
ನವದೆಹಲಿ: ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ್ ಭಾರತದಲ್ಲಿ ನಡೆದ ಉಗ್ರರ ದಾಳಿ ಪಾಕಿಸ್ತಾನ ಪ್ರಯೋಜಿತ ಎಂಬುದನ್ನು ಬಹಿರಂಗಪಡಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಹೇಳಿದ್ದಾರೆ.
ಗಡಿ ಭದ್ರತಾ ಪಡೆ (ಬಿಎಸ್ಎಫ್) ತನ್ನ 22 ನೇ ಪ್ರತಿಷ್ಠಾಪನಾ ಸಮಾರಂಭದ ಸಂದರ್ಭದಲ್ಲಿ ಆಯೋಜಿಸಿದ್ದ ರುಸ್ತಮ್ಜಿ ಸ್ಮಾರಕ ಉಪನ್ಯಾಸವನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಡಿ ಕಾವಲು ಪಡೆ ಆಪರೇಷನ್ ಸಿಂಧೂರ್ ಸಮಯದಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದು, ಗಡಿಯಲ್ಲಿನ ಪಾಕಿಸ್ತಾನದ ದುಷ್ಕೃತ್ಯಗಳನ್ನು ಪರಿಣಾಮಕಾರಿಯಾಗಿ ವಿಫಲಗೊಳಿಸಿದೆ ಎಂದು ಶ್ಲಾಘಿಸಿದರು.
ಆಪರೇಷನ್ ಸಿಂಧೂರ್ ಭಾರತದಲ್ಲಿ ನಡೆದ ಉಗ್ರರ ದಾಳಿ ಸಂಪೂರ್ಣವಾಗಿ ಪಾಕಿಸ್ತಾನ ಪ್ರಾಯೋಜಿತ ಎಂಬುದನ್ನು ಬಹಿರಂಗಪಡಿಸಿದೆ ಎಂದು ಹೇಳಿದರು.
ನಾವು ಆಪರೇಷನ್ ಸಿಂಧೂರ್ ಪ್ರಾರಂಭಿಸಿ ಒಂಬತ್ತು ಉಗ್ರರ ನೆಲೆಗಳ ನಾಶಪಡಿಸಿದ್ದೇವೆ. ಪಾಕಿಸ್ತಾನ ಸೇನಾ ನೆಲೆಗಳು, ನಾಗರಿಕರು ಅಥವಾ ವಾಯುನೆಲೆಯನ್ನು ಗುರಿಯಾಗಿಸಿ ದಾಳಿ ನಡೆಸಿಲ್ಲ ಎಂಬುದನ್ನು ಗಮನಿಸುವುದು ಇಲ್ಲಿ ಮುಖ್ಯವಾಗಿದೆ. ಭಯೋತ್ಪಾದಕರನ್ನು ಗುರಿಯಾಗಿಸಿಕೊಂಡಿದ್ದೆಯವೇ ಹೊರತು, ನಾಗರೀಕರು, ಸೇನಾನೆಲೆಗಳನ್ನಲ್ಲ. ಆದರೆ, ಪಾಕಿಸ್ತಾನ ನಮ್ಮ ನಾಗರೀಕರ ಮೇಲೆ ದಾಳಿ ನಡೆಸಿತು. ಈ ಮೂಲಕ ಭಾರತದಲ್ಲಿ ನಡೆದ ಉಗ್ರರ ದಾಳಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ಎಂಬುದನ್ನು ಸಾಬೀತುಪಡಿಸಿತು. ನಮ್ಮ ಸೇನಾಪಡೆಗಳು ಪಾಕಿಸ್ತಾನ ದಾಳಿ ವಿಫಲಗೊಳ್ಳುವಂತೆ ಮಾಡಿತು.
ಪಾಕಿಸ್ತಾನ ದಾಳಿಗೆ ಪ್ರತಿಯಾಗಿ ನಮ್ಮ ಸೇನಾಪಡೆ ಅವರ ವಾಯುನೆಲೆಯನ್ನು ಗುರಿಯಾಗಿಸಿಕೊಂಡು ನಮ್ಮ ದಾಳಿಯ ಸಾಮರ್ಥ್ಯವನ್ನು ಪರಿಚಯಿಸಿತು. 2014 ರಲ್ಲಿ, ಬಿಜೆಪಿ ಸರ್ಕಾರ ರಚನೆಯಾದಾಗ ಉರಿಯಲ್ಲಿ ಸೈನಿಕರ ಮೇಲೆ ದಾಳಿ ಮಾಡಲಾಯಿತು. "ನಾವು ಸರ್ಜಿಕಲ್ ಸ್ಟ್ರೈಕ್ ಮೂಲಕ ದಿಟ್ಟ ಉತ್ತರ ನೀಡಿದೆವು.
ನಂತರ, ಪುಲ್ವಾಮಾ ದಾಳಿ ನಡೆಯಿತು. ಇದಕ್ಕೆ ಉತ್ತರವಾಗಿ ವಾಯುದಾಳಿ ಮಾಡಿದೆವು. ಈಗ, ಪಹಲ್ಗಾಮ್ನಲ್ಲಿ ದಾಳಿ ನಡೆಸಿದ್ದು, ಧರ್ಮದ ಬಗ್ಗೆ ಕೇಳಿದ ಅಮಾಯಕ ಪ್ರವಾಸಿಗರನ್ನು ಹತ್ಯೆ ಮಾಡಿದ್ದಾರೆ. ಇದಕ್ಕೆ ಆಪರೇಷನ್ ಸಿಂಧೂರ್ ಮೂಲಕ ಉತ್ತರ ನೀಡಿದ್ದೇವೆ. ನಮ್ಮ ಈ ಕ್ರಮಕ್ಕೆ ಈ ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. ಇದಕ್ಕಾಗಿ ನಾನು ಸೇನೆಗೆ ವಂದಿಸುತ್ತೇನೆಂದು ತಿಳಿಸಿದರು.
Advertisement