Electoral Bonds ಪ್ರಕರಣ: SBI ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್, ಮಾರ್ಚ್ 12ರೊಳಗೆ ದತ್ತಾಂಶ ಸಲ್ಲಿಕೆಗೆ ಸೂಚನೆ
ನವದೆಹಲಿ: ಚುನಾವಣಾ ಬಾಂಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ದತ್ತಾಂಶ ಸಲ್ಲಿಕೆಯ ಗಡುವು ವಿಸ್ತರಿಸುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದು ನಾಳೆ ಅಂದರೆ ಮಾರ್ಚ್ 12ರೊಳೆಗೆ ಎಲ್ಲ ದತ್ತಾಂಶಗಳನ್ನು ಕೋರ್ಟ್ ಗೆ ಸಲ್ಲಿಸುವಂತೆ ಸೂಚನೆ ನೀಡಿದೆ.
ಚುನಾವಣಾ ಬಾಂಡ್ಗಳ (Electoral Bond) ಕುರಿತು ಮಾಹಿತಿ ನೀಡಲು ಹೆಚ್ಚಿನ ಕಾಲಾವಕಾಶ ಕೋರಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ (Supreme Court), ನಾಳೆಯೊಳಗೆ (ಮಾರ್ಚ್ 12) ಚುನಾವಣೆ ಬಾಂಡ್ಗಳ ಕುರಿತು ಎಸ್ಬಿಐ ಮಾಹಿತಿ ಒದಗಿಸಬೇಕು ಎಂದು ಆದೇಶಿಸಿದೆ.
ಚುನಾವಣಾ ಬಾಂಡ್ಗಳ ಕುರಿತು ಮಾಹಿತಿ ನೀಡಲು ಜೂನ್ 30ರವರೆಗೆ ಹೆಚ್ಚುವರಿ ಕಾಲಾವಕಾಶ ಬೇಕು ಎಂದು ಎಸ್ಬಿಐ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು, ಮಂಗಳವಾರ ಸಂಜೆಯೊಳಗೆ ಚುನಾವಣೆ ಬಾಂಡ್ಗಳ ಕುರಿತ ಮಾಹಿತಿಯನ್ನು ನೀಡಬೇಕು ಎಂದು ಆದೇಶಿಸಿತು.
ಎಸ್ಬಿಐ ಸಲ್ಲಿಸಿದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ.ಆರ್. ಗವಾಯಿ, ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ವಿಚಾರಣೆ ನಡೆಸಿತು. ಎಸ್ಬಿಐ ಪರ ಹರೀಶ್ ಸಾಳ್ವೆ ವಾದ ಮಂಡಿಸಿದರು. “ಚುನಾವಣಾ ಬಾಂಡ್ಗಳ ಕುರಿತು ಮಾಹಿತಿ ನೀಡಲು ಇನ್ನಷ್ಟು ಸಮಯ ಬೇಕು. ಎಲ್ಲ ಮಾಹಿತಿಯನ್ನು ಒಗ್ಗೂಡಿಸಿ ಚುನಾವಣೆ ಆಯೋಗಕ್ಕೆ ನೀಡಲಾಗುತ್ತದೆ. ಅದಕ್ಕಾಗಿ ಸಮಯ ಬೇಕು” ಎಂದು ವಾದ ಮಂಡಿಸಿದರು.
ಎಸ್ಬಿಐ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠವು ಅಸಮಾಧಾನ ವ್ಯಕ್ತಪಡಿಸಿತು. “ಚುನಾವಣಾ ಬಾಂಡ್ಗಳನ್ನು ಖರೀದಿಸಿದವರ ಕುರಿತು ಮಾಹಿತಿ ಒದಗಿಸಬೇಕು ಎಂದು ಫೆಬ್ರವರಿ 15ರಂದೇ ತೀರ್ಪು ನೀಡಲಾಗಿದೆ. ಎಸ್ಬಿಐ ಇದುವರೆಗೆ ಏನು ಮಾಡಿತು? ಇಷ್ಟು ದಿನವಾದರೂ ಏಕೆ ಮಾಹಿತಿ ಸಂಗ್ರಹಿಸಲು ಆಗಲಿಲ್ಲ? ಅಷ್ಟಕ್ಕೂ, ಮುಚ್ಚಿದ ಲಕೋಟೆಯಲ್ಲಿ ಏನಿದೆ? ಅದನ್ನು ಮೊದಲು ಬಹಿರಂಗಪಡಿಸಿ. ಎಸ್ಬಿಐ ನೀಡಿದ ಡೆಡ್ಲೈನ್ ಮುಗಿಯಲು ಎರಡು ದಿನ ಬಾಕಿ ಇರುವಾಗ ಹೆಚ್ಚಿನ ಸಮಯ ಬೇಕು ಎಂದು ಅರ್ಜಿ ಸಲ್ಲಿಸಿದ್ದೀರಿ. ನಿಮ್ಮ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಬೇಕು..ಎಂದು ಸಲ್ಲಿಸಲಾಗಿದೆ” ಎಂದು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತು.
26 ದಿನ ಏನು ಮಾಡುತ್ತಿದ್ದಿರಿ?
