
ಹೈದರಾಬಾದ್: ಹಲವು ವಿವಾದಗಳಿಂದಲೇ ಇತ್ತೀಚಿನ ದಿನಗಳಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿರುವ ತೆಲುಗು ಚಿತ್ರರಂಗದ ಈ ಗತಿಗೆ ನನ್ನ ಶಾಪವೇ ಕಾರಣ ಎಂದು ವಿವಾದಿತ ಜ್ಯೋತಿಷಿ ವೇಣುಸ್ವಾಮಿ ಹೇಳಿದ್ದಾರೆ.
ಹೌದು.. ತೆಲುಗು ಚಿತ್ರರಂಗ ಕಳೆದ ಕೆಲ ತಿಂಗಳಿಂದ ಇನ್ನಿಲ್ಲದ ಕಾರಣಗಳಿಗೆ ಸುದ್ದಿಯಾಗುತ್ತಿದ್ದು, ಈ ಹಿಂದೆ ನಟ ಅಕ್ಕಿನೇನಿ ನಾಗಾರ್ಜುನ ಅವರ ಕೆನ್ವೆಷನ್ ಹಾಲ್ ಒತ್ತುವರಿ ತೆರವು. ಹಿರಿಯ ನಟ ಮೋಹನ್ ಬಾಬು ಪುತ್ರರ ಕೌಟುಂಬಿಕ ಸಂಘರ್ಷ ಮತ್ತು ಇದೀಗ ಪುಷ್ಪ 2 ಚಿತ್ರದ ಕಾಲ್ತುಳಿತ ಪ್ರಕರಣ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದೆ.
ಇದಲ್ಲದೆ ತೆಲುಗು ಚಿತ್ರರಂಗದ ಗಣ್ಯರು ಒಂದಲ್ಲ ಒಂದು ಸಮಸ್ಯೆಗಳನ್ನು ಎದುರಿಸುತ್ತಿದ್ದು ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ನನ್ನಿಂದಲೇ ತೆಲುಗು ಚಿತ್ರರಂಗಕ್ಕೆ ಹಿಗೆಲ್ಲ ಆಗುತ್ತಿದೆ ಎಂದು ಹೇಳಿದ್ದಾರೆ.
ಯೂಟ್ಯೂಬ್ ಚಾನೆಲ್ ವೊಂದಕ್ಕೆ ಸಂದರ್ಶನ ನೀಡಿರುವ ವೇಣುಸ್ವಾಮಿ, ತೆಲುಗು ಚಿತ್ರರಂಗ ಮತ್ತು ಕೆಲ ಸ್ಟಾರ್ ನಟರ ಅಭಿಮಾನಿಗಳು ನನ್ನನ್ನು ಸಾಮಾಜಿಕ ಜಾಲತಾಣಗಳಲ್ಲಿ ಇನ್ನಿಲ್ಲದಂತೆ ಹೀಯಾಳಿಸಿದರು. ನನಗೆ ತುಂಬಾ ನೋವು ನೀಡಿದ್ದಾರೆ. ಹೀಗಾಗಿಯೇ ನನ್ನ ಶಾಪದಿಂದಾಗಿಯೇ ತೆಲುಗು ಚಿತ್ರರಂಗಕ್ಕೆ ಈ ಗತಿ ಬಂದಿದೆ ಎಂದು ಹೇಳಿದ್ದಾರೆ.
ಅಲ್ಲು ಅರ್ಜುನ್ ಸಿಎಂ ಆಗುತ್ತಾರೆ
ಅಲ್ಲು ಅರ್ಜುನ್ ವಿವಾದ ಆದ ಬಳಿಕ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ‘ಚಿತ್ರರಂಗದವರು ನನಗೆ ಕೊಟ್ಟಿರುವ ಕಾಟದಿಂದಲೇ ಚಿತ್ರರಂಗಕ್ಕೆ ಈ ಗತಿ ಬಂದಿದೆ. ಹೀಗೆ ಒಂದರ ಹಿಂದೆ ಸಮಸ್ಯೆ ಬಂದೊದಗಿದೆ’ ಎಂದಿದ್ದಾರೆ. ಅದೇ ಸಂದರ್ಶನದಲ್ಲಿ ಅಲ್ಲು ಅರ್ಜುನ್ ಬಗ್ಗೆ ಮಾತನಾಡಿ, ‘ಅಲ್ಲು ಅರ್ಜುನ್ ಅವರಿಗೆ ರಾಜಯೋಗ ನಡೆಯುತ್ತಿದೆ.
ಕಳೆದ ಕೆಲವು ವರ್ಷಗಳಿಂದಲೂ ರಾಜಯೋಗ ನಡೆಯುತ್ತಿದೆ. ಅವರ ಮುಂದಿನ ವರ್ಷಗಳು ಸಹ ಬಹಳ ಚೆನ್ನಾಗಿವೆ. ಅವರ ಭವಿಷ್ಯದಲ್ಲಿ ರಾಜ್ಯದ ಸಿಎಂ ಆಗುವ ಯೋಗವೂ ಇದೆ’ ಎಂದಿದ್ದಾರೆ ವೇಣುಸ್ವಾಮಿ.
ಯಾರು ಈ ವೇಣುಸ್ವಾಮಿ?
ವೇಣುಸ್ವಾಮಿ ತೆಲುಗು ಚಿತ್ರರಂಗ ಹಾಗೂ ಆಂಧ್ರ-ತೆಲಂಗಾಣದ ರಾಜಕೀಯ ರಂಗದ ಸೆಲೆಬ್ರಿಟಿ ಜ್ಯೋತಿಷಿ ಆಗಿದ್ದರು. ನಾಗ ಚೈತನ್ಯ ಹಾಗೂ ಸಮಂತಾ ವಿಚ್ಛೇದನ ಪಡೆದುಕೊಳ್ಳುತ್ತಾರೆ ಎಂದು ಜ್ಯೋತಿಷ್ಯ ಹೇಳಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದರು. ಪ್ರಭಾಸ್, ಅಲ್ಲು ಅರ್ಜುನ್ ಸೇರಿದಂತೆ ಹಲವರ ಜಾತಕಗಳನ್ನು ಹೇಳಿದ್ದರು. ಆದರೆ ಇತ್ತೀಚೆಗೆ ನಾಗ ಚೈತನ್ಯ ಹಾಗೂ ಶೋಭಿತಾ ಮದುವೆ ಬಗ್ಗೆ ಭವಿಷ್ಯ ಹೇಳಿದಾಗ ವೇಣು ಸ್ವಾಮಿ ವಿರುದ್ಧ ದೂರುಗಳು ದಾಖಲಾಗಿದ್ದವು.
ಅವರ ಬಂಧನಕ್ಕೆ ಯತ್ನಗಳು ಸಹ ನಡೆದಿದ್ದವು. ಕೆಲವು ಪತ್ರಕರ್ತರು ಸಹ ವೇಣು ಸ್ವಾಮಿ ವಿರುದ್ಧ ದೂರು ಸಲ್ಲಿಸಿದ್ದರು. ಅಲ್ಲದೆ ತೆಲಂಗಾಣ ಮತ್ತು ಆಂಧ್ರ ಪ್ರದೇಶ ಚುನಾವಣೆ ಕುರಿತು ವೇಣುಸ್ವಾಮಿ ನುಡಿದಿದ್ದ ಭವಿಷ್ಯ ಸುಳ್ಳಾಗಿತ್ತು. ಇದಾದ ಬಳಿಕ ವೇಣುಸ್ವಾಮಿ ವ್ಯಾಪಕ ಟ್ರೋಲ್ ಗೆ ತುತ್ತಾಗಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ವೇಣು ಸ್ವಾಮಿ ಸಹ ಈ ಬಗ್ಗೆ ಆತಂಕಗೊಂಡು ವಿಡಿಯೋ ಮಾಡಿ, ತಾವು ಇನ್ನು ಮೇಲೆ ಭವಿಷ್ಯ ಹೇಳುವುದಿಲ್ಲ ಎಂದಿದ್ದರು.
Advertisement