
ವಾರಣಾಸಿ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಆಧ್ಯಾತ್ಮಿಕ ಗುರು 128 ವರ್ಷದ ಬಾಬಾ ಶಿವಾನಂದ್ ಅವರು ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ನಿಧನರಾಗಿದ್ದಾರೆ.
ಬಾಬಾ ಶಿವಾನಂದ್ ಅವರನ್ನು ಏಪ್ರಿಲ್ 30 ರಂದು ಕೆಲವು ಆರೋಗ್ಯ ಸಮಸ್ಯೆಗಳಿಂದ ವಾರಣಾಸಿಯ ಬಿಎಚ್ಯು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕಳೆದ ರಾತ್ರಿ ನಿಧನರಾಗಿದ್ದಾರೆ. ಅವರ ದೇಹವನ್ನು ಕಬೀರ್ನಗರ ಕಾಲೋನಿಯಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಇರಿಸಲಾಗಿದೆ. ಅವರ ಅಂತ್ಯಕ್ರಿಯೆಯನ್ನು ಇಂದು ಸಂಜೆ ನಡೆಸಲಾಗುವುದು ಎಂದು ಅವರ ಅಪಾರ ಶಿಷ್ಯವೃಂದ ತಿಳಿಸಿದ್ದಾರೆ.
ಆಗಸ್ಟ್ 8, 1896 ರಂದು ಇಂದಿನ ಬಾಂಗ್ಲಾದೇಶದ ಸಿಲ್ಹೆಟ್ ಜಿಲ್ಲೆಯಲ್ಲಿ ಜನಿಸಿದ ಬಾಬಾ ಶಿವಾನಂದ್ ಅವರು ಕೇವಲ ಆರು ವರ್ಷದವರಾಗಿದ್ದಾಗ ಹಸಿವಿನಿಂದ ತಮ್ಮ ಹೆತ್ತವರನ್ನು ಕಳೆದುಕೊಂಡರು ಎನ್ನುತ್ತಿದ್ದಾರೆ. ಅಂದಿನಿಂದ, ಅವರು ಕಠಿಣ ಜೀವನ ಮತ್ತು ಶಿಸ್ತಿನ ಜೀವನವನ್ನು ನಡೆಸಿದರು, ಕೇವಲ ಅತ್ಯಲ್ಪ ಆಹಾರ ಸೇವಿಸುತ್ತಿದ್ದರು.
ಹೆತ್ತವರ ಮರಣ ನಂತರ ಅವರನ್ನು ಓಂಕಾರಾನಂದರ ಆರೈಕೆಗೆ ಒಳಪಡಿಸಲಾಯಿತು, ಅವರು ಅವರ ರಕ್ಷಕ ಮತ್ತು ಮಾರ್ಗದರ್ಶಕರಾದರು. ಅವರ ಮಾರ್ಗದರ್ಶನದಲ್ಲಿ ಬಾಬಾ ಶಿವಾನಂದ್ ಅವರು ಆಧ್ಯಾತ್ಮಿಕ ಶಿಕ್ಷಣ ಮತ್ತು ಜೀವನ ಬೋಧನೆಗಳನ್ನು ಪಡೆದರು.
ಶಿಸ್ತುಬದ್ಧ ಜೀವನಶೈಲಿ, ಯೋಗ, ಧ್ಯಾನ
ಯೋಗ ಮತ್ತು ಆಧ್ಯಾತ್ಮಿಕತೆಗೆ ನೀಡಿದ ಕೊಡುಗೆಗಳಿಗಾಗಿ ಗುರುತಿಸಲ್ಪಟ್ಟ ಬಾಬಾ ಶಿವಾನಂದ್ ಅವರನ್ನು 2022 ರಲ್ಲಿ ಪದ್ಮಶ್ರೀ ಪ್ರಶಸ್ತಿಯಿಂದ ಗೌರವಿಸಲಾಯಿತು. ಅವರ ಶಿಷ್ಯರು ಅವರ ದೀರ್ಘಾಯುಷ್ಯ ಮತ್ತು ದೃಢವಾದ ಆರೋಗ್ಯ, ಅವರ ಶಿಸ್ತುಬದ್ಧ ಜೀವನಶೈಲಿಗೆ ಮನ್ನಣೆ ನೀಡಿದರು. ಪ್ರತಿದಿನ ಬೆಳಗಿನ ಜಾವ 3 ಗಂಟೆಗೆ ಎದ್ದು ಯೋಗಾಭ್ಯಾಸ ಮಾಡುತ್ತಿದ್ದರು. ತಮ್ಮ ಎಲ್ಲಾ ಕೆಲಸಗಳನ್ನು ತಾವೇ ಮಾಡುತ್ತಿದ್ದರು. ಬೇಯಿಸಿದ ಆಹಾರ ಮಾತ್ರ ತಿಂದು ಚಾಪೆಯ ಮೇಲೆ ಮಲಗುತ್ತಿದ್ದರು. ಯೋಗ ಗುರುಗಳ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೌರವ ಸೂಚಿಸಿದ್ದಾರೆ.
