
ಪ್ರಯಾಗ್ ರಾಜ್, ಮಹಾಕುಂಭನಗರ: ಪದ್ಮಶ್ರೀ ಪುರಸ್ಕೃತ ಹಾಗೂ ಯೋಗ ಪಟು ಸ್ವಾಮಿ ಶಿವಾನಂದ ಬಾಬಾ ಅವರು ಕಳೆದ 100 ವರ್ಷಗಳಿಂದ ಪ್ರಯಾಗರಾಜ್, ನಾಸಿಕ್, ಉಜ್ಜಯಿನಿ ಮತ್ತು ಹರಿದ್ವಾರದಾದ್ಯಂತ ನಡೆಯುವ ಪ್ರತಿ ಕುಂಭಮೇಳದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಅವರ ಶಿಷ್ಯ ಸಂಜಯ್ ಸರ್ವಜನ ಹೇಳಿದ್ದಾರೆ.
ಸೆಕ್ಟರ್ 16 ರ ಸಂಗಮ್ ಲೋವರ್ ರೋಡ್ನಲ್ಲಿರುವ ಬಾಬಾ ಕ್ಯಾಂಪ್ನ ಹೊರಗಿನ ಬ್ಯಾನರ್ ನಲ್ಲಿ ಅವರ ಆಧಾರ್ ಕಾರ್ಡ್ ಪ್ರದರ್ಶಿಸಲಾಗಿದೆ. ಅದರಲ್ಲಿ ಅವರ ಜನ್ಮ ದಿನಾಂಕವನ್ನು ಆಗಸ್ಟ್ 8, 1896 ಎಂದು ನಮೂದಿಸಲಾಗಿದೆ. ಮಹಾ ಕುಂಭ ಮೇಳದ ನಡುವೆ ಸ್ವಾಮಿ ಶಿವಾನಂದರು ಬೆಳಿಗ್ಗೆ ತಮ್ಮ ಚೇಂಬರ್ ನಲ್ಲಿ ಯೋಗ ಮತ್ತು ಧ್ಯಾನದಲ್ಲಿ ಮುಳುಗಿದ್ದರೆ, ಅವರ ಶಿಷ್ಯರು ಅವರ ದರ್ಶನಕ್ಕಾಗಿ ಹೊರಗೆ ಕಾಯುತ್ತಿದ್ದರು.
ಬಾಬಾ ಅವರ ಆರಂಭಿಕ ಜೀವನದ ಬಗ್ಗೆ ಮಾತನಾಡಿದ ಬೆಂಗಳೂರಿನ ಶಿಷ್ಯ ಫಲ್ಗುಣ ಭಟ್ಟಾಚಾರ್ಯ ಭಾವುಕರಾದರು. ಭಿಕ್ಷುಕರೊಬ್ಬರ ಕುಟುಂಬದಲ್ಲಿ ಜನಿಸಿದ ಬಾಬಾ ಅವರನ್ನು ಅವರ ಪೋಷಕರು ಊಟವಾದರೂ ಸಿಗುತ್ತದೆ ಎಂಬ ಭರವಸೆಯಿಂದ ಗ್ರಾಮಕ್ಕೆ ಬಂದಿದ್ದ ಸ್ವಾಮೀಜಿ ಒಬ್ಬರ ವಶಕ್ಕೆ ನೀಡುತ್ತಾರೆ.
