
ಚಂಡೀಗಢ: ಮೀರತ್ನಲ್ಲಿ ನಡೆದ ಸೌರಭ್ ಕೊಲೆ ಪ್ರಕರಣವನ್ನೇ ನೆನಪಿಸುವ ಮತ್ತೊಂದು ಭೀಕರ ಹತ್ಯೆ ಹರ್ಯಾಣದಲ್ಲಿ ವರದಿಯಾಗಿದ್ದು, ಸಾಮಾಜಿಕ ಜಾಲತಾಣದ ಗೀಳು ಹಚ್ಚಿಸಿಕೊಂಡಿದ್ದ ಪತ್ನಿ ಯೂಟ್ಯೂಬರ್ ಜೊತೆ ಅಕ್ರಮ ಸಂಬಂಧ ಹೊಂದಿ ಅದನ್ನು ಪ್ರಶ್ನಿಸಿದ ಗಂಡನನ್ನೇ ಕೊಂದು ಮುಗಿಸಿದ್ದಾಳೆ.
ಹರ್ಯಾಣದ ಭಿವಾನಿಯಲ್ಲಿ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿದ್ದು, ಪತಿ ಪ್ರವೀಣ್ ನನ್ನು ಕೊಲೆ ಮಾಡಿದ ಆರೋಪದ ಮೇರೆಗೆ ಆತನ ಪತ್ನಿ ರವೀನಾ ಮತ್ತು ಹರ್ಯಾಣದ ಯೂಟ್ಯೂಬರ್ ಸುರೇಶ್ ಎಂಬುವವರರನ್ನು ಪೊಲೀಸರು ಬಂಧಿಸಿದ್ದಾರೆ. ಈ ಕೊಲೆ ಸ್ಥಳೀಯ ಸಮುದಾಯವನ್ನು ಬೆಚ್ಚಿಬೀಳಿಸಿದ್ದು, ಸಾಮಾಜಿಕ ಮಾಧ್ಯಮದ ಗೀಳು ಮತ್ತು ವಿವಾಹೇತರ ಸಂಬಂಧಗಳ ಕರಾಳ ಮುಖವನ್ನು ಬೆಳಕಿಗೆ ತಂದಿದೆ.
ಭಿವಾನಿಯ ಹಳೆಯ ಬಸ್ ನಿಲ್ದಾಣದ ಬಳಿಯ ಗುಜ್ರೋನ್ ಕಿ ಧಾನಿಯ ನಿವಾಸಿ ಪ್ರವೀಣ್ (35), ರೇವಾರಿ ಜಿಲ್ಲೆಯ ಜೂಡಿ ಗ್ರಾಮದ ರವೀನಾ (32) ಅವರನ್ನು ವಿವಾಹವಾಗಿದ್ದರು. ದಂಪತಿಗೆ ಆರು ವರ್ಷದ ಮಗ ಮುಕುಲ್ ಇದ್ದಾನೆ. ಪ್ರಸುತ ಈ ಮಗು ತನ್ನ ಅಜ್ಜ ಸುಭಾಷ್ ಮತ್ತು ಚಿಕ್ಕಪ್ಪ ಸಂದೀಪ್ ಜೊತೆ ವಾಸಿಸುತ್ತಿದ್ದಾನೆ.
ಇನ್ಸ್ಟಾಗ್ರಾಂ ಗೀಳು ಹಚ್ಚಿಸಿಕೊಂಡಿದ್ದ ರವೀನಾ
ರವೀನಾ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿ ಕಾಣಿಸಿಕೊಂಡು ಹೆಸರುವಾಸಿಯಾಗಿದ್ದಳು. ಇನ್ಸ್ಟಾಗ್ರಾಮ್ನಲ್ಲಿ 34,000 ಕ್ಕೂ ಹೆಚ್ಚು ಫಾಲೋವರ್ಸ್ ರನ್ನು ಕೂಡ ಹೊಂದಿದ್ದಳು. ಈಗ್ಗೇ ರವೀನಾಗೆ ಸಾಮಾಜಿಕ ಜಾಲತಾಣದಲ್ಲಿ ಯೂಟ್ಯೂಬರ್ ಸುರೇಶ್ ಪರಿಚಯವಾಗಿದ್ದು, ಕ್ರಮೇಣ ಇಬ್ಬರೂ ಸೇರಿ ಇನ್ ಸ್ಟಾ ರೀಲ್ಸ್ ಮಾಡುತ್ತಿದ್ದರು. ಸುರೇಶ್ ಮೂಲತಃ ಹಿಸಾರ್ನ ಪ್ರೇಮ್ನಗರ ನಿವಾಸಿಯಾಗಿದ್ದು ಈತ ಕೂಡ ಯೂಟ್ಯೂಬ್ ನಲ್ಲಿ ಸಕ್ರಿಯನಾಗಿದ್ದ.
