ಮಹಾರಾಷ್ಟ್ರ: ಕೆಫೆಯಲ್ಲಿ ಯುವತಿ ಜೊತೆಗೆ ಮಾತನಾಡುತ್ತಿದ್ದ ಮುಸ್ಲಿಂ ಯುವಕನ ಹತ್ಯೆ!
ಜಲಗಾಂವ್: ಕೆಫೆಯೊಂದರಲ್ಲಿ ಯುವತಿ ಜೊತೆಗೆ ಮಾತನಾಡುತ್ತಿದ್ದಕ್ಕೆ ಮುಸ್ಲಿಂ ಯುವಕನನ್ನು ದುಷ್ಕರ್ಮಿಗಳ ಗುಂಪೊಂದು ಹೊಡೆದು ಕೊಂದಿರುವ ಘಟನೆ ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯು ಸ್ಥಳದಲ್ಲಿ ಉದ್ವಿಗ್ನತೆಗೆ ಕಾರಣವಾಗಿದ್ದು, ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೃತನನ್ನು ಸುಲೇಮಾನ್ ರಹೀಮ್ ಖಾನ್ (21) ಎಂದು ಗುರುತಿಸಲಾಗಿದೆ. ಈತ ಎರಡು ದಿನಗಳ ಹಿಂದೆ ಸ್ಥಳೀಯ ಕೆಫೆಯೊಂದರಲ್ಲಿ 17 ವರ್ಷದ ಯುವತಿಯೊಂದಿಗೆ ಮಾತನಾಡುತ್ತಿರುವುದನ್ನು ಗಮನಿಸಿದ ನಂತರ ದಾಳಿ ನಡೆಸಲಾಗಿತ್ತು.
ಖಾನ್ ಮತ್ತು ಯುವಕರ ಗುಂಪಿನ ನಡುವೆ ವಾಗ್ವಾದ ನಡೆದಿತ್ತು. ಬಳಿಕ ಗುಂಪು ಬೇರೊಂದು ಸ್ಥಳಕ್ಕೆ ಯುವಕ ಹಾಗೂ ಯುವತಿಯನ್ನು ಕರೆದೊಯ್ದು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ದಾಳಿ ವೇಳೆ ತೀವ್ರವಾಗಿ ಖಾನ್ ತಲೆಗೆ ಪೆಟ್ಟಾಗಿತ್ತು. ಹೀಗಾಗಿ ಆತನನ್ನು ಪೋಷಕರು ಆಸ್ಪತ್ರೆಯೊಂದಕ್ಕೆ ಸೇರಿಸಿದ್ದರು.
ಆದರೆ, ಚಿಕಿತ್ಸೆ ವೇಳೆಯಲ್ಲಿ ಆತ ಮೃತಪಟ್ಟಿದ್ದಾನೆ. ಬರ್ಬರವಾಗಿ ಹೊಡೆದು ಹತ್ಯೆ ಮಾಡಲಾಗಿದೆ. ದೇಹದ ತುಂಬೆಲ್ಲಾ ಗಾಯಗಳಾಗಿವೆ ಎಂದು ಮೃತನ ತಂದೆ ಹೇಳಿದ್ದಾರೆ. ತಂದೆ ಮತ್ತು ಕುಟುಂಬದ ಇತರ ಸದಸ್ಯರು ಮಧ್ಯಪ್ರವೇಶಿಸಲು ಮುಂದಾದಾಗ ಅವರ ಮೇಲೂ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಜಮ್ನೇರ್ನಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದ್ದು, ವದಂತಿಗಳನ್ನು ಹರಡದಂತೆ ಎಚ್ಚರಿಕೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ನಂತರ, ಜಾಮ್ನೇರ್ ಪೊಲೀಸ್ ಠಾಣೆಯ ಹೊರಗೆ ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದರು. ಅಧಿಕಾರಿಗಳು ಈ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದಾರೆ
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