"ಕಳೆದ 26 ದಿನಗಳಲ್ಲಿ, ನೀವು ಯಾವ ಕ್ರಮಗಳನ್ನು ತೆಗೆದುಕೊಂಡಿದ್ದೀರಿ? ನಿಮ್ಮ ಅರ್ಜಿಯು ಅದರ ಬಗ್ಗೆ ಮೌನವಾಗಿದೆ..ನಮ್ಮ ತೀರ್ಪಿನ ಪ್ರಕಾರ ಸರಳವಾಗಿ ಬಹಿರಂಗಪಡಿಸಲು ನಾವು ನಿಮ್ಮನ್ನು ಕೇಳಿದ್ದೇವೆ..ಎಸ್ಬಿಐ ಸೀಲ್ ಮಾಡಿದ ಕವರ್, ಕೊಲೇಟ್ ವಿವರಗಳನ್ನು ತೆರೆಯಬೇಕು ಮತ್ತು ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ದೇಶದ ಅತೀ ದೊಡ್ಡ ಬ್ಯಾಂಕ್ ಗೆ ಹಿನ್ನಡೆ
“ಮಂಗಳವಾರದ ಕೆಲಸದ ಅವಧಿಯಲ್ಲಿಯೇ (Business Hours) ಚುನಾವಣಾ ಬಾಂಡ್ಗಳ ಕುರಿತು ಎಸ್ಬಿಐ, ಚುನಾವಣೆ ಆಯೋಗಕ್ಕೆ ಮಾಹಿತಿ ನೀಡಬೇಕು. ಇನ್ನು ಚುನಾವಣೆ ಆಯೋಗವು ಮಾರ್ಚ್ 15ರ ಸಂಜೆ 5 ಗಂಟೆಯೊಳಗೆ ಎಸ್ಬಿಐ ನೀಡಿದ ಮಾಹಿತಿಯನ್ನು ವೆಬ್ಸೈಟ್ನಲ್ಲಿ ಪ್ರಕಟಿಸಬೇಕು” ಎಂದು ಆದೇಶಿಸಿತು. ಇದರಿಂದಾಗಿ ಹೆಚ್ಚಿನ ಕಾಲಾವಧಿ ಬೇಕು ಎಂದು ಅರ್ಜಿ ಸಲ್ಲಿಸಿದ ಎಸ್ಬಿಐಗೆ ತೀವ್ರ ಹಿನ್ನಡೆಯಾದಂತಾಗಿದೆ.
ಎರಡು ವಿಭಾಗಗಳಲ್ಲಿ ಮಾಹಿತಿ ನೀಡಿ
ಎರಡು ವಿಭಾಗಗಳಲ್ಲಿ ಎಸ್ಬಿಐ ಮಾಹಿತಿ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಒಂದು ವಿಭಾಗದಲ್ಲಿ, ಚುನಾವಣೆ ಬಾಂಡ್ಗಳನ್ನು ಖರೀದಿಸಿ ದೇಣಿಗೆ ನೀಡಿದವರ ಮಾಹಿತಿ, ಹೆಸರು, ಅವರು ನೀಡಿದ ಮೊತ್ತದ ದಾಖಲೆ ಇರಬೇಕು. ಇನ್ನು, ಎರಡನೇ ಭಾಗದಲ್ಲಿ ರಾಜಕೀಯ ಪಕ್ಷಗಳು ಬಾಂಡ್ಗಳ ಮೂಲಕ ದೇಣಿಗೆಯನ್ನು ನಗದೀಕರಣ (Redeem) ಮಾಡಿಕೊಂಡಿರುವ ಕುರಿತು ಮಾಹಿತಿ ಇರಬೇಕು ಎಂದು ಸೂಚಿಸಿದೆ.
ಏನಿದು ಪ್ರಕರಣ?
22,217 ಚುನಾವಣಾ ಬಾಂಡ್ಗಳ ಮಾರಾಟದ ಕುರಿತು ಎಲ್ಲ ಮಾಹಿತಿ ಸಂಗ್ರಹಿಸಲು ಇನ್ನಷ್ಟು ಸಮಯ ಬೇಕು ಎಂದು ಸಪ್ರೀಂ ಕೋರ್ಟ್ಗೆ ಎಸ್ಬಿಐ ಮನವಿ ಮಾಡಿತ್ತು. ಫೆಬ್ರವರಿ 15ರಂದು ಸುಪ್ರೀಂ ಕೋರ್ಟ್ ಹೊರಡಿಸಿದ ತೀರ್ಪಿನ ಪ್ರಕಾರ, ಮಾರ್ಚ್ 6ರೊಳಗೆ ಚುನಾವಣಾ ಆಯೋಗಕ್ಕೆ ಚುನಾವಣಾ ಬಾಂಡ್ಗಳ ಕುರಿತು ಮಾಹಿತಿ ನೀಡಬೇಕಿತ್ತು. ಅಷ್ಟೇ ಅಲ್ಲ, ವೆಬ್ಸೈಟ್ನಲ್ಲಿ ದೇಣಿಗೆ ನೀಡಿದವರ ಮಾಹಿತಿಯನ್ನು ಮಾರ್ಚ್ 13ರೊಳಗೆ ಎಸ್ಬಿಐ ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಬೇಕಿತ್ತು. ಕೊನೆಗೆ ನ್ಯಾಯಾಲಯವು, ಜೂನ್ 30ರವರೆಗೆ ಕಾಲಾವಕಾಶ ಕೋರಿದ್ದ ಎಸ್ಬಿಐ ಅರ್ಜಿಯನ್ನು ತಿರಸ್ಕರಿಸಿ, ಮಂಗಳವಾರ ಸಂಜೆಯೊಳಗೆ ಮಾಹಿತಿ ಒದಗಿಸಬೇಕು ಎಂದು ಆದೇಶಿಸಿತು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