
ಚೆನ್ನೈ: ತಮಿಳುನಾಡಿನಲ್ಲಿ ಕಾಣುಂ ಪೊಂಗಲ್ ದಿನದಂದು ನಡೆದ ಜಲ್ಲಿಕಟ್ಟು ಮತ್ತು ಮಂಜುವಿರಾಟ್ಟು ಸ್ಪರ್ಧೆಗಳಲ್ಲಿ ಪ್ರೇಕ್ಷಕರು ಮತ್ತು ಗೂಳಿ ಮಾಲೀಕ ಸೇರಿದಂತೆ ಏಳು ಜನರು ಮೃತಪಟ್ಟಿದ್ದಾರೆ. ಪ್ರತ್ಯೇಕ ಘಟನೆಗಳಲ್ಲಿ ಎರಡು ಹೋರಿಗಳೂ ಸಾವಿಗೀಡಾಗಿವೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ತಮಿಳುನಾಡಿನ ಎರಡು ಸ್ಥಳಗಳಲ್ಲಿ ನಡೆದ ಮಂಜುವಿರಾಟ್ಟು ಎಂಬ ಸಾಂಪ್ರದಾಯಿಕ ಗೂಳಿ ಪಳಗಿಸುವ ಆಟದ ವೇಳೆ ಎರಡು ಹೋರಿಗಳು ಸಾವಿಗೀಡಾಗಿವೆ. ಪುದುಕ್ಕೊಟ್ಟೈನಲ್ಲಿ ನಡೆದ ಸ್ಪರ್ಧೆಯ ವೇಳೆ ಗೂಳಿಯೊಂದು ಮೃತಪಟ್ಟಿದ್ದರೆ, ಶಿವಗಂಗೆಯ ಸಿರವಯಲ್ನಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ಗೂಳಿ ಮಾಲೀಕ ಹಾಗೂ ಆತನ ಗೂಳಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಿವಗಂಗೆ ಜಿಲ್ಲೆಯ ಸಿರವಯಲ್ನಲ್ಲಿ ನಡೆದ ಮಂಜುವಿರಾಟ್ಟು ಸ್ಪರ್ಧೆ ವೇಳೆ ನಡುವಿಕೊಟ್ಟೈ ಕೀಲಾ ಆವಂಧಿಪಟ್ಟಿ ಗ್ರಾಮದ ಥನೀಶ್ ರಾಜಾ ಎಂಬ ವ್ಯಕ್ತಿ ತನ್ನ ಗೂಳಿಯೊಂದಿಗೆ ಸಾವಿಗೀಡಾಗಿದ್ದಾನೆ. ರಾಜಾ ಸ್ಪರ್ಧೆಯಲ್ಲಿ ಭಾಗವಹಿಸಲು ಕರೆತಂದಿದ್ದ ಗೂಳಿಯು ಕಣದಿಂದ ಓಡಿಹೋಗಿ ಕಂಬನೂರಿನಲ್ಲಿರುವ ಕೃಷಿ ಬಾವಿಗೆ ಬಿದ್ದ ಪರಿಣಾಮ ಈ ದುರಂತ ಸಂಭವಿಸಿದೆ. ಗೂಳಿಯನ್ನು ರಕ್ಷಿಸುವ ಪ್ರಯತ್ನದಲ್ಲಿ, ರಾಜಾ ಬಾವಿಗೆ ಹಾರಿದ್ದು, ಆತ ಮತ್ತು ಗೂಳಿ ನೀರಿನಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾರೆ.
150 ಸ್ಪರ್ಧಿಗಳು ಮತ್ತು 250 ಹೋರಿಗಳು ಭಾಗವಹಿಸಿದ್ದ ಮಂಜುವಿರಾಟ್ಟು ಸ್ಪರ್ಧೆಯಲ್ಲಿ ಸುಮಾರು 130 ಜನರು ಗಾಯಗೊಂಡಿದ್ದಾರೆ. ದೇವಕೋಟೆಯ ಸುಬ್ಬಯ್ಯ ಎಂಬುವವರನ್ನು ಗೂಳಿ ತುಳಿದಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.
