
ಚೆನ್ನೈ: ಹಿಂದೂ ಧರ್ಮ, ಮಹಿಳೆಯರ ಕುರಿತು ಅವಹೇಳನಕಾರಿ ಹೇಳಿಕೆ ಮತ್ತು ದ್ವೇಷ ಭಾಷಣ ಮಾಡಿ ವ್ಯಾಪಕ ಟೀಕೆಗೆ ಗುರಿಯಾಗಿದ್ದ ತಮಿಳುನಾಡು ಸಚಿವ ಕೆ. ಪೊನ್ಮುಡಿ ವಿರುದ್ಧ ಪ್ರಕರಣ ದಾಖಲಿಸುವಂತೆ ತಮಿಳುನಾಡು ಪೊಲೀಸರ ವಿರುದ್ಧ ಮದ್ರಾಸ್ ಹೈಕೋರ್ಟ್ ಚಾಟಿ ಬೀಸಿದೆ.
ಡಿಎಂಕೆ ಸಚಿವ ಪೊನ್ಮುಡಿ ಹಿಂದೂ ಧಾರ್ಮಿಕ ಚಿಹ್ನೆಗಳನ್ನು ಲೈಂಗಿಕ ಭಂಗಿಗಳೊಂದಿಗೆ ಹೋಲಿಕೆ ಮಾಡಿದ್ದರು. ಶೈವ ಮತ್ತು ವೈಷ್ಣವ ಧರ್ಮದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಮಾತ್ರವಲ್ಲದೇ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ತೋರಿಸುವ ಸಾರ್ವಜನಿಕ ಕಾರ್ಯಕ್ರಮವೊಂದರ ವೀಡಿಯೊ ವೈರಲ್ ಆಗಿತ್ತು.
ಈ ವಿಡಿಯೋಗೆ ವಿಪಕ್ಷಗಳು ಮಾತ್ರವಲ್ಲದೇ ಡಿಎಂಕೆ ಪಕ್ಷದ ಮಹಿಳಾ ನಾಯಕರೇ ತೀವ್ರ ಕಿಡಿಕಾರಿದ್ದರು. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಡಿಎಂಕೆ ನಾಯಕಿ ಕನ್ನಿಮೋಳಿ, 'ಸಚಿವ ಪೊನ್ಮುಡಿ ಅವರ ಇತ್ತೀಚಿನ ಹೇಳಿಕೆ ಸ್ವೀಕಾರಾರ್ಹವಲ್ಲ. ಪೊನ್ಮುಡಿ ಯಾವುದೇ ಕಾರಣಕ್ಕಾಗಿ ಮಾತನಾಡಿದ್ದರೂ, ಅಂತಹ ಅಸಭ್ಯ ಪದಗಳು ಖಂಡನೀಯ ಎಂದು ಟೀಕಿಸಿದ್ದರು.
ಕೇಸ್ ಹಾಕಿ, ಇಲ್ಲ ನಾವೇ ಕ್ರಮ ಕೈಗೊಳ್ಳುತ್ತೇವೆ
ಇನ್ನು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಮದ್ರಾಸ್ ಹೈಕೋರ್ಟ್, "ದ್ವೇಷ ಭಾಷಣ"ಕ್ಕಾಗಿ ಪೋನ್ಮುಡಿ ವಿರುದ್ಧ ಎಫ್ಐಆರ್ ದಾಖಲಿಸಿ ಏಪ್ರಿಲ್ 23, 2025 ರೊಳಗೆ ನ್ಯಾಯಾಲಯಕ್ಕೆ ಮಾಹಿತಿ ನೀಡುವಂತೆ ತಮಿಳುನಾಡು ರಾಜ್ಯ ಪೊಲೀಸರಿಗೆ ಗುರುವಾರ ಸೂಚನೆ ನೀಡಿದೆ. ಅಂತೆಯೇ ಒಂದು ವೇಳೆ ನೀವು ಎಫ್ಐಆರ್ ದಾಖಲಿಸದಿದ್ದರೆ, ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿ ವಿಚಾರಣೆಗೆ ತೆಗೆದುಕೊಳ್ಳುತ್ತೇವೆ, ಈಗ ನ್ಯಾಯಾಲಯವು ಈ ವಿಷಯವನ್ನು ಗಮನಕ್ಕೆ ತೆಗೆದುಕೊಂಡಿದೆ ಎಂದು ಎಚ್ಚರಿಕೆ ನೀಡಿದೆ.
