
ಲಕ್ನೋ: ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶದ ನಂತರ ಮೊದಲ ಬಾರಿಗೆ ತಮ್ಮ ಸಂಸದೀಯ ಕ್ಷೇತ್ರ ರಾಯ್ ಬರೇಲಿಗೆ ಭೇಟಿ ನೀಡಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ (BSP) ಇಂಡಿಯಾ ಒಕ್ಕೂಟಕ್ಕೆ ಸೇರಿದ್ದರೆ 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲುತ್ತಿತ್ತು ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಬಿಎಸ್ಪಿ ಮುಖ್ಯಸ್ಥೆಯ ರಾಜಕೀಯ ತಂತ್ರವನ್ನು ಪ್ರಶ್ನಿಸಿದ ರಾಹುಲ್ ಗಾಂಧಿ, ಮಾಯಾವತಿಯವರು ಚುನಾವಣೆಯಲ್ಲಿ ಸರಿಯಾಗಿ ಸ್ಪರ್ಧಿಸುತ್ತಿಲ್ಲ ಏಕೆ ನಾವು ಅವರನ್ನು ಇಂಡಿಯಾ ಒಕ್ಕೂಟಕ್ಕೆ ಸೇರಲು ಕೇಳಿಕೊಂಡೆವು ಆದರೆ ಅವರು ನಿರಾಕರಿಸಿದರು. ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಬಿಎಸ್ಪಿ ಸೇರಿದಂತೆ ಎಲ್ಲಾ ಮೂರು ಪಕ್ಷಗಳು ಒಗ್ಗೂಡಿದ್ದರೆ, ಬಿಜೆಪಿ ಗೆಲ್ಲುತ್ತಿರಲಿಲ್ಲ ಎಂದರು.
ಲೋಕಸಭಾ ಚುನಾವಣೆಗೆ ಮುನ್ನ ಉತ್ತರ ಪ್ರದೇಶದಲ್ಲಿ ಮಾಯಾವತಿಯನ್ನು ಮೈತ್ರಿಕೂಟಕ್ಕೆ ಸೇರಿಸಿಕೊಳ್ಳುವುದನ್ನು ಸಮಾಜವಾದಿ ಪಕ್ಷ ವಿರೋಧಿಸಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಎರಡು ದಿನಗಳ ರಾಯ್ ಬರೇಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ತಮ್ಮ ಕ್ಷೇತ್ರದ ದಲಿತ ಸಮುದಾಯದ ವಿದ್ಯಾರ್ಥಿಗಳ ಜೊತೆ ಮಾತನಾಡಿದ ರಾಹುಲ್ ಗಾಂಧಿ ದೇಶದ ಸಂವಿಧಾನಕ್ಕೆ ದಲಿತರ ಕೊಡುಗೆಯನ್ನು ಎತ್ತಿ ತೋರಿಸಿದರು. ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಸೌಲಭ್ಯಗಳ ಕೊರತೆಯಿತ್ತು, ಆದರೂ ಅವರು ಇಡೀ ರಾಜಕೀಯ ವ್ಯವಸ್ಥೆಯನ್ನು ಅಲ್ಲಾಡಿಸಿದರು ಎಂದರು. ದೇಶದ ಪ್ರಮುಖ 500 ಸಂಸ್ಥೆಗಳಲ್ಲಿ ಕೆಲವು ಉನ್ನತ ಖಾಸಗಿ ಕಂಪನಿಗಳನ್ನು ಹೆಸರಿಸಿದ ರಾಹುಲ್ ಗಾಂಧಿ ಈ ಕಂಪನಿಗಳಲ್ಲಿ ಎಷ್ಟು ದಲಿತರು ನೇತೃತ್ವ ವಹಿಸಿದ್ದಾರೆ ಎಂದು ಕೇಳಿದರು. ಒಬ್ಬ ಯುವಕ ಯಾರೊಬ್ಬರೂ ಇಲ್ಲ ಎಂದು ಉತ್ತರಿಸಿದಾಗ, ರಾಹುಲ್ ಗಾಂಧಿ "ಯಾಕೆ ಇಲ್ಲ" ಎಂದು ಕೇಳಿದರು. ಮತ್ತೊಬ್ಬ ಯುವಕ ನಮಗೆ ಸಾಕಷ್ಟು ಸೌಲಭ್ಯಗಳ ಕೊರತೆಯಿದೆ ಎಂದು ಉತ್ತರಿಸಿದರು.
ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಡಾ. ಅಂಬೇಡ್ಕರ್ ಅವರನ್ನು ಉಲ್ಲೇಖಿಸಿದರು, ಅವರು ಯಾವುದೇ ಸೌಲಭ್ಯಗಳನ್ನು ಹೊಂದಿಲ್ಲದಿದ್ದರೂ ತಮ್ಮ ಪ್ರಯತ್ನಗಳಲ್ಲಿ ಏಕಾಂಗಿಯಾಗಿದ್ದರೂ ದೇಶದ ರಾಜಕೀಯದ ಮೇಲೆ ಸ್ಪಷ್ಟ ಮತ್ತು ಗಮನಾರ್ಹ ಪರಿಣಾಮ ಬೀರಿದ್ದರು ಎಂದರು.
