
ನವದೆಹಲಿ: ದೇಶದಾದ್ಯಂತ 76ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ತೆರಳಿ ಹುತಾತ್ಮ ವೀರ ಯೋಧರಿಗೆ ನಮನ ಸಲ್ಲಿಸಿದರು.
ಇಂದು ಬೆಳಗ್ಗೆ ಮೋದಿ ಅವರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದರು. ಮಡಿದ ವೀರಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಮೋದಿ ಮತ್ತು ಇತರ ಗಣ್ಯರು ಮೆರವಣಿಗೆಯನ್ನು ವೀಕ್ಷಿಸಲು ಕರ್ತವ್ಯ ಪಥದಲ್ಲಿನ ವೇದಿಕೆಗೆ ತೆರಳಿದರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಇಂಡೋನೇಷ್ಯಾ ಅಧ್ಯಕ್ಷ ಪ್ರಬೊವೊ ಸುಬಿಯಾಂಟೊ ಅವರ ಆಗಮಿಸಿದ ವೇಳೆ ರಾಷ್ಟ್ರಪತಿಗಳ ಅಂಗರಕ್ಷಕರು ಬೆಂಗಾವಲು ನೀಡಿದ್ದಾರೆ. ರಾಷ್ಟ್ರಪತಿಗಳ ಅಂಗರಕ್ಷಕ ಭಾರತೀಯ ಸೇನೆಯ ಅತ್ಯಂತ ಹಿರಿಯ ರೆಜಿಮೆಂಟ್ ಆಗಿದೆ. ಅಂಗರಕ್ಷಕ್ 1773 ರಲ್ಲಿ ಸ್ಥಾಪನೆಯಾದಾಗಿನಿಂದ 252 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದೆ.
ಈ ಬಾರಿಯ ಗಣರಾಜ್ಯೋತ್ಸವ ಜನ್ ಭಾಗಿದಾರಿ (ಜನರ ಭಾಗವಹಿಸುವಿಕೆ) ವಿಷಯದ ಮೇಲೆ ವಿಶೇಷ ಗಮನ ಹರಿಸಲಾಗಿದೆ. ಸಾವಿರಾರು ಜನಸಾಮಾನ್ಯರು ವಿಶೇಷ ಅತಿಥಿಗಳಾಗಿ ಆಗಮಿಸಿದ್ದು, 10 ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗಿದ್ದಾರೆ.
ಸಮಾರಂಭದ ಮುಖ್ಯ ಮೆರವಣಿಗೆ ಬೆಳಿಗ್ಗೆ 10.30ಕ್ಕೆ ಆರಂಭವಾಗಿದ್ದು, ವಿಜಯ್ ಚೌಕ್ ನಲ್ಲಿ ಪ್ರಾರಂಭವಾಗಿ, ಕರ್ತವ್ಯ ಪಥದಲ್ಲಿ ಮುಂದುವರೆದಿದೆ. ಬಳಿಕ ಇಂಡಿಯಾ ಗೇಟ್ ಮೂಲಕ ಹಾದುಹಾಗಿ, ಕೆಂಪುಕೋಟೆಯಲ್ಲಿ ಮುಕ್ತಾಯಗೊಳ್ಳಲಿದೆ.
ಈ ಬಾರಿಯ ಪರೇಡ್ ನ ವಿಷಯವೆಂದರೆ ಸ್ವರ್ಣಿಮ್ ಭಾರತ್: ವಿರಾಸತ್ ಔರ್ ವಿಕಾಸ್ (ಸುವರ್ಣ ಭಾರತ; ಪರಂಪರೆ ಮತ್ತು ಅಭಿವೃದ್ಧಿ). ಭಾರತೀಯ ಸಂವಿಧಾನ ಜಾರಿಗೆ ಬಂದ 75 ವರ್ಷಗಳು ಪೂರ್ಣಗೊಂಡ ನಿಮಿತ್ತ ಈ ಹೆಸರಿಡಲಾಗಿದೆ.
Advertisement