ಬಾಬಾ ನಾಲ್ಕು ವರ್ಷದವರಾಗಿದ್ದಾಗ ಅವರನ್ನು ಸಂತ ಓಂಕಾರಾನಂದ ಗೋಸ್ವಾಮಿಗೆ ನೀಡುತ್ತಾರೆ. ಅವರ ಕೋರಿಕೆ ಮೇರೆಗೆ ಶಿವಾನಂದ ಅವರು ಆರು ವರ್ಷದವರಾಗಿದ್ದಾಗ ಅವರ ಕುಟುಂಬ ಭೇಟಿಗೆ ಮರಳಿದರು. ಅವರು ಹಿಂದಿರುಗಿದ ನಂತರ ಸಹೋದರಿ ತೀರಿಕೊಂಡಳು. ಆದಾದ ಒಂದು ವಾರದಲ್ಲಿ ತನ್ನ ಹೆತ್ತವರಿಬ್ಬರನ್ನೂ ಕಳೆದುಕೊಂಡರು. ಅವರ ಅಂತಿಮ ಸಂಸ್ಕಾರವನ್ನು ಒಂದೇ ಚಿತೆ ಮೇಲೆ ಬಾಬಾ ಮಾಡಿದ್ದರು. ನಂತರ ಓಂಕಾರನಂದ ಗೋಸ್ವಾಮಿ ಅವರೇ ಅವರ ಏಕೈಕ ಪಾಲಕರಾದರು. ನಾಲ್ಕನೇ ವಯಸ್ಸಿನವರೆಗೆ ಬಾಬಾ ಹಾಲು, ಹಣ್ಣುಗಳು ಅಥವಾ ಬ್ರೆಡ್ ಅನ್ನು ನೋಡಿರಲಿಲ್ಲ ಎಂದು ಭಟ್ಟಾಚಾರ್ಯ ವಿವರಿಸಿದರು.
ಶ್ವಾಮಿ ಶಿವಾನಂದ ಬಾಬಾರ ದಿನಚರಿ: ಈ ಎಲ್ಲಾ ಬೆಳವಣಿಗೆಗಳು ಅವರ ಪ್ರಸ್ತುತದ ಜೀವನ ಶೈಲಿ ರೂಪಿಸಿದವು. ಅವರು ಅರ್ಧ ಊಟವನ್ನು ತಿನ್ನುತ್ತಾರೆ. ರಾತ್ರಿ 9 ಗಂಟೆಗೆ ಮಲಗುತ್ತಾರೆ. ಬೆಳಗ್ಗೆ 3 ಗಂಟೆಗೆ ಎಚ್ಚರಗೊಳ್ಳುತ್ತಾರೆ. ಯೋಗ ಮತ್ತು ಧ್ಯಾನವನ್ನು ಮಾಡುವುದರ ಮೂಲಕ ತನ್ನ ಮುಂಜಾನೆಯನ್ನು ಕಳೆಯುತ್ತಾರೆ. ಹಗಲಿನಲ್ಲಿ ಅವರು ನಿದ್ರೆ ಮಾಡುವುದಿಲ್ಲ ಎಂದು ಅವರು ಹೇಳಿದರು.
ದೆಹಲಿಯ ಶಿಷ್ಯರಾದ ಹಿರಾಮನ್ ಬಿಸ್ವಾಸ್ ಅವರು ಬಾಬಾ ಅವರ ಆಳವಾದ ಆಧ್ಯಾತ್ಮಿಕ ಸಾಮರ್ಥ್ಯಗಳನ್ನು ವಿವರಿಸಿದರು. ಹಸಿದ ಭಕ್ತರೊಬ್ಬರಿಗೆ ಬಾಬಾ ಮಣ್ಣಿನ ಬಟ್ಟಲಿನಲ್ಲಿ ಖೀರ್ ಬಡಿಸಿದ ಘಟನೆಯನ್ನು ನೆನಪಿಸಿಕೊಂಡರು. ಇದು ಸಾಕಾಗುವುದಿಲ್ಲ ಎಂದು ಭಕ್ತರು ದೂರಿದರು. ಆದರೆ ಬಾಬಾ ಅದನ್ನು ತಿನ್ನಲು ಕೇಳಿದರು. ಭಕ್ತನು ತಿನ್ನುತ್ತಲೇ ಇದ್ದನು ಆದರೆ ಖೀರ್ ಅನ್ನು ಮುಗಿಸಲು ಸಾಧ್ಯವಾಗಲಿಲ್ಲ. ಬಳಿಕ ಬಾಬಾರವರ ಪಾದಗಳಿಗೆ ಬಿದ್ದು, ಬಾಬಾ ನಿನ್ನನ್ನು ಅರ್ಥಮಾಡಿಕೊಳ್ಳಲು ನಾನು ವಿಫಲನಾದೆ ಎಂದು ಹೇಳಿದನ್ನು ತಿಳಿಸಿದರು.
