
ನವದೆಹಲಿ: ದೇಶದಾದ್ಯಂತ ಹನುಮ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತಿವೆ. ದೇಗುಲಕ್ಕೆ ಆಗಮಿಸುತ್ತಿರುವ ಭಕ್ತರು ಮಹಾಬಲಿ ಹನುಮಂತನ ನಾಮಸ್ಮರಣೆ ಮಾಡುತ್ತಾ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಉತ್ತರಪ್ರದೇಶದ ಅಯೋಧ್ಯೆಯಲ್ಲಿರುವ ಹನುಮಂತನ ದೇವಾಲಯ, ಮಧ್ಯಪ್ರದೇಶದ ಮಹಾಕಾಳೇಶ್ವರ ದೇವಾಲಯ, ದೆಹಲಿಯ ಹನುಮಾನ್ ಬಾಬಾ ದೇವಾಲಯ ಹಾಗೂ ಬೆಂಗಳೂರಿನ ಬ್ಯಾಟರಾಯನಪುರದಲ್ಲಿರುವ ಗಾಳಿ ಆಂಜನೇಯ ಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತಿವೆ. ದೇವಾಲಯಕ್ಕೆ ಆಗಮಿಸುತ್ತಿರುವ ಭಕ್ತರು ಸಾಲುಗಟ್ಟಿ ನಿಂತು ಹನುಮಂತನೆ ದರ್ಶನ ಪಡೆಯುತ್ತಿದ್ದಾರೆ.
ಹನುಮನು ಹಿಂದೂ ಧರ್ಮಗ್ರಂಥಗಳಲ್ಲಿ ಪೂಜಿಸುವ ದೈವವಾಗಿದ್ದು, ಭಾರತದ ಮಹಾಕಾವ್ಯ ಎಂದೇ ಹೇಳಲಾಗುವ ರಾಮಾಯಣದಲ್ಲಿ ಪ್ರಮುಖ ಪಾತ್ರಗಳಲ್ಲೊಬ್ಬನಾಗಿದ್ದಾನೆ. ವಾಯುಪುತ್ರ, ಕಪಿವೀರ, ರಾಮಭಕ್ತ, ಮಾರುತಿ, ಸುಂದರ, ಅಂಜನಾತನಯ, ಆಂಜನೇಯ, ವಾನರ ಶ್ರೇಷ್ಠ, ಕೇಸರಿ ನಂದನ, ಹನುಮಂತ, ಕೇಸರಿ ನಂದನ ಎಂಬ ನಾನಾ ಹೆಸರಿನಲ್ಲಿ ಕರೆಯಲ್ಪಡುವ ಈ ಹನುಮನ ಉಲ್ಲೇಖ ವೈದಿಕ ಸಾಹಿತ್ಯದಲ್ಲೇ ಲಭಿಸುತ್ತದೆ. ಪುರಾಣಗಳಲ್ಲಿ ಅವನು ಕೇಸರಿಯೆಂಬ ವಾನರ ರಾಜನ ಮಡದಿ ಅಂಜನಾದೇಯೆಂಬ ಅಪ್ಸರೆಯಲ್ಲಿ ವಾಯುನ ಅಂಶದಿಂದ ಜನ್ಮ ತಾಳಿದನೆಂದು ಹೇಳಲಾಗಿದೆ.
ಅಂಜನಾ ದೇವಿಯು ಪುಂಜಿಕಸ್ಥಲೆಯೆಂಬ ಅಪ್ಸರೆಯಾಗಿದ್ದಳು. ಹನುಮಂತನ ಕಲ್ಪನೆಯಲ್ಲಿ ಹಾಸುಹೊಕ್ಕಾಗಿರುವ ವಿವರಗಳು ವೇದವಾಙ್ಮಯದಲ್ಲಿ ಹಲವಾರಿವೆ. ಈ ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ ಹನುಮಂತನ ಸ್ವಾರಸ್ಯ ಇಮ್ಮಡಿಸುತ್ತದೆ. ಮಗುವಾಗಿದ್ದಾಗ ಸೂರ್ಯನನ್ನು ಹಿಡಿದು ಬಾಯೊಳಗೆ ಅಡಗಿಸಿಕೊಂಡನೆಂದು ಕತ್ತಲೆ ಉಂಟಾಯಿತು. ಇಂದ್ರನಿಗೆ ರೋಷ ಬಂದು ಅವನ ವಜ್ರಾಯುಧದ ಪ್ರಹಾರದಿಂದ ಹನು (ದವಡೆ) ದೊಡ್ಡದಾಯಿತು. ಹೀಗಾಗಿ ಅವನಿಗೆ ಹನುಮಂತ ಎಂಬ ಹೆಸರು ಬಂತು. ಆಚಾರ್ಯ ಮಧ್ವರ ಒಕ್ಕಣೆಯಂತೆ ಹನುಮನೆಂದರೆ ಜ್ಞಾನ ಅಂದರೆ ಬುದ್ಧಿಮತಾಂ ವರಿಷ್ಠ, ಪೂರ್ಣಪ್ರಜ್ಞ.
ಹನುಮ ದೇವರ ಸ್ಮರಣೆ ಎಲ್ಲಿರಲ್ಲೂ ಒಂದು ವಿಶೇಷ ಶಕ್ತಿಯನ್ನು ತುಂಬುತ್ತದೆ. ರಾಮದೂತನನ್ನು ನೆನೆಯುವ ದಿನವೇ ಹನುಮ ಜಯಂತಿಯಾಗಿದ್ದು, ತ್ರೇತಾಯುಗದಲ್ಲಿ ರಾಮಭಕ್ತನಾಗಿ ಅವತಾರ ಮಾಡಿದ ಹನುಮನಿಗೆ ಅನೇಕ ವಿಧವಾದ ಶಕ್ತಿಯಿರುವುದನ್ನು ರಾಮಾಯಣದಲ್ಲಿ ತಿಳಿದುಕೊಳ್ಳಬಹುದು. ಭಾರತೀಯ ಶಾಸ್ತ್ರಗಳಲ್ಲೂ ಹನಮಂತನ ಸ್ಮರಣೆಯಿಂದಾಗುವ ಲಾಭಗಳ ಬಗ್ಗೆ ಸಾಕಷ್ಟು ಉಲ್ಲೇಖಗಳಿವೆ.
Advertisement