
ನವದೆಹಲಿ: 'ಆಪರೇಷನ್ ಸಿಂಧು' ಕಾರ್ಯಾಚರಣೆ ಮೂಲಕ ಇರಾನ್ ಹಾಗೂ ಇಸ್ರೇಲ್ನಿಂದ ಈವರೆಗೂ 4,415 ಭಾರತೀಯರನ್ನು ಕರೆತರಲಾಗಿದೆ ಎಂದು ಭಾರತೀಯ ವಿದೇಶಾಂಗ ಇಲಾಖೆ ಶುಕ್ರವಾರ ಮಾಹಿತಿ ನೀಡಿದೆ.
ಈ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು, ಈ ಕುರಿತು ಮಾಹಿತಿ ನೀಡಿದ್ದಾರೆ.
'ಆಪರೇಷನ್ ಸಿಂಧು' ಕಾರ್ಯಾಚರಣೆ ಮೂಲಕ ಇರಾನ್ನಿಂದ 3,597 ಹಾಗೂ ಇಸ್ರೇಲ್ನಿಂದ 818 ಮಂದಿ ಸೇರಿದಂತೆ ಈವರೆಗೂ 4,415 ಭಾರತೀಯರನ್ನು ಕರೆತರಲಾಗಿದೆ. ಇದಕ್ಕಾಗಿ 19 ವಿಶೇಷ ವಿಮಾನಗಳು ಹಾಗೂ ವಾಯುಪಡೆಯ 3 ವಿಮಾನಗಳನ್ನು ಬಳಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಗುರುವಾರ ರಾತ್ರಿ 10.30ಕ್ಕೆ ವಿಶೇಷ ವಿಮಾನವು ಯೆರೆವಾನ್, ಅರ್ಮೇನಿಯಾದಿಂದ ನವದೆಹಲಿಗೆ ಬಂದಿಳಿದಿದ್ದು. ಈ ವಿಮಾನದಲ್ಲಿ 173 ಭಾರತೀಯ ಪ್ರಜೆಗಳು ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಿದ್ದಾರೆ' ಎಂದು ಹೇಳಿದ್ದಾರೆ.
ಇದಲ್ಲದೆ 14 ವಿದೇಶಿ ಪ್ರಜೆಗಳು, ನೇಪಾಳದ 9, ಶ್ರೀಲಂಕಾದ 4 ಮತ್ತು ಭಾರತೀಯ ಪ್ರಜೆಯೊಬ್ಬರ ಇರಾನ್ ಮೂಲದ ಪತ್ನಿಯನ್ನು ಸ್ಥಳಾಂತರ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಜೈಸ್ವಾಲ್ ಅವರು, ಜೂನ್ 18 ರಂದು ಆಪರೇಷನ್ ಸಿಂಧು ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿತ್ತು. ಇರಾನ್ನಲ್ಲಿ ಸುಮಾರು 10,000 ಭಾರತೀಯರು ಮತ್ತು, ಇಸ್ರೇಲ್ನಲ್ಲಿ ಸುಮಾರು 40,000 ಜನರು ಭಾರತೀಯ ಪ್ರಜೆಗಳಿದ್ದಾರೆ. ಇರಾನ್ನಿಂದ ಭಾರತೀಯ ಪ್ರಜೆಗಳನ್ನು ಮರಳಿ ಕರೆತರಲು ಒಟ್ಟಾರೆಯಾಗಿ 14 ವಿಮಾನಗಳನ್ನು ಬಳಕೆ ಮಾಡಲಾಗುತ್ತಿದೆ.
ಈ ವಿಮಾನಗಳು ಮಶಾದ್ನಿಂದ, ಅರ್ಮೇನಿಯಾದ ಯೆರಾವನ್ ಮತ್ತು ತುರ್ಕಮೆನಿಸ್ತಾನದ ಅಶ್ಗಾಬತ್ನಿಂದ ಹಾರಾಟ ನಡೆಸಿದೆ.
ಇಸ್ರೇಲ್ನಲ್ಲಿ ವಾಯುಪ್ರದೇಶ ಮುಚ್ಚಲಾಗಿದ್ದು, ಹೀಗಾಗಿ ನಾವು ನಮ್ಮ ಜನರನ್ನು ಗಡಿ ದೇಶಗಳಿಂದ ಅಂದರೆ ಜೋರ್ಡಾನ್ ಮತ್ತು ಈಜಿಪ್ಟ್ಗೆ ಕರೆದೊಯ್ದು, ಅಲ್ಲಿಂದ ವಿಶೇಷ ವಿಮಾನಗಳ ಮೂಲಕ ಕರೆ ತರಲಾಗುತ್ತಿದೆ.
ಈಜಿಪ್ಟ್ ಮತ್ತು ಜೋರ್ಡಾನ್ ಸರ್ಕಾರ ನಮಗೆ ನೀಡಿದ ಬೆಂಬಲಕ್ಕೆ ನಾವು ಕೃತಜ್ಞರಾಗಿರುತ್ತೇವೆ. ಇದೇ ವೇಳೆ ಇರಾನ್ ಸರ್ಕಾರಕ್ಕೂ ಧನ್ಯವಾದ ಹೇಳಲು ಬಯಸುತ್ತೇವೆ, ನಮ್ಮ ಪ್ರಜೆಗಳನ್ನು ಸ್ಥಳಾಂತರಿಸಲು ನಮಗಾಗಿ ಅವರು ತಮ್ಮ ವಾಯುಪ್ರದೇಶವನ್ನು ತೆರೆದರರು. ಈ ವಿಶೇಷ ಕಾರ್ಯಕ್ಕಾಗಿ ನಾವು ಇರಾನ್ ಸರ್ಕಾರಕ್ಕೆ ಕೃತಜ್ಞರಾಗಿರುತ್ತೇವೆ. ಇದಲ್ಲದೆ, ತುರ್ಕಮೆನಿಸ್ತಾನ್ ಮತ್ತು ಅರ್ಮೇನಿಯಾ ಸರ್ಕಾರಗಳಿಗೂ ನಾವು ಕೃತಜ್ಞರಾಗಿರುತ್ತೇವೆ ಎಂದು ಹೇಳಿದ್ದರು.
Advertisement