ಇನ್ಸ್ಟಾಗ್ರಾಮ್ನಲ್ಲಿ ಸಂಪರ್ಕ ಸಾಧಿಸಿದ ನಂತರ ತಾನು ಮತ್ತು ರವೀನಾ ಒಂದೂವರೆ ವರ್ಷಕ್ಕೂ ಹೆಚ್ಚು ಕಾಲ ಸಂಪರ್ಕದಲ್ಲಿದ್ದರು. ಇಬ್ಬರೂ ಒಟ್ಟಿಗೆ ಸಣ್ಣ ಸಣ್ಣ ವೀಡಿಯೊಗಳನ್ನು ಮಾಡುತ್ತಿದ್ದರು. ಇದು ರವೀನಾ ಪತಿ ಪ್ರವೀಣ್ ಗೆ ಇಷ್ಟವಿರಲಿಲ್ಲ. ಆತನಿಗೆ ರವೀನಾ ದಾರಿ ತಪ್ಪುತ್ತಾಳೆ ಎಂಬ ಭಯವಿತ್ತು. ಹೀಗಾಗಿ ರೀಲ್ಸ್ ಮಾಡದಂತೆ ಬುದ್ದಿ ಹೇಳುತ್ತಿದ್ದ. ಆದಾಗ್ಯೂ ರವೀನಾ ವಿಡಿಯೋಗಳನ್ನು ಮಾಡುವುದುನ್ನು ಮುಂದುವರೆಸಿದ್ದಳು.
ಪತ್ನಿ ರವೀನಾಳ ಈ ನಡೆಯಿಂದಾ ಪ್ರವೀಣ್ ಆಗಾಗ ಆಕ್ರೋಶಗೊಳ್ಳುತ್ತಿದ್ದ. ಇದೇ ಕಾರಣಕ್ಕೆ ದಂಪತಿಗಳ ನಡುವೆ ಆಗಾಗ ಜಗಳ ಕೂಡ ನಡೆಯುತ್ತಿತ್ತು. ಹಲವು ಬಾರಿ ರವೀನಾ ವಿಡಿಯೋ ಶೂಟ್ ಮಾಡಲು ಪತಿಗೆ ಹೇಳದೇ ಹೋಗುತ್ತಿದ್ದಳು. ಇದು ಪ್ರವೀಣ್ ಆಕ್ರೋಶಕ್ಕೆ ಕಾರಣವಾಗುತ್ತಿತ್ತು.
ಮನೆಯಲ್ಲೇ ಕಾಮಕೇಳಿ?, ರೆಡ್ ಹ್ಯಾಂಡ್ ಸಿಕ್ಕಿಬಿದ್ದ ರವೀನಾ
ಯಾವ ಭಯದಿಂದ ಪ್ರವೀಣ್ ರೀಲ್ಸ್ ಮಾಡಬೇಡ ಎಂದು ಪತ್ನಿ ರವೀನಾಗೆ ಹೇಳುತ್ತಿದ್ದನೋ ಅದೇ ಆತಂಕ ನಿಜವಾಗಿತ್ತು. ಪರಸ್ಪರ ರೀಲ್ಸ್ ಮಾಡುತ್ತಿದ್ದ ರವೀನಾ ಮತ್ತು ಸುರೇಶ್ ನಡುವೆ ಅಕ್ರಮ ಸಂಬಂಧ ಏರ್ಪಟ್ಟಿತ್ತು. ಪೊಲೀಸ್ ಮೂಲಗಳ ಪ್ರಕಾರ ಮಾರ್ಚ್ 25 ರಂದು ಪತಿ ಪ್ರವೀಣ್ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಪತ್ನಿ ರವೀನಾ ಹರ್ಯಾಣದ ಯೂಟ್ಯೂಬರ್ ಸುರೇಶ್ ಮನೆಗೆ ಕರೆಸಿಕೊಂಡಿದ್ದಳು. ಇಬ್ಬರೂ ಮನೆಯಲ್ಲಿದ್ದಾಗ ಅಚಾನಕ್ಕಾಗಿ ಮನೆಗೆ ಬಂದ ಪ್ರವೀಣ್ ಇಬ್ಬರನ್ನೂ ಅಶ್ಲೀಲ ಸ್ಥಿತಿಯಲ್ಲಿ ನೋಡಿದ್ದಾನೆ. ಈ ವೇಳೆ ಸುರೇಶ್ ಮೇಲೆ ಹಲ್ಲೆ ಮಾಡಿದ ಪ್ರವೀಣ್ ಪತ್ನಿ ರವೀನಾಗೂ ಥಳಿಸಿದ್ದಾನೆ. ಇದೇ ಹೊತ್ತಿನಲ್ಲಿ ರವೀನಾ ಮತ್ತು ಸುರೇಶ್ ಇಬ್ಬರೂ ಸೇರಿ ವಿಷಯ ಹೊರಗೆ ತಿಳಿದರೆ ನಮಗೆ ತೊಂದರೆ ಎಂದು ಭಾವಿಸಿ ದುಪ್ಪಟಾದಿಂದ ಪ್ರವೀಣ್ ನ ಕುತ್ತಿಗೆ ಹಿಸುಕಿ ಕೊಂದು ಹಾಕಿದ್ದಾರೆ.
ಬೈಕ್ ನಲ್ಲಿ ಪ್ರವೀಣ್ ಶವ ಸಾಗಾಟ
ಪ್ರವೀಣ್ ನನ್ನು ಕೊಂದ ಬಳಿಕ ಶವವನ್ನು ವಿಲೇವಾರಿ ಮಾಡಲು ತಡರಾತ್ರಿಯವರೆಗೆ ಕಾದರು. ಮಾರ್ಚ್ 25ರ ಮಧ್ಯರಾತ್ರಿ ಪ್ರವೀಣ್ ಶವವನ್ನು ರವೀನಾ ಮತ್ತು ಸುರೇಶ್ ಇಬ್ಬರೂ ಬೈಕ್ ನಲ್ಲಿ ಹಾಕಿಕೊಂಡು ಮನೆಯಿಂದ ಸುಮಾರು 6 ಕಿಮೀ ದೂರದಲ್ಲಿರುವ ದಿನ್ನೋಡ್ ರಸ್ತೆಯ ಉದ್ದಕ್ಕೂ ಇರುವ ಚರಂಡಿಯಲ್ಲಿ ಎಸೆದ ವಾಪಸ್ ಆಗಿದ್ದಾರೆ.
ಸಿಸಿಟಿವಿ ಹೇಳಿದ ಸತ್ಯ
ಇನ್ನು ಪ್ರವೀಣ್ ಕೊಲೆ ಹೊರತಾಗಿಯೂ ದಿನವಿಡೀ ಸಾಮಾನ್ಯವಾಗಿ ವರ್ತಿಸುತ್ತಿದ್ದಳು. ಕುಟುಂಬ ಸದಸ್ಯರು ಪ್ರವೀಣ್ ಎಲ್ಲಿದ್ದಾನೆಂದು ಕೇಳಿದಾಗ, ಆಕೆ ಗೊತ್ತಿಲ್ಲ ಎಂದು ನುಣುಚಿಕೊಳ್ಳುತ್ತಿದ್ದಳು. ಮೂರು ದಿನಗಳ ನಂತರ, ಮಾರ್ಚ್ 28 ರಂದು, ಸದರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರವೀಣ್ನ ಕೊಳೆತ ಶವ ಪತ್ತೆಯಾಗಿತ್ತು. ಈ ಶವ ಯಾರದ್ದು ಎಂದು ಪೊಲೀಸರು ತನಿಖೆ ನಡೆಸಿದಾಗ ಅದು ಪ್ರವೀಣ್ ನದ್ದು ಎಂದು ತಿಳಿದುಬಂತು. ಬಳಿಕ ಪೊಲೀಸರು ಸ್ಥಳೀಯ ಸಿಸಿಟಿವಿಗಳನ್ನು ಪರಿಶೀಲಿಸಿದಾಗ ಹೆಲ್ಮೆಟ್ ಧರಿಸಿದ ಸವಾರ ಮತ್ತು ಮುಸುಕು ಧರಿಸಿದ ಮಹಿಳೆ ಶವದಂತೆ ಕಾಣುವ ವಸ್ತುವನ್ನು ಬೈಕ್ ಮೇಲೆ ಸಾಗಿಸುತ್ತಿರುವುದು ಕಂಡುಬಂದಿತ್ತು. ಇದು ಪೊಲೀಸರು ರವೀನಾ ಮತ್ತು ಸುರೇಶ್ ಅವರ ಮೇಲೆ ಅನುಮಾನಗೊಳ್ಳಲು ಕಾರಣವಾಗಿತ್ತು.
ಬಳಿಕ ಇಬ್ಬರನ್ನೂ ವಿಚಾರಣೆಗೊಳಪಡಿಸಿದಾಗ ಅವರು ತಪ್ಪೊಪ್ಪಿಕೊಂಡರು. ಪೊಲೀಸ್ ಕಸ್ಟಡಿ ನಂತರ ಇಬ್ಬರೂ ಆರೋಪಿಗಳನ್ನು ಜೈಲಿಗೆ ಕಳುಹಿಸಲಾಗಿದೆ.
Advertisement