ಕಾಶಿ ನಿವಾಸಿ ಮತ್ತು ಯೋಗ ಸಾಧಕ ಶಿವಾನಂದ ಬಾಬಾ ಅವರ ನಿಧನದಿಂದ ನನಗೆ ತೀವ್ರ ದುಃಖವಾಗಿದೆ. ಯೋಗ ಮತ್ತು ಸಾಧನಕ್ಕೆ ಮೀಸಲಾದ ಅವರ ಜೀವನವು ದೇಶದ ಪ್ರತಿ ಪೀಳಿಗೆಗೂ ಸ್ಫೂರ್ತಿ ನೀಡುತ್ತದೆ. ಯೋಗದ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸಿದ್ದಕ್ಕಾಗಿ ಅವರಿಗೆ ಪದ್ಮಶ್ರೀ ಪ್ರಶಸ್ತಿಯೂ ಸಂದಿದೆ.
ಶಿವಾನಂದ ಬಾಬಾ ಅವರ ಶಿವಲೋಕದ ನಿರ್ಗಮನವು ಕಾಶಿ ನಿವಾಸಿಗಳಾದ ನಮಗೆಲ್ಲರಿಗೂ ಮತ್ತು ಅವರಿಂದ ಸ್ಫೂರ್ತಿ ಪಡೆದ ಲಕ್ಷಾಂತರ ಜನರಿಗೆ ತುಂಬಲಾಗದ ನಷ್ಟವಾಗಿದೆ. ಈ ದುಃಖದ ಸಮಯದಲ್ಲಿ ಅವರಿಗೆ ನನ್ನ ಗೌರವ ಸಲ್ಲಿಸುತ್ತೇನೆ ಎಂದಿದ್ದಾರೆ.
"ಯೋಗ ಕ್ಷೇತ್ರದಲ್ಲಿ ಅಪ್ರತಿಮ ಕೊಡುಗೆ ನೀಡಿದ ಕಾಶಿಯ ಪ್ರಸಿದ್ಧ ಯೋಗ ಗುರು 'ಪದ್ಮಶ್ರೀ' ಸ್ವಾಮಿ ಶಿವಾನಂದ್ ನಿಧನ ಸುದ್ದಿ ದುಃಖಕರವಾಗಿದೆ. ನಿಮ್ಮ ಸಾಧನೆ ಮತ್ತು ಯೋಗಭರಿತ ಜೀವನವು ಇಡೀ ಸಮಾಜಕ್ಕೆ ಒಂದು ದೊಡ್ಡ ಸ್ಫೂರ್ತಿಯಾಗಿದೆ. ನಿಮ್ಮ ಇಡೀ ಜೀವನವನ್ನು ಭಾರತದ ಯೋಗದ ಬೆಳವಣಿಗೆಗೆ ಮೀಸಲಿಟ್ಟಿದ್ದಿರಿ. ಅಗಲಿದ ಆತ್ಮಕ್ಕೆ ಮೋಕ್ಷ ನೀಡಲಿ ಮತ್ತು ಅವರ ದುಃಖಿತ ಅನುಯಾಯಿಗಳಿಗೆ ಈ ಅಪಾರ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಬಾಬಾ ವಿಶ್ವನಾಥರನ್ನು ಪ್ರಾರ್ಥಿಸುತ್ತೇನೆ. ಓಂ ಶಾಂತಿ! ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
Advertisement