'ದೇವರು ಎಲ್ಲರಿಗೂ 24 ಗಂಟೆ ಕೊಟ್ಟಿದ್ದಾನೆ': ಪತಿ ನಾರಾಯಣ ಮೂರ್ತಿ ಹೇಳಿಕೆಗೆ ಸುಧಾ ಮೂರ್ತಿ ಪ್ರತಿಕ್ರಿಯೆ

ಜನರು ಗಂಭೀರವಾಗಿ ಮತ್ತು ಉತ್ಸಾಹದಿಂದ ಏನನ್ನಾದರೂ ಮಾಡಲು ಎದುರು ನೋಡಿದಾಗ 'ಸಮಯ ಎಂದಿಗೂ ಮಿತಿಯಾಗುವುದಿಲ್ಲ' ಎಂದು ಹೇಳಿದ್ದಾರೆ.
ಸುಧಾ ಮೂರ್ತಿ
ಸುಧಾ ಮೂರ್ತಿ
Updated on

ಭಾರತೀಯ ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಕಳೆದ ವರ್ಷ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ನೀಡಿದ್ದ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ವಿಚಾರವಾಗಿ ಪರ-ವಿರೋಧ ಚರ್ಚೆಗಳು ನಡೆದಿದ್ದವು. ಬಳಿಕ ಮುಂಬೈನ ಎಎಂಸಿಯ ಕಿಲಾಚಂದ್ ಸ್ಮಾರಕ ಉಪನ್ಯಾಸದಲ್ಲಿ ಮಾತನಾಡುವಾಗ ಸ್ಪಷ್ಟನೆ ನೀಡಿದ್ದ ಅವರು, ಯಾರೊಬ್ಬರು ಯಾರ ಮೇಲೂ ಒತ್ತಾಯಪೂರ್ವಕವಾಗಿ ಅದನ್ನು ಹೇರುವಂತಿಲ್ಲ ಎಂದಿದ್ದರು.

ಇದೀಗ ಪತಿ ನಾರಾಯಣ ಮೂರ್ತಿಯವರ ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎನ್ನುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ, ಜನರು ಗಂಭೀರವಾಗಿ ಮತ್ತು ಉತ್ಸಾಹದಿಂದ ಏನನ್ನಾದರೂ ಮಾಡಲು ಎದುರು ನೋಡಿದಾಗ 'ಸಮಯ ಎಂದಿಗೂ ಮಿತಿಯಾಗುವುದಿಲ್ಲ' ಎಂದು ಹೇಳಿದ್ದಾರೆ.

ಎನ್‌ಡಿಟಿವಿ ಆಯೋಜಿಸಿದ್ದ 'ಇಂಡಿಯಾ ಥ್ರೂ ದಿ ಐಸ್ ಆಫ್ ಇಟ್ಸ್ ಐಕಾನ್ಸ್' ಕಾರ್ಯಕ್ರಮದಲ್ಲಿ ಮಾತನಾಡಿ, ತಮ್ಮ ಪತಿ ಯಾವುದೇ ಹಣವಿಲ್ಲದೆ, ಆದರೆ, ಸಮರ್ಪಿತ ಸಹೋದ್ಯೋಗಿಗಳೊಂದಿಗೆ ಇನ್ಫೋಸಿಸ್ ಅನ್ನು ಕಟ್ಟಲು ನಿರ್ಧರಿಸಿದರು. ಅವರು ಆಗ 70 ಗಂಟೆಗಳ ಕಾಲ ಅಥವಾ ಕೆಲವೊಮ್ಮೆ ಇನ್ನೂ ಹೆಚ್ಚು ಗಂಟೆ ಕೆಲಸ ಮಾಡಿದರು. ಹಾಗಾಗಿಯೇ ಅಷ್ಟು ದೊಡ್ಡ ಸಂಸ್ಥೆಯನ್ನು ಕಟ್ಟಲು ಸಾಧ್ಯವಾಯಿತು ಎಂದಿದ್ದಾರೆ.