2010 ರಲ್ಲಿ ಚಂಡೀಗಢದಲ್ಲಿ ಬಾಬಾ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದೆ. ಕಟ್ಟಡದ ಆರನೇ ಮಹಡಿಯಲ್ಲಿ ತಂಗಿದ್ದರೂ, ಎರಡೂ ಲಿಫ್ಟ್ ಗಳು ಕಾರ್ಯನಿರ್ವಹಿಸದ ಕಾರಣ ಬಾಬಾ ಪ್ರತಿದಿನ ಮೆಟ್ಟಿಲುಗಳನ್ನು ಹತ್ತಿ ಇಳಿಯುತ್ತಿದ್ದರು. ಅವರ ಫಿಟ್ನೆಸ್ನಿಂದ ಆಶ್ಚರ್ಯಚಕಿತನಾಗಿದ್ದೇನೆ ಎಂದು ಬಿಸ್ವಾಸ್ ಹೇಳಿದರು. ಸ್ವಾಮಿ ಶಿವಾನಂದ ಅವರಿಗೆ ಯಾವುದೇ ಅರ್ಜಿ ಸಲ್ಲಿಸದೆ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗಿದೆ ಎಂದು ಭಕ್ತರೊಬ್ಬರು ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಬಾಬಾರಂತಹ ರತ್ನಗಳನ್ನು ಗುರುತಿಸಿ ಗೌರವಿಸುತ್ತಿದ್ದಾರೆ ಎಂದು ಶ್ಲಾಘಿಸಿದರು. ಯಾವುದೇ ದಾನ ಸ್ವೀಕರಿಸದ, ಯಾವುದೇ ಆಸೆ ಹೊಂದಿಲ್ಲದ ಶಿವಾನಂದ ಸ್ವಾಮೀಜಿ ಆರೋಗ್ಯದಿಂದ ಇದ್ದಾರೆ.
ಯುವಕರಿಗೆ ಬಾಬಾರ ಸಂದೇಶ: ಸ್ವಾಮಿ ಶಿವಾನಂದ ಎಣ್ಣೆ ಅಥವಾ ಉಪ್ಪು ಇಲ್ಲದೆ ಬೇಯಿಸಿದ ಆಹಾರ ತಿನ್ನುತ್ತಾರೆ ಮತ್ತು ಹಾಲು ಮತ್ತು ಅದರ ಉತ್ಪನ್ನಗಳಿಂದ ದೂರ ಇದ್ದಾರೆ. ವಾರಣಾಸಿಯ ಕಬೀರ್ ನಗರ, ದುರ್ಗಕುಂಡ್ನಲ್ಲಿ ನೆಲೆಸಿರುವ ಬಾಬಾ ಅವರು ಮಹಾ ಕುಂಭಮೇಳದಲ್ಲಿ ತಮ್ಮ ವಾಸ್ತವ್ಯವನ್ನು ಮುಗಿಸಿದ ನಂತರ ಮನೆಗೆ ಹಿಂದಿರುಗುತ್ತಾರೆ. ಯುವಕರು ನಿಮ್ಮ ದಿನವನ್ನು ಬೇಗನೆ ಪ್ರಾರಂಭಿಸಿ ಮತ್ತು ಕನಿಷ್ಠ ಅರ್ಧ ಗಂಟೆ ಯೋಗಕ್ಕಾಗಿ ಮೀಸಲಿಡಿ. ಸರಿಯಾದ ಜೀವನಶೈಲಿಯನ್ನು ಕಾಪಾಡಿಕೊಳ್ಳಿ, ಉತ್ತಮ ಆರೋಗ್ಯಕ್ಕೆ ಪ್ರತಿನಿತ್ಯ ನಡೆಯುವುದು ಅತ್ಯಗತ್ಯ ಎಂದು ಶಿವಾನಂದ ಸ್ವಾಮೀಜಿ ಸಂದೇಶ ನೀಡಿದ್ದಾರೆ.
Advertisement