'ಭಾರತ್ ಜೋಡೋ ನ್ಯಾಯ ಯಾತ್ರೆ': ಹೆದರುವುದಿಲ್ಲ, ಮತ್ತಷ್ಟು ಎಫ್ಐಆರ್ ದಾಖಲಿಸಿ; ಅಸ್ಸಾಂ ಪೊಲೀಸರಿಗೆ ರಾಹುಲ್ ಗಾಂಧಿ ಸವಾಲು
ಬರ್ಪೆಟಾ (ಅಸ್ಸಾಂ): ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆ ಅಸ್ಸಾಂನಲ್ಲಿದ್ದು, ಈ ವೇಳೆ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದಾರೆಂಬ ಆರೋಪ ಹಿನ್ನೆಲೆಯಲ್ಲಿ ಅಸ್ಸಾಂ ಪೊಲೀಸರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಇತರೆ ನಾಯಕರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಈ ಬೆಳವಣಿಗೆಯನ್ನು ರಾಹುಲ್ ಗಾಂಧಿ ಖಂಡಿಸಿದ್ದಾರೆ.
ಬರ್ಪೇಟಾ ಜಿಲ್ಲೆಯಲ್ಲಿ 'ಭಾರತ್ ಜೋಡೊ ನ್ಯಾಯ್ ಯಾತ್ರೆ’ಯ 7 ನೇ ದಿನದಂದು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ನಾವು ಹೆದರುವುದಿಲ್ಲ. ನಮ್ಮ ವಿರುದ್ಧ ಮತ್ತಷ್ಟು ಎಫ್ಐಆರ್ ಗಳನ್ನು ದಾಖಲಿಸಿ ಎಂದು ಅಸ್ಸಾಂ ಪೊಲೀಸರಿಗೆ ಸವಾಲು ಹಾಕಿದ್ದಾರೆ.
ಬಿಜೆಪಿ ಆಡಳಿತವಿರುವ ರಾಜ್ಯವು ತಮಗೆ ಎಷ್ಟು ಸಾಧ್ಯವೋ ಅಷ್ಟು ಪ್ರಕರಣಗಳನ್ನು ನಮ್ಮ ಮೇಲೆ ದಾಖಲಿಸಲು ಧೈರ್ಯ ಮಾಡಿದೆ. ಆದರೆ, ನಾವು ಹೆದರುವುದಿಲ್ಲ ಎಂದು ಹೇಳಿದ್ದಾರೆ. ಇಜೇ ವೇಶೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರನ್ನು ಭ್ರಷ್ಟ ಮುಖ್ಯಮಂತ್ರಿ ಎಂದು ಟೀಕಿಸಿದ್ದಾರೆ.
‘ಕೇಸ್ ಹಾಕುವ ಮೂಲಕ ನನ್ನನ್ನು ಬೆದರಿಸಬಹುದು ಎಂಬ ಆಲೋಚನೆ ಹಿಮಂತ ಬಿಸ್ವ ಶರ್ಮಾ ಅವರಿಗೆ ಹೇಗೆ ಬಂದಿತೋ ಗೊತ್ತಿಲ್ಲ, ಎಷ್ಟು ಸಾಧ್ಯವೋ ಅಷ್ಟು ಪ್ರಕರಣಗಳನ್ನು ದಾಖಲಿಸಿ. ಇನ್ನೂ 25 ಕೇಸ್ ದಾಖಲು ಮಾಡಿ, ಬಿಜೆಪಿ-ಆರ್ಎಸ್ಎಸ್ ಕೂಡ ನನ್ನನ್ನು ಹೆದರಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಅಸ್ಸಾಂನ ಭಾಷೆ, ಸಂಸ್ಕೃತಿ ಮತ್ತು ಇತಿಹಾಸವನ್ನು ಅಳಿಸಿ ಹಾಕಲು ಬಿಜೆಪಿ-ಆರ್ಎಸ್ಎಸ್ ಬಯಸಿದೆ. ಅಸ್ಸಾಂ ಅನ್ನು ನಾಗ್ಪುರದಿಂದ ಹೊರಗಿಡಲು ಯತ್ನಿಸುತ್ತಿದೆ, ಆದರೆ ನಾವು ಅದಕ್ಕೆ ಅವಕಾಶ ನೀಡುವುದಿಲ್ಲ. ಅಸ್ಸಾಂ ಅನ್ನು ಅಸ್ಸಾಂನಿಂದ ಮಾತ್ರ ಆಳಲು ಸಾಧ್ಯ ಎಂದಿದ್ದಾರೆ.
ಇದೇ ವೇಳೆ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧವೂ ವಾಗ್ದಾಳಿ ನಡೆಸಿರುವ ಅವರು, ಮೋದಿ, ಅಮಿತ್ ಶಾ ಹಾಗೂ ಶರ್ಮಾ ಅವರ ಹೃದಯಗಳು "ದ್ವೇಷದಿಂದ ತುಂಬಿವೆ" ಎಂದು ಕಿಡಿಕಾರಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