ ಮುನ್ಸೂಚನೆ ಎಂದಿದ್ದಾರೆ.
ದೂರದರ್ಶನದ (ಡಿಡಿ) ಲಾಂಛನವನ್ನು ಕೆಂಪು ಬಣ್ಣದಿಂದ ಕೇಸರಿ ಬಣ್ಣಕ್ಕೆ ಬದಲಾಯಿಸಿರುವುದಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಆಕ್ರೋಶ ವ್ಯಕ್ತಪಡಿಸಿದ್ದು, ಎಲ್ಲವನ್ನೂ ಕೇಸರಿಮಯಗೊಳಿಸುವ ಬಿಜೆಪಿಯ ಪಿತೂರಿಯ ಪೂರ್ವಭಾವಿ ಪ್ರಯತ್ನ ಇದು ಎಂದು ಕಿಡಿಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸ್ಟಾಲಿನ್, 'ದೂರದರ್ಶನಕ್ಕೆ ‘ಕೇಸರಿ ಕಲೆ’ ನೀಡಲಾಗಿದೆ. ಎಲ್ಲವನ್ನೂ ಕೇಸರಿಮಯಗೊಳಿಸುವ ಬಿಜೆಪಿಯ ಷಡ್ಯಂತ್ರ ಇದು. ಲಾಂಛನದ ಬಣ್ಣ ಬದಲಾವಣೆಯಂತಹ ಕ್ರಮಗಳು ಕೇಸರಿಕರಣದ ಪೂರ್ವಭಾವಿ ಪ್ರಯತ್ನಕ್ಕೆ ಉದಾಹರಣೆ. 2024ರ ಲೋಕಸಭಾ ಚುನಾವಣಾ ಫಲಿತಾಂಶ ಅಂತಹ ಫ್ಯಾಸಿಸಂ ಶಕ್ತಿಗಳ ವಿರುದ್ಧ ಸಾರ್ವಜನಿಕ ಪ್ರತಿರೋಧವನ್ನು ತೋರಿಸಲಿದೆ' ಎಂದು ಅವರು ಹೇಳಿದ್ದಾರೆ.
ಈ ಹಿಂದೆ ತಮಿಳು ಕವಿ ತಿರುವಳ್ಳುವರ್ ಅವರನ್ನು ಕೇಸರಿಮಯಗೊಳಿಸಲಾಗಿತ್ತು. ತಮಿಳುನಾಡಿನ ಮಹಾನ್ ನಾಯಕರ ಪ್ರತಿಮೆಗಳಿಗೆ ಕೇಸರಿ ಬಣ್ಣ ಬಳಿಯಲಾಗಿತ್ತು ಎಂದೂ ಸ್ಟಾಲಿನ್ ಕಿಡಿಕಾರಿದ್ದಾರೆ.