ಒಡಿಶಾ: ನಕ್ಸಲರಿಂದ ಸ್ಫೋಟಕ ತುಂಬಿದ್ದ ಲಾರಿ ಹೈಜಾಕ್!
ರೂರ್ಕೆಲಾ/ಭುವನೇಶ್ವರ: ಕಲ್ಲು ಕ್ವಾರಿಗೆ ಸ್ಫೋಟಕ ಸಾಗಿಸುತ್ತಿದ್ದ ಲಾರಿಯನ್ನು ನಕ್ಸಲರು ಲೂಟಿ ಮಾಡಿರುವ ಘಟನೆ ಒಡಿಶಾದ ಸುಂದರಗಢ ಜಿಲ್ಲೆಯ ರೂರ್ಕೆಲಾದಿಂದ ಸುಮಾರು 90 ಕಿ.ಮೀ ದೂರದಲ್ಲಿರುವ ಅರಣ್ಯ ಪ್ರದೇಶದಲ್ಲಿ ಮಂಗಳವಾರ ನಡೆದಿದೆ.
ಘಟನೆ ನಡೆದ ಪ್ರದೇಶವು ಜಾರ್ಖಂಡ್ನ ಪಕ್ಕದ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯ ಸಾರಂಡಾ ಅರಣ್ಯದ ಸಮೀಪದಲ್ಲಿದ್ದು, ಇದನ್ನು ಮಾವೋವಾದಿಗಳ ತಾಣವೆಂದು ಪರಿಗಣಿಸಲಾಗಿದೆ.
ಸ್ಫೋಟಕಗಳಿಂದ ತುಂಬಿದ ಲಾರಿ, ಕೆ ಬಲಂಗ್ ಪೊಲೀಸ್ ವ್ಯಾಪ್ತಿಯಲ್ಲಿರುವ ಬಂಕೊ ಪ್ರದೇಶಕ್ಕೆ ಹೋಗುತ್ತಿತ್ತು, ಈ ಪ್ರದೇಶದಲ್ಲಿ ಕಲ್ಲಿನ ಕ್ವಾರಿ ಇದ್ದು, ಅಲ್ಲಿಗೆ ಸ್ಫೋಟಕಗಳ ಸಾಗಿಸಲಾಗುತ್ತಿತ್ತು ಎಂದು ಮೂಲಗಳು ತಿಳಿಸಿವೆ.
ಸುಮಾರು ಎಂಟು ಶಸ್ತ್ರಸಜ್ಜಿತ ವ್ಯಕ್ತಿಗಳು ಬೆಳಿಗ್ಗೆ 10 ಗಂಟೆ ಸುಮಾರಿಗೆ ಲಾರಿಯನ್ನು ಅಪಹರಿಸಿದ್ದು, ಅರಣ್ಯ ಪ್ರದೇಶಕ್ಕೆ ಕೊಂಡೊಯ್ದಿದ್ದಾರೆ. ಅಲ್ಲಿ ಸ್ಫೋಟಕಗಳನ್ನು ಇಳಿಸಲಾಗಿದೆ ಎಂದು ತಿಳಿದುಬಂದಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಲಾರಿಯು ಸುಮಾರು 150 ಪ್ಯಾಕೆಟ್ ಜೆಲಾಟಿನ್ ಸ್ಟಿಕ್ಗಳನ್ನು ಸಾಗಿಸುತ್ತಿತ್ತು ಎಂದು ತಿಳಿದುಬಂದಿದೆ.
ಬಂಕೊ ಬಳಿ ಲಾರಿಯನ್ನು ತಡೆದಿದ್ದಾರೆ. ಬಳಿಕ ಲಾರಿಯನ್ನು ಅರಣ್ಯ ಪ್ರದೇಶಕ್ಕೆ ಕೊಂಡೊಯ್ದಿದ್ದಾರೆ. ಬಳಿಕ 10-15 ಜನರ ಸಮ್ಮುಖದಲ್ಲಿ ಸ್ಫೋಟಕಗಳನ್ನು ಇಳಿಸಲಾಗಿದೆ. ನಂತರ ನಾಪತ್ತೆಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಈವರೆಗೆ ಯಾವುದೇ ಎಫ್ಐಆರ್'ಗಳೂ ದಾಖಲಾಗಿಲ್ಲ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ ಡಿಐಜಿ (ಪಶ್ಚಿಮ ವಲಯ) ಬ್ರಿಜೇಶ್ ಕುಮಾರ್ ರೈ ಅವರು ಹೇಳಿದ್ದಾರೆ.
ಮಾವೋವಾದಿಗಳ ಕೈವಾಡ ಕುರಿತ ಪ್ರಶ್ನೆಗೆ ಉತ್ತರಿಸಿ, ಘಟನೆಯ ಹಿಂದೆ ಇರುವವರ ಗುರುತು ಪತ್ತೆಗೆ ತನಿಖೆ ನಡೆಸಲಾಗುತ್ತಿದೆ. ಶೋಧ ಕಾರ್ಯಾಚರಣೆಯನ್ನು ಪ್ರಾರಂಭವಾಗಿದೆ. ಮಾವೋವಾದಿಗಳ ಕೈವಾಡವನ್ನು ತಳ್ಳಿಹಾಕುವಂತಿಲ್ಲ ಎಂದು ತಿಳಿಸಿದ್ದಾರೆ.