ದಲಿತರು ಸಾವಿರಾರು ವರ್ಷಗಳಿಂದ ತಾರತಮ್ಯವನ್ನು ಎದುರಿಸುತ್ತಿದ್ದಾರೆ. ಅಂಬೇಡ್ಕರ್ ನಮ್ಮ ಸಂವಿಧಾನವನ್ನು ಸಿದ್ಧಪಡಿಸುವಾಗ ತಾರತಮ್ಯವನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದರು. ಅವರು ಸಂವಿಧಾನದ ಮೂಲಕ ದಲಿತರಿಗೆ ಅಧಿಕಾರ ನೀಡಿದರು ಎಂದರು,
ದಲಿತರು ಪ್ರಗತಿ ಹೊಂದುವುದನ್ನು ಬಯಸದ ಇಡೀ ವ್ಯವಸ್ಥೆಯೇ ಇದೆ. ಈ ವ್ಯವಸ್ಥೆಯು ಪ್ರತಿದಿನ ನಿಮ್ಮ ಮೇಲೆ ದಾಳಿ ಮಾಡುತ್ತದೆ ಮತ್ತು ಅರ್ಧಕ್ಕಿಂತ ಹೆಚ್ಚು ಬಾರಿ, ಅದು ನಿಮ್ಮ ಮೇಲೆ ಹೇಗೆ ದಾಳಿ ಮಾಡುತ್ತಿದೆ ಎಂದು ನಿಮಗೆ ತಿಳಿದಿರುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದರು, ಸಂವಿಧಾನದ ಸಿದ್ಧಾಂತವೇ ಅವರ ಸಿದ್ಧಾಂತ ಎಂದು ಅವರು ಅರ್ಥಮಾಡಿಕೊಳ್ಳಬೇಕು ಎಂದರು.
ಇದಕ್ಕೂ ಮುನ್ನ, ರಾಹುಲ್ ಗಾಂಧಿ ರಾಯ್ ಬರೇಲಿಗೆ ರಸ್ತೆ ಮಾರ್ಗವಾಗಿ ಲಕ್ನೋ ತಲುಪಿದರು. ಮೊದಲು ಅವರು ಚುರ್ವಾ ಗಡಿಯಲ್ಲಿರುವ ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡಿ ಬಚ್ರಾವನ್ಗೆ ತೆರಳಿದರು. ಬಚ್ರಾವನ್ನಲ್ಲಿ, ರಾಹುಲ್ ಗಾಂಧಿ ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಆಡಳಿತಾರೂಢ ಬಿಜೆಪಿ ನಿಜವಾದ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ರಾಹುಲ್ ಗಾಂಧಿ, ಭವಿಷ್ಯದಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ತೋರಿಸಲು ಬೂತ್ ಮಟ್ಟದಲ್ಲಿ ಶ್ರಮಿಸುವಂತೆ ಪಕ್ಷದ ಕಾರ್ಯಕರ್ತರನ್ನು ಒತ್ತಾಯಿಸಿದರು. ಹಣದುಬ್ಬರ ಹೆಚ್ಚಾಗಿದೆ. ಬಿಜೆಪಿ ಸರ್ಕಾರ ಬಂಡವಾಳಶಾಹಿಗಳನ್ನು ಮಾತ್ರ ಉತ್ತೇಜಿಸುತ್ತಿದೆ ಎಂದು ಅವರು ಆರೋಪಿಸಿದರು. ಜಿಎಸ್ಟಿ ಮತ್ತು ನೋಟು ರದ್ದತಿಯಂತಹ ಕ್ರಮಗಳು ನಿರುದ್ಯೋಗ ಹೆಚ್ಚಳಕ್ಕೆ ಕಾರಣವಾಗಿವೆ ಎಂದು ಅವರು ಆರೋಪಿಸಿದರು.
ಕೇಂದ್ರ ಸರ್ಕಾರ ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ, ಕೋಟ್ಯಂತರ ಯುವಕರಿಗೆ ಉದ್ಯೋಗಗಳು ಸಿಗಬಹುದು ಎಂದು ಅವರು ಹೇಳಿದರು. ಮಹಾಕುಂಭದಲ್ಲಿ ಭಾಗವಹಿಸುತ್ತೀರಾ ಎಂದು ಸುದ್ದಿಗಾರರು ಕೇಳಿದಾಗ, ನಮಸ್ಕಾರ ಎಂದು ಹೇಳಿ ಹೊರಟುಹೋದರು.
Advertisement