
ಲಖನೌ: ರಾಜಕಾರಣಿಗಳ ಮುಂದೆ ಹೊಗಳಿ ಹಿಂದೆ ಬೈಗುಳಗಳ ಸುರಿಮಳೆ ಸುರಿಸುವುದು ಸಾಮಾನ್ಯ.. ಆದರೆ ಓರ್ವ ರಾಜಕಾರಣಿಯನ್ನು ವೇದಿಕೆ ಮೇಲೆ ಕರೆದು ಆತನಿಗೆ ಹಾರ ಹಾಕಿ ಬಳಿಕ ಕಪಾಳ ಮೋಕ್ಷ ಮಾಡಿರುವ ಘಟನೆ ವ್ಯಾಪಕ ವೈರಲ್ ಆಗುತ್ತಿದೆ.
ಉತ್ತರ ಪ್ರದೇಶದ ಜೌನ್ಪುರ ಜಿಲ್ಲೆಯ ಜಲಾಲ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಆಶಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಹಾರಾಜ ಸುಹೇಲ್ದೇವ್ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ರಾಜಕಾರಣಿಗೆ ಕಪಾಳ ಮೋಕ್ಷ ಮಾಡಿದ್ದಾರೆ.
ಸಾರ್ವಜನಿಕ ಸಭೆಯೊಂದರಲ್ಲಿ ಸುಹೇಲ್ದೇವ್ ಸ್ವಾಭಿಮಾನ್ ಪಕ್ಷದ (ಎಸ್ಎಸ್ಪಿ) ರಾಷ್ಟ್ರೀಯ ಅಧ್ಯಕ್ಷ ಮಹೇಂದ್ರ ರಾಜ್ಭರ್ ಅವರನ್ನು ಪಕ್ಷದ ಕಾರ್ಯಕರ್ತನೊಬ್ಬ ವೇದಿಕೆಯ ಮೇಲೆ ಹಾರ ಹಾಕಿದ ನಂತರ ಪದೇ ಪದೇ ಕಪಾಳಮೋಕ್ಷ ಮಾಡಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ರಾಜ್ಭರ್ ಪ್ರಾಬಲ್ಯವಿರುವ ಜಫರಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ ಪೂಜ್ಯ ರಾಜ್ಭರ್ ಐಕಾನ್ ಪ್ರತಿಮೆಯನ್ನು ಸ್ಥಾಪಿಸಲು 'ಭೂಮಿ ಪೂಜೆ' ನಡೆಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮೌ ಜಿಲ್ಲೆಯ ಮೂಲದ ಮಹೇಂದ್ರ ರಾಜ್ಭರ್ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದರು.
ಪಕ್ಷದ ಕಾರ್ಯಕರ್ತ ಬ್ರಿಜೇಶ್ ರಾಜ್ಭರ್ ಮೊದಲು ಮಹೇಂದ್ರ ರಾಜ್ಭರ್ ಅವರಿಗೆ ಹಾರ ಹಾಕಿ ನಂತರ ಸಾರ್ವಜನಿಕರ ಮುಂದೆ ಹಲವಾರು ಬಾರಿ ಕಪಾಳಮೋಕ್ಷ ಮಾಡಿದ್ದಾರೆ. ಘಟನೆಯ ನಂತರ, ಮಹೇಂದ್ರ ರಾಜ್ಭರ್ ಸ್ಥಳದಿಂದ ಹೊರಬಂದು ಜಲಾಲ್ಪುರ ಪೊಲೀಸ್ ಠಾಣೆಯಲ್ಲಿ ಬ್ರಿಜೇಶ್ ರಾಜ್ಭರ್ ಅವರನ್ನು ಹೆಸರಿಸಿ ದೂರು ದಾಖಲಿಸಿದ್ದಾರೆ.
ಮಹೇಂದ್ರ ರಾಜ್ಭರ್ ದೂರು ದಾಖಲಿಸಿದ್ದಾರೆ ಎಂದು ದೃಢಪಡಿಸಿದ ಜಲಾಲ್ಪುರ ಎಸ್ಎಚ್ಒ ತ್ರಿವೇಣಿ ಸಿಂಗ್, ಘಟನೆಯ ವೈರಲ್ ವೀಡಿಯೊ ತನಿಖೆಯ ಭಾಗವಾಗಿ ಪರಿಶೀಲನೆಯಲ್ಲಿದೆ ಎಂದು ಹೇಳಿದರು.
ಅಖಿಲೇಶ್ ಯಾದವ್ ಕಿಡಿ
ಇನ್ನು ಹಲ್ಲೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಲೇ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಈ ಘಟನೆಯನ್ನು ಖಂಡಿಸಿದ್ದಾರೆ. ಇದು "ದೌರ್ಜನ್ಯ ಮತ್ತು ಅವಮಾನದ ಮತ್ತೊಂದು ಉದಾಹರಣೆ" ಎಂದು ಖಂಡಿಸಿದರು. ಇದರಲ್ಲಿ ಬಿಜೆಪಿ ಭಾಗಿಯಾಗಿದೆ ಎಂದು ಅವರು ಆರೋಪಿಸಿದರು.
ಓಂ ಪ್ರಕಾಶ್ ರಾಜ್ಭರ್ ಕೈವಾಡ
ಇನ್ನು ಈ ಘಟನೆಯ ಹಿಂದೆ ಉತ್ತರ ಪ್ರದೇಶದ ಕ್ಯಾಬಿನೆಟ್ ಸಚಿವ ಮತ್ತು ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷದ (SBSP) ಅಧ್ಯಕ್ಷ ಓಂ ಪ್ರಕಾಶ್ ರಾಜ್ಭರ್ ಕೈವಾಡವಿದ್ದು, ಅವರೇ ಈ ದಾಳಿ ಸಂಘಟಿಸಿದ್ದಾರೆ ಎಂದು ಮಹೇಂದ್ರ ರಾಜ್ಭರ್ ಆರೋಪಿಸಿದ್ದಾರೆ. ಆದರೆ ಮಹೇಂದ್ರ ರಾಜ್ಭರ್ ಆರೋಪದ ಕುರಿತು ಓಂ ಪ್ರಕಾಶ್ ರಾಜ್ಭರ್ ಅಥವಾ SBSP ಇನ್ನೂ ಯಾವುದೇ ಹೇಳಿಕೆಯನ್ನು ನೀಡಿಲ್ಲ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರಿಜೇಶ್ ರಾಜ್ಭರ್ ಅವರು ಕಾರ್ಯಕ್ರಮಕ್ಕೆ ನಾಲ್ಕೈದು ದಿನಗಳ ಮೊದಲು ಓಂ ಪ್ರಕಾಶ್ ರಾಜ್ಭರ್ ಅವರನ್ನು ಭೇಟಿಯಾಗಿದ್ದರು ಮತ್ತು ಅವರ ನಿರ್ದೇಶನದ ಮೇರೆಗೆ ದಾಳಿಯನ್ನು ಯೋಜಿಸಲಾಗಿತ್ತು ಎಂದಿದ್ದಾರೆ. ಅಲ್ಲದೆ "ಬ್ರಿಜೇಶ್ ಒಂದು ಕಾಲದಲ್ಲಿ ನನ್ನ ಪಕ್ಷದಲ್ಲಿ ಕಾರ್ಯಕರ್ತರಾಗಿದ್ದರು.
ಆದರೆ ಪ್ರಸ್ತುತ ಅವರು ಯಾವುದೇ ಅಧಿಕೃತ ಹುದ್ದೆಯನ್ನು ಹೊಂದಿಲ್ಲ. ಅವರು ಕಾರ್ಯಕ್ರಮಕ್ಕೆ ಹೇಗೆ ಅಥವಾ ಏಕೆ ಬಂದರು ಅಥವಾ ಅವರನ್ನು ಯಾರು ಆಹ್ವಾನಿಸಿದರು ಎಂಬುದು ನನಗೆ ತಿಳಿದಿಲ್ಲ. ಪಕ್ಷದಲ್ಲಿ ಯಾವುದೇ ಆಂತರಿಕ ವಿವಾದ ಅಥವಾ ಯಾವುದೇ ಆರ್ಥಿಕ ಭಿನ್ನಾಭಿಪ್ರಾಯವಿಲ್ಲ" ಎಂದು ಮಹೇಂದ್ರ ರಾಜ್ಭರ್ ಹೇಳಿದರು.
Advertisement