ಇಲ್ಲದಿದ್ದರೆ ಅದು ಸಾಧ್ಯವಾಗುತ್ತಿರಲಿಲ್ಲ. ಇನ್ಫೋಸಿಸ್‌ನ ಯಶಸ್ಸು ಯಾವುದೇ ಶಾರ್ಟ್‌ಕಟ್‌ಗಳು ಅಥವಾ ಮಂತ್ರದಂಡದಿಂದ ಆಗಿಲ್ಲ. ಬದಲಾಗಿ, ಇದು ಕಠಿಣ ಪರಿಶ್ರಮ, ಸ್ವಲ್ಪ ಅದೃಷ್ಟ, ಸರಿಯಾದ ಸಮಯದಲ್ಲಿ ಸರಿಯಾದ ಸ್ಥಳದಲ್ಲಿರುವುದು ಮತ್ತು ಎಲ್ಲವೂ ಸರಿಯಾಗಿ ನಡೆದುದರ ಪರಿಣಾಮವಾಗಿದೆ ಎಂದು ಶ್ರೀಮತಿ ಮೂರ್ತಿ ಹೇಳಿದರು.

ಸುಧಾ ಮೂರ್ತಿ
ವಾರಕ್ಕೆ 5 ದಿನ ಕೆಲಸ ಸಂಸ್ಕೃತಿಗೆ ಭಾರತ ಹೊರಳಿದಾಗ ಬೇಸರಗೊಂಡಿದ್ದ ನಾರಾಯಣ ಮೂರ್ತಿ!

ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದಾಗ, 'ನಾನು ಮೂರ್ತಿ ಅವರಿಗೆ 'ಇನ್ಫೋಸಿಸ್ ಅನ್ನು ನೋಡಿಕೊಳ್ಳಿ' ಎಂದು ಹೇಳಿದ್ದೆ. ನಾನು ನನ್ನ ಕುಟುಂಬವನ್ನು ನೋಡಿಕೊಳ್ಳುತ್ತಿದ್ದೆ. ನಾನು ಆಗ ಗಟ್ಟಿ ನಿರ್ಧಾರವನ್ನು ತೆಗೆದುಕೊಂಡೆ ಮತ್ತು ನನ್ನ ಪತಿ ಹೆಚ್ಚಿನ ಸಮಯ ಮನೆಯಲ್ಲಿರುವುದಿಲ್ಲ ಎಂದು ಹೇಳುವುದರಲ್ಲಿ ಅರ್ಥವಿಲ್ಲ ಎಂಬುದನ್ನು ನಾನು ಕಂಡುಕೊಂಡೆ. ಏಕೆಂದರೆ, ಅವರು ದೊಡ್ಡ ಕೆಲಸ ಮಾಡುತ್ತಿದ್ದರು' ಎಂದು ಅವರು ಹೇಳಿದರು.

ತನ್ನ ಪತಿ ಮಾತ್ರವಲ್ಲ; ಪತ್ರಕರ್ತರು ಮತ್ತು ವೈದ್ಯರಂತಹ ಇತರ ವೃತ್ತಿಗಳಲ್ಲಿರುವ ಜನರು ಸಹ '90 ಗಂಟೆ' ಕೆಲಸ ಮಾಡಿದ್ದಾರೆ. ನನ್ನ ಪತಿ ಇನ್ಫೋಸಿಸ್‌ ಕೆಲಸದಲ್ಲಿ ನಿರತರಾಗಿದ್ದಾಗ, ನಾನು ಮನೆ ನೋಡಿಕೊಳ್ಳುತ್ತಿದ್ದೆ, ಮಕ್ಕಳನ್ನು ಬೆಳೆಸುತ್ತಿದ್ದೆ ಮತ್ತು ಕಾಲೇಜಿನಲ್ಲಿ ಕಂಪ್ಯೂಟರ್ ವಿಜ್ಞಾನವನ್ನು ಕಲಿಸಲು ಪ್ರಾರಂಭಿಸಿದೆ ಎಂದು ಹೇಳಿದರು.

'ನಾನು ಯಾವುದೇ ಕೆಲಸ ಮಾಡಬೇಕು ಎಂದಾದಾಗ ನನ್ನದೇ ಆದ ಮಾರ್ಗವನ್ನು ರೂಪಿಸಿಕೊಳ್ಳಬೇಕು ಮತ್ತು 'ನನಗೆ ಸಮಯವಿಲ್ಲ ಅಥವಾ ನಿಮಗೆ ಸಮಯವಿಲ್ಲ' ಎಂದು ಭಾವಿಸಬಾರದು ಮತ್ತು ಅದನ್ನು ಆನಂದಿಸಬೇಕು ಎಂಬುದನ್ನು ನಾನು ಕಲಿತಿದ್ದೇನೆ. ನಾನು ಬರೆಯುತ್ತಿದ್ದೆ. ಆದರೆ, ನಾನು ಸ್ವಲ್ಪ ಹೆಚ್ಚು ಬರೆಯಲು ಪ್ರಾರಂಭಿಸಿದೆ' ಎಂದು ಅವರು ಹೇಳಿದರು.

ಸುಧಾ ಮೂರ್ತಿ
ಭಾರತ ಕಟ್ಟಲು ಯುವ ಜನರು ವಾರಕ್ಕೆ 70 ಗಂಟೆ ದುಡಿಯಬೇಕು: ನಾರಾಯಣ ಮೂರ್ತಿ

ನಂತರ, ನಾನು ಇನ್ಫೋಸಿಸ್ ಫೌಂಡೇಶನ್‌ನಲ್ಲಿ ಹಗಲು ರಾತ್ರಿ ಎನ್ನದೇ ಅದರಲ್ಲಿ ಮುಳುಗಿಹೋಗಿದ್ದೆ. ನನ್ನ ಮಕ್ಕಳು ವಿದೇಶಕ್ಕೆ ಹೋದಾಗ ನಾನು ಈ ಕೆಲಸ ಪ್ರಾರಂಭಿಸಿದೆ. ನಾನು ಓವರ್ ಟೈಂ ಕೆಲಸ ಮಾಡುತ್ತೇನೆ ಮತ್ತು ಸದ್ಯ ನನ್ನ ಪತಿಗಿಂತಲೂ ಹೆಚ್ಚು ಕೆಲಸ ಮಾಡುತ್ತೇನೆ ಮತ್ತು ಅವರು ನನಗೆ ಬೆಂಬಲವಾಗಿದ್ದಾರೆ' ಎಂದರು.

'ಪ್ರತಿಯೊಬ್ಬ ಯಶಸ್ವಿ ಮಹಿಳೆಯ ಹಿಂದೆ, ಅರ್ಥಮಾಡಿಕೊಳ್ಳುವ ಪುರುಷ ಇರುತ್ತಾನೆ. ಆದ್ದರಿಂದ, ಮೂರ್ತಿ ಕೆಲಸ ಮಾಡುತ್ತಿದ್ದಾಗ, ನಾನು (ಅವರನ್ನು) ಬೆಂಬಲಿಸಿದೆ. ನಾನು ಕೆಲಸ ಮಾಡುತ್ತಿರುವಾಗ, ಮೂರ್ತಿ ನನ್ನನ್ನು ಬೆಂಬಲಿಸುತ್ತಾರೆ. ಅದನ್ನೇ ನಾನು ಜೀವನ ಎಂದು ಕರೆಯುತ್ತೇನೆ' ಎಂದು ಅವರು ಹೇಳಿದರು.

ನೀವು ಶ್ರೀಮಂತರಾಗಿರಲಿ ಅಥವಾ ಬಡವರಾಗಿರಲಿ, ಸುಂದರರಾಗಿರಲಿ ಅಥವಾ ಕುರೂಪವಾಗಿರಲಿ ದೇವರು ಎಲ್ಲರಿಗೂ 24 ಗಂಟೆಗಳನ್ನು ಕೊಟ್ಟಿದ್ದಾನೆ. ನೀವು ಅದನ್ನು ಹೇಗೆ ಖರ್ಚು ಬಳಸಿಕೊಳ್ಳುತ್ತೀರಿ ಎಂಬುದು ನಿಮಗೆ ಬಿಟ್ಟದ್ದು. ನೀವು ಯಾವುದನ್ನಾದರೂ ಉತ್ಸಾಹದಿಂದ ಮಾಡಲು ಬಯಸಿದರೆ, ಅದಕ್ಕೆ ಸಮಯ ಕೊಡಬೇಕಾಗುತ್ತದೆ. ಮತ್ತು ನೀವು ನಿಮ್ಮ ಕೆಲಸದ ಬಗ್ಗೆ ಉತ್ಸಾಹ ಹೊಂದಿದ್ದರೆ, ನಿಮ್ಮ ಸಂಗಾತಿ ಅದನ್ನು ಬೆಂಬಲಿಸಬೇಕು' ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com