ಮಂಜುವಿರಾಟ್ಟು ಸ್ಪರ್ಧೆ ವೀಕ್ಷಿಸುತ್ತಿದ್ದ 55 ವರ್ಷದ ಪಿ ಪೆರಿಯಸಾಮಿ ಎಂಬ ವ್ಯಕ್ತಿಗೆ ಕೆರಳಿದ ಗೂಳಿಯೊಂದು ದಾಳಿ ಮಾಡಿದ್ದರಿಂದ ಗಾಯಗೊಂಡಿದ್ದಾರೆ. ಮಧುರೈ ಸಮೀಪದ ಅಲಂಗನಲ್ಲೂರ್ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ವೇಳೆ ಕನಿಷ್ಠ 70 ಜನರು ಗಾಯಗೊಂಡಿದ್ದಾರೆ. ಚಿಕಿತ್ಸೆಗೆ ಸ್ಪಂದಿಸದೆ ಮಧುರೈನ ರಾಜಾಜಿ ಸರ್ಕಾರಿ ಆಸ್ಪತ್ರೆಯಲ್ಲಿ ಪೆರಿಯಸಾಮಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತಿರುಚಿರಾಪಳ್ಳಿ, ಕರೂರ್ ಮತ್ತು ಪುದುಕೊಟ್ಟೈ ಜಿಲ್ಲೆಗಳಲ್ಲಿ ನಡೆದ ನಾಲ್ಕು ಪ್ರತ್ಯೇಕ ಜಲ್ಲಿಕಟ್ಟು ಸ್ಪರ್ಧೆಗಳಲ್ಲಿ ಇಬ್ಬರು ಪ್ರೇಕ್ಷಕರು ಸಾವಿಗೀಡಾಗಿದ್ದಾರೆ. ಗೂಳಿ ಮಾಲೀಕರು ಮತ್ತು ಪಳಗಿಸುವವರು ಸೇರಿದಂತೆ 148 ಜನರು ಗಾಯಗೊಂಡಿದ್ದಾರೆ.
ಆರ್ಟಿ ಮಲೈ ಜಲ್ಲಿಕಟ್ಟು ಕಾರ್ಯಕ್ರಮದಲ್ಲಿ ಕರೂರು ಜಿಲ್ಲೆಯ ಕುಜುಮಣಿ ಬಳಿಯ ಸಮುದ್ರಂನ ಕುಲಂತೈವೇಲು ಎಂಬ 60 ವರ್ಷದ ವ್ಯಕ್ತಿಯ ಮೇಲೆ ಗೂಳಿ ಮಾಡಿದ್ದರಿಂದ ಮೃತಪಟ್ಟಿದ್ದಾರೆ. ಮತ್ತೊಂದೆಡೆ, ಕೀರನೂರು ಬಳಿಯ ಓದುಗಂಪಟ್ಟಿಯ ಸಿ ಪೆರುಮಾಳ್ ಎಂದು ಗುರುತಿಸಲಾದ 70 ವರ್ಷದ ಪ್ರೇಕ್ಷಕ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪುದುಕೊಟ್ಟೈ ಜಿಲ್ಲೆಯ ಮಹಾದೇವ ಪಟ್ಟಿ ಜಲ್ಲಿಕಟ್ಟು ಸ್ಪರ್ಧೆಯಲ್ಲಿ 607 ಹೋರಿಗಳು ಮತ್ತು 300 ಪಳಗಿಸುವವರು ಭಾಗವಹಿಸಿದ್ದರು. ಇಲ್ಲಿ ಕೂಡ ಹತ್ತು ಮಂದಿ ಗಾಯಗೊಂಡಿದ್ದಾರೆ. ಪುದುಕೊಟ್ಟೈ ಜಿಲ್ಲೆಯ ವನ್ನಿಯನ್ ವಿದುತಿ ಜಲ್ಲಿಕಟ್ಟುವಿನಲ್ಲಿ ಸುಮಾರು 19 ಜನರು ಗಾಯಗೊಂಡಿದ್ದಾರೆ.
ಕೃಷ್ಣಗಿರಿ ಜಿಲ್ಲೆಯ ಬಸ್ತಲಪಲ್ಲಿಯಲ್ಲಿ ನಡೆದ ಎರುತ್ತು ವಿದುಂ ವಿಜಾ ಎಂಬ ಸ್ಪರ್ಧೆಯಲ್ಲಿ 30 ವರ್ಷದ ವ್ಯಕ್ತಿ ಮೃತಪಟ್ಟರೆ, ಸೇಲಂ ಜಿಲ್ಲೆಯ ಸೆಂತಾರಪಟ್ಟಿಯಲ್ಲಿ ಗೂಳಿ ದಾಳಿಗೆ 45 ವರ್ಷದ ವ್ಯಕ್ತಿ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ಹೇಳಿದರು.
Advertisement