ಡಿಎಂಕೆ ಸರ್ಕಾರದ ಪರ ವಾದ ಮಂಡಿಸುತ್ತಿರುವ ಅಡ್ವೊಕೇಟ್ ಜನರಲ್ ಪಿ.ಎಸ್. ರಾಮನ್ ಅವರನ್ನು ಉದ್ದೇಶಿಸಿ ಮಾತನಾಡಿದ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಎನ್. ಆನಂದ್ ವೆಂಕಟೇಶ್ ಅವರು, 'ಸ್ವೀಕರಿಸಿದ ದೂರುಗಳ ಆಧಾರದ ಮೇಲೆ ಹೆಚ್ಚು ಎಫ್ಐಆರ್ಗಳನ್ನು ದಾಖಲಿಸುವ ಬದಲು ಒಂದೇ ಎಫ್ಐಆರ್ ದಾಖಲಿಸಿದರೆ ಸಾಕು. ಒಂದು ವೇಳೆ ಪೊಲೀಸರು ಹಾಗೆ ಮಾಡಲು ವಿಫಲವಾದರೆ ನ್ಯಾಯಾಲಯವು ಸ್ವಯಂಪ್ರೇರಿತ ಪ್ರಕರಣವನ್ನು ತೆಗೆದುಕೊಳ್ಳುತ್ತದೆ' ಎಂದು ಎಚ್ಚರಿಸಿದರು.
ಕೋರ್ಟ್ ಮಧ್ಯಪ್ರವೇಶಿಸುವುದಿಲ್ಲ.. ಆದರೆ..
ಇದೇ ವೇಳೆ ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಪೀಠ, 'ನಾವು ಇದರಲ್ಲಿ ತೊಡಗಿದ ತಕ್ಷಣ, ಇದು ಬೇರೆಯದೇ ಬಣ್ಣ ಪಡೆಯುತ್ತದೆ. ಆದರೆ ನಾವು ಅದನ್ನು ಬಯಸುವುದಿಲ್ಲ. ಅವಹೇಳನಕಾರಿ ಭಾಷಣದ ವೀಡಿಯೊ ಇನ್ನೂ ಸಾರ್ವಜನಿಕ ವಲಯದಲ್ಲಿದೆ. ಅದನ್ನು ಮುಂದುವರಿಸಲು ಅನುಮತಿಸಲಾಗುವುದಿಲ್ಲ. ಕಾನೂನು ಎಲ್ಲರಿಗೂ ಅನ್ವಯಿಸುತ್ತದೆ. ಇತರರು ಮಾಡಿದ ದ್ವೇಷ ಭಾಷಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದಾಗ, ಸರ್ಕಾರದ ಭಾಗವಾಗಿರುವ ವ್ಯಕ್ತಿಗಳು ಅದೇ ತಪ್ಪು ಮಾಡಿದಾಗಲೂ ಅವರ ವಿರುದ್ಧವೂ ಅದೇ ವಿಧಾನ ಅನುಸರಿಸಬೇಕು. ಸಾರ್ವಜನಿಕ ಹುದ್ದೆಯಲ್ಲಿರುವ ಯಾರಾದರೂ ಅಶ್ಲೀಲ, ದ್ವೇಷದ ಹೇಳಿಕೆಗಳನ್ನು ನೀಡಿದ ನಂತರವೂ ತಪ್ಪಿಸಿಕೊಳ್ಳಬಹುದು ಎಂಬ ಅಭಿಪ್ರಾಯವನ್ನು ಅಳಿಸಿಹಾಕಬೇಕು ಎಂದು ಪೀಠ ಒತ್ತಿ ಹೇಳಿದೆ.
ಕ್ಷಮೆ ಯಾಚಿಸಿದ್ದಾರೆ ಎಂದ ಎಜಿ, FIR ದಾಖಲಾಗಿದೆಯಾ? ಎಂದ ಪೀಠ
ಇನ್ನು ಕೋರ್ಟ್ ಪ್ರಶ್ನೆಗಳಿಗೆ ಉತ್ತರ ನೀಡಿದ ಅಡ್ವೊಕೇಟ್ ಜನರಲ್ ಪಿ.ಎಸ್. ರಾಮನ್ ಅವರು, 'ಈ ವಿಷಯದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಅಲ್ಲದೆ ಆ ವ್ಯಕ್ತಿಯೇ ತಾನು ಹೇಳಿದ್ದನ್ನು ತಪ್ಪು ಎಂದು ಕ್ಷಮೆಯಾಚಿಸಿದ್ದಾರೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೋರ್ಟ್, ಪೊಲೀಸರು ವಿಚಾರಣೆ ನಡೆಸಲು ಕಾಯಬೇಕು. ಈ ವಿಷಯದ ಬಗ್ಗೆ ಎಫ್ಐಆರ್ ದಾಖಲಿಸಲಾಗಿದೆಯೇ? ಎಂದು ಪ್ರಶ್ನಿಸಿತು. ಅಲ್ಲದೆ "ದ್ವೇಷ ಭಾಷಣ" ದಂತಹ ಪ್ರಕರಣದಲ್ಲಿ ದಾಖಲಾಗುವ ದೂರಿಗಾಗಿ ಕಾಯದೆ ಎಫ್ಐಆರ್ಗಳನ್ನು ದಾಖಲಿಸಬಹುದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ ಎಂದು ಪೀಠ ಹೇಳಿತು.
Advertisement