ಮೋದಿ ಸರ್ಕಾರ ರೈತರನ್ನು ಶತ್ರುಗಳಂತೆ ನಡೆಸಿಕೊಳ್ಳುತ್ತಿದೆ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತ ವಿರೋಧಿ ಸರ್ಕಾರವಾಗಿದ್ದು, ರೈತರು ತಮ್ಮ ಹಕ್ಕುಗಳನ್ನು ಕೇಳುತ್ತಿರುವ ಸಲುವಾಗಿ ಅವರನ್ನು ಶತ್ರುಗಳಂತೆ ಪರಿಗಣಿಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಆರೋಪಿಸಿದ್ದಾರೆ.
ನರೇಂದ್ರ ಮೋದಿ - ಮಲ್ಲಿಕಾರ್ಜುನ ಖರ್ಗೆ
ನರೇಂದ್ರ ಮೋದಿ - ಮಲ್ಲಿಕಾರ್ಜುನ ಖರ್ಗೆ
Updated on

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತ ವಿರೋಧಿ ಸರ್ಕಾರವಾಗಿದ್ದು, ರೈತರು ತಮ್ಮ ಹಕ್ಕುಗಳನ್ನು ಕೇಳುತ್ತಿರುವ ಸಲುವಾಗಿ ಅವರನ್ನು ಶತ್ರುಗಳಂತೆ ಪರಿಗಣಿಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಆರೋಪಿಸಿದ್ದಾರೆ.

ರೈತ ಮುಖಂಡರಾದ ಸರ್ವಾನ್ ಸಿಂಗ್ ಪಂಧೇರ್ ಮತ್ತು ಜಗಜಿತ್ ಸಿಂಗ್ ದಲ್ಲೆವಾಲ್ ಅವರು ಮಾರ್ಚ್ 6 ರಂದು ದೆಹಲಿ ಚಲೋಗೆ ದೇಶದಾದ್ಯಂತ ಇರುವ ರೈತರಿಗೆ ಕರೆ ನೀಡಿದ ಒಂದು ದಿನದ ನಂತರ ಅವರ ಹೇಳಿಕೆಗಳು ಬಂದಿವೆ.

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಮತ್ತು ಕೃಷಿ ಸಾಲ ಮನ್ನಾ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅವರು ಮಾರ್ಚ್ 10 ರಂದು ದೇಶದಾದ್ಯಂತ ನಾಲ್ಕು ಗಂಟೆಗಳ ಕಾಲ 'ರೈಲ್ ರೋಕೋ'ಗೆ ಕರೆ ನೀಡಿದ್ದಾರೆ.

ನರೇಂದ್ರ ಮೋದಿ - ಮಲ್ಲಿಕಾರ್ಜುನ ಖರ್ಗೆ
ರೈತರ ಪ್ರತಿಭಟನೆ: ಮಾರ್ಚ್ 10 ಕ್ಕೆ 'ರೈಲ್ ರೋಕೋ'ಗೆ ಕರೆ, ಮಾರ್ಚ್ 6 ರಂದು ದೆಹಲಿ ಚಲೋ

ಈಗಿರುವ ಪ್ರತಿಭಟನಾ ಸ್ಥಳಗಳಲ್ಲಿ ರೈತರ ನಿರಂತರ ಹೋರಾಟವನ್ನು ತೀವ್ರಗೊಳಿಸಲಾಗುವುದು ಮತ್ತು ತಮ್ಮ ಬೇಡಿಕೆಗಳನ್ನು ಸರ್ಕಾರವು ಈಡೇರಿಸುವವರೆಗೆ ಮುಂದುವರಿಯುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಈ ಕುರಿತು ಹಿಂದಿಯಲ್ಲಿ ಟ್ವೀಟ್ ಮಾಡಿರುವ ಖರ್ಗೆ, 'ತಮ್ಮ 'ಆಯ್ದ ಕ್ರೋನಿ ಕ್ಯಾಪಿಟಲಿಸ್ಟ್ ಸ್ನೇಹಿತರ' ಲಾಭಕ್ಕಾಗಿ, ಮೋದಿ ಸರ್ಕಾರವು ರೈತರ ಹಿತಾಸಕ್ತಿಗಳನ್ನು ನಿರಂತರವಾಗಿ ತ್ಯಾಗ ಮಾಡುತ್ತಿದೆ. ದೇಶಕ್ಕೆ ಅನ್ನ ನೀಡುವ ರೈತ ಬಂಪರ್ ಬೆಳೆಯನ್ನು ಉತ್ಪಾದಿಸಿ ಅದನ್ನು ರಫ್ತು ಮಾಡಲು ಬಯಸಿದಾಗ, ಮೋದಿ ಸರ್ಕಾರವು ಗೋಧಿ, ಅಕ್ಕಿ, ಸಕ್ಕರೆ, ಈರುಳ್ಳಿ, ಬೇಳೆಕಾಳು ಇತ್ಯಾದಿಗಳ ರಫ್ತನ್ನು ನಿಷೇಧಿಸುತ್ತದೆ' ಎಂದು ಅವರು ಹೇಳಿದ್ದಾರೆ.

'ಬಿಜೆಪಿ ತನ್ನ ಅಧಿಕಾರಾವಧಿಯಲ್ಲಿ ಅದನ್ನೇ ಮಾಡಿದೆ. ಕಾಂಗ್ರೆಸ್-ಯುಪಿಎ ಆಡಳಿತದಲ್ಲಿ ಶೇ 153ರಷ್ಟು ಹೆಚ್ಚಿದ್ದ ಕೃಷಿ ರಫ್ತು ಬಿಜೆಪಿ ಆಡಳಿತದಲ್ಲಿ ಶೇ 64ರಷ್ಟು ಮಾತ್ರ ಹೆಚ್ಚಿದೆ' ಎಂದು ಹೇಳಿದರು.

'ಮೋದಿ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಮತ್ತು ದ್ವಿಗುಣಗೊಳಿಸುವ ಆದಾಯದ ಭರವಸೆ ಹುಸಿಯಾಗಿದೆ. ಆದರೆ, ರೈತ ವಿರೋಧಿ ಬಿಜೆಪಿ ಸರ್ಕಾರವು ನಮ್ಮ 62 ಕೋಟಿ ರೈತರ ಬೆನ್ನು ಮುರಿಯಲು ಯಾವುದೇ ಅವಕಾಶವನ್ನು ಬಿಡಲಿಲ್ಲ. ಈಗ ರೈತರು ತಮ್ಮ ಹಕ್ಕುಗಳಿಗಾಗಿ ಆಗ್ರಹಿಸುತ್ತಿರುವಾಗ ಮೋದಿ ಸರ್ಕಾರ ಅವರನ್ನು ಶತ್ರುಗಳಂತೆ ನಡೆಸಿಕೊಳ್ಳುತ್ತಿದೆ' ಎಂದು ಅವರು ಆರೋಪಿಸಿದರು.

ಪ್ರತಿಭಟನಾನಿರತ ರೈತರು ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಮತ್ತು ಖಾನೌರಿ ಗಡಿಗಳಲ್ಲಿ ತಮ್ಮ 'ದೆಹಲಿ ಚಲೋ' ಮೆರವಣಿಗೆಯನ್ನು ಭದ್ರತಾ ಪಡೆಗಳು ತಡೆದ ನಂತರ ಅಲ್ಲಿಯೇ ಮೊಕ್ಕಾಂ ಹೂಡಿದ್ದಾರೆ. ಅವರು ಫೆಬ್ರುವರಿ 13 ರಂದು ತಮ್ಮ ಮೆರವಣಿಗೆಯನ್ನು ಪ್ರಾರಂಭಿಸಿದರು. ಆದರೆ, ಭದ್ರತಾ ಪಡೆಗಳು ಅವರನ್ನು ತಡೆದರು, ಇದು ಗಡಿಳಲ್ಲಿ ಘರ್ಷಣೆಗೆ ಕಾರಣವಾಯಿತು.

ನರೇಂದ್ರ ಮೋದಿ - ಮಲ್ಲಿಕಾರ್ಜುನ ಖರ್ಗೆ
ಕೇಂದ್ರದೊಂದಿಗಿನ ಮಾತುಕತೆ ವಿಫಲ; ಆರು ರೈತರ ಸಾವಿನ ನಡುವೆಯೂ ಮುಂದುವರಿದ ರೈತರ ಪ್ರತಿಭಟನೆ

ಎಂಎಸ್‌ಪಿ ಮೇಲಿನ ಕಾನೂನು ಖಾತರಿ ಜೊತೆಗೆ, ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನುಷ್ಠಾನ, ರೈತರು ಮತ್ತು ಕೃಷಿ ಕಾರ್ಮಿಕರಿಗೆ ಪಿಂಚಣಿ, ವಿದ್ಯುತ್ ದರದಲ್ಲಿ ಹೆಚ್ಚಳ ಮಾಡದಿರುವುದು, ಪೊಲೀಸ್ ಪ್ರಕರಣಗಳನ್ನು ಹಿಂಪಡೆಯುವುದು ಮತ್ತು 2021ರಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ಹಿಂಸಾಚಾರದ ಲಖೀಂಪುರ ಖೇರಿ ಸಂತ್ರಸ್ತರಿಗೆ 'ನ್ಯಾಯ', 2013ರ ಭೂಸ್ವಾಧೀನ ಕಾಯ್ದೆಯ ಮರುಸ್ಥಾಪನೆ ಮತ್ತು 2020-21ರಲ್ಲಿ ಹಿಂದಿನ ಪ್ರತಿಭಟನೆ ವೇಳೆ ಮೃತಪಟ್ಟ ರೈತರ ಕುಟುಂಬಗಳಿಗೆ ಪರಿಹಾರಕ್ಕಾಗಿ ರೈತರು ಒತ್ತಾಯಿಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com