ಗುವಾಹತಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೊ ನ್ಯಾಯಯಾತ್ರೆಯ ವೇಳೆ ಬಿಜೆಪಿ ಕಾರ್ಯಕರ್ತರು ದಾಳಿ ಮಾಡಿದ್ದಾರೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.
ರಾಹುಲ್ ಗಾಂಧಿ ನೇತೃತ್ವದ ಭಾರತ ಜೋಡೊ ನ್ಯಾಯ ಯಾತ್ರೆ ಇಂದು (ಭಾನುವಾರ), ಎರಡನೇ ಬಾರಿಗೆ ಅಸ್ಸಾಂಗೆ ಕಾಲಿಟ್ಟಿದೆ. ಬಿಸ್ವಂತ್ ಜಿಲ್ಲೆಯಿಂದ ಸೋನಿತ್ಪುರ ಮೂಲಕ ನಗಾಂವ್ಗೆ ಪ್ರಯಾಣ ಬೆಳೆಸುತ್ತಿದೆ. ಅಸ್ಸಾಂನ ಸೋನಿತ್ಪುರ ಜಿಲ್ಲೆಯಲ್ಲಿ ಭಾನುವಾರ ಪಕ್ಷದ ನಾಯಕ ಜೈರಾಮ್ ರಮೇಶ್ ಅವರ ಕಾರಿನ ಮೇಲೆ ಬಿಜೆಪಿ ಬೆಂಬಲಿಗರ ಗುಂಪು ದಾಳಿ ನಡೆಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ವೇಳೆ ಯಾತ್ರೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರ ಕಾರಿನ ಮೇಲೆ ಬಿಜೆಪಿಯ ಗುಂಪು ದಾಳಿ ನಡೆಸಿದೆ ಎಂದು ಆರೋಪಿಸಲಾಗಿದೆ. ಈ ಕುರಿತು ಸ್ವತಃ ಜೈರಾಮ್ ರಮೇಶ್ ಸಾಮಾಜಿಕ ಮಾಧ್ಯಮ 'ಟ್ವಿಟರ್'ನಲ್ಲಿ ವಿಡಿಯೊ ಸಮೇತ ವಿವರಣೆ ನೀಡಿದ್ದಾರೆ.
'ಸೊನೀತ್ಪುರದ ಜಮುಗುರಿಘಾಟ್ನಲ್ಲಿ ನನ್ನ ವಾಹನದ ಮೇಲೆ ಬಿಜೆಪಿಯ ಗುಂಪು ದಾಳಿ ನಡೆಸಿದೆ. ಕಾರಿನ ವಿಂಡ್ಶೀಲ್ಡ್ನಿಂದ ಭಾರತ್ ಜೋಡೊ ನ್ಯಾಯ ಯಾತ್ರೆಯ ಸ್ಟಿಕ್ಕರ್ಗಳನ್ನು ಹರಿದು ಹಾಕಲಾಗಿದೆ. ನೀರನ್ನು ಎಸೆದು ನ್ಯಾಯ ಯಾತ್ರೆಯ ವಿರುದ್ಧ ಘೋಷಣೆ ಕೂಗಲಾಗಿದೆ. ಆದರೆ ನಾವು ಸಂಯಮವನ್ನು ಕಾಪಾಡಿಕೊಂಡೆವು. ನಿಸ್ಸಂಶವಾಗಿಯೂ ಈ ಕೃತ್ಯದ ಹಿಂದೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಕೈವಾಡ ಅಡಗಿದೆ. ಆದರೆ ಬಿಜೆಪಿಯ ಬೆದರಿಕೆಗಳಿಗೆ ನಾವು ಬಗ್ಗುವುದಿಲ್ಲ. ಅಸ್ಸಾಂನಲ್ಲಿ ಭಾರತ ಜೋಡೊ ನ್ಯಾಯ ಯಾತ್ರೆಯಲ್ಲಿ ಭಾಗವಹಿಸದಂತೆ ಜನರಿಗೆ ಬಿಜೆಪಿ ನೇತೃತ್ವದ ಸರ್ಕಾರವು ಬೆದರಿಕೆ ಹಾಕುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಆರೋಪಿಸಿದ್ದಾರೆ.
ಭಾರತ ಜೋಡೊ ನ್ಯಾಯ ಯಾತ್ರೆ ಜನವರಿ 25ರವರೆಗೂ ಅಸ್ಸಾಂನಲ್ಲಿ ನಡೆಯಲಿದೆ.
Advertisement