
ನವದೆಹಲಿ: ಪಾಕಿಸ್ತಾನದೊಂದಿಗೆ ಪರಿಸ್ಥಿತಿಯನ್ನು ಉಲ್ಬಣಗೊಳಿಸುವ ಉದ್ದೇಶ ಭಾರತಕ್ಕೆ ಇಲ್ಲ. ಆದರೆ, ದೇಶದ ಮೇಲೆ ಪಾಕ್ನಿಂದ ಯಾವುದೇ ರೀತಿಯ ಮಿಲಿಟರಿ ದಾಳಿಗಳು ನಡೆದರೂ, ಅದಕ್ಕೆ ತಕ್ಕ ಕಠಿಣ ಪ್ರತಿಕ್ರಿಯೆ ನೀಡಲಾಗುವುದು ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಗುರುವಾರ ಹೇಳಿದ್ದಾರೆ.
ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರೊಂದಿಗಿನ ಸಭೆಯಲ್ಲಿ ಜೈಶಂಕರ್ ಈ ಹೇಳಿಕೆ ನೀಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಅನಾಗರಿಕ ದಾಳಿಯು ಭಾರತವನ್ನು 'ಗಡಿಯಾಚೆಗಿನ' ಭಯೋತ್ಪಾದಕ ನೆಲೆಗಳ ಮೇಲೆ ಬುಧವಾರ ದಾಳಿ ನಡೆಸುವಂತೆ ಒತ್ತಾಯಿಸಿತು ಎಂದು ವಿದೇಶಾಂಗ ಸಚಿವರು ಹೇಳಿದರು.
'ಬೈಸರನ್ ಕಣಿವೆ ಮೇಲೆ ದಾಳಿ ನಡೆಸಿ 26 ಮಂದಿ ಸಾವಿಗೆ ಕಾಣವಾದ ಉಗ್ರ ದಾಳಿಯು ಮೇ 7ರಂದು ಗಡಿಯಾಚೆಗಿನ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ಮಾಡುವ ಮೂಲಕ ಪ್ರತಿಕ್ರಿಯಿಸಲು ನಮ್ಮನ್ನು ಒತ್ತಾಯಿಸಿತು. ನಾವು ನೀಡಿರುವುದು ಕ್ರಿಯೆಗೆ ತಕ್ಕ ಪ್ರತಿಕ್ರಿಯೆಯಷ್ಟೇ' ಎಂದು ಅವರು ಹೇಳಿದರು.
'ಪಾಕ್ ಜೊತೆಗಿನ ಪರಿಸ್ಥಿತಿಯನ್ನು ಉಲ್ಬಣಗೊಳಿಸುವುದು ನಮ್ಮ ಉದ್ದೇಶವಲ್ಲ. ಆದಾಗ್ಯೂ, ನಮ್ಮ ಮೇಲೆ ಮಿಲಿಟರಿ ದಾಳಿಗಳು ನಡೆದರೆ, ಅದಕ್ಕೆ ಅತ್ಯಂತ ದೃಢವಾದ ಪ್ರತಿಕ್ರಿಯೆ ನೀಡಲಾಗುವುದು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ' ಎಂದು ಅವರು ಹೇಳಿದರು.
ನೆರೆಯ ಮತ್ತು ನಿಕಟ ಪಾಲುದಾರನಾಗಿ, ಇರಾನ್ ಪರಿಸ್ಥಿತಿಯ ಬಗ್ಗೆ ತಿಳಿವಳಿಕೆ ಹೊಂದಿರುವುದು ಮುಖ್ಯ ಎಂದು ಜೈಶಂಕರ್ ಹೇಳಿದರು.
ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ಇರಾನ್ ವಿದೇಶಾಂಗ ಸಚಿವರು ನಿನ್ನೆ ಮಧ್ಯರಾತ್ರಿಯ ಸುಮಾರಿಗೆ ನವದೆಹಲಿಗೆ ಬಂದಿಳಿದರು.
Advertisement