ಬಿಹಾರ ಚುನಾವಣೆ: ಪ್ರಮುಖ ಯಾದವ್ ನಾಯಕರಿಗೆ ಟಿಕೆಟ್ ನಿರಾಕರಣೆ; NDAಗೆ ಹಿನ್ನಡೆ
ನವದೆಹಲಿ: ಆರ್ಜೆಡಿ ನೇತೃತ್ವದ ಮಹಾಘಟಬಂಧನ್(ಮಹಾಮೈತ್ರಿಕೂಟ)ದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ತೇಜಸ್ವಿ ಯಾದವ್ ಅವರನ್ನು ಗುರುವಾರ ಘೋಷಿಸುವುದರೊಂದಿಗೆ, ಬಿಹಾರದ ರಾಜಕೀಯ ಗಮನ ಮತ್ತೊಮ್ಮೆ ಯಾದವ್ ಸಮುದಾಯದತ್ತ ತಿರುಗಿದೆ.
ಈ ಬೆಳವಣಿಗೆಯು ಆರ್ಜೆಡಿಯ ಸಾಂಪ್ರದಾಯಿಕ ಯಾದವ್ ಮತಗಳನ್ನು ಕದಿಯಲು ದೀರ್ಘಕಾಲದಿಂದ ಪ್ರಯತ್ನಿಸುತ್ತಿರುವ ಬಿಜೆಪಿಗೆ ದೊಡ್ಡ ಸವಾಲ ಒಡ್ಡಿದೆ. ಅಲ್ಲದೆ ಬಿಜೆಪಿ ಮತ್ತು ಅದರ ಮಿತ್ರಪಕ್ಷವಾದ ಜೆಡಿ(ಯು), ಎನ್ಡಿಎ ಮೈತ್ರಿಕೂಟದೊಳಗಿನ ಹಲವಾರು ಪ್ರಮುಖ ಯಾದವ್ ಅಭ್ಯರ್ಥಿಗಳಿಗೆ ಟಿಕೆಟ್ ನಿರಾಕರಿಸುವ ಮೂಲಕ ಯಾದವ್ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದೆ.
ಸುಮಾರು ಅರ್ಧ ಡಜನ್ ಪ್ರಭಾವಿ ಯಾದವ್ ನಾಯಕರನ್ನು ಕೈಬಿಡುವ ಮೂಲಕ ಬಿಜೆಪಿ, ಆ ಸಮುದಾಯಕ್ಕೆ ನಕಾರಾತ್ಮಕ ಸಂದೇಶ ನೀಡಿದೆ. ಇದು ಅಂತಿಮವಾಗಿ ಆರ್ಜೆಡಿಯ ಅನುಕೂಲಕ್ಕೆ ಮತ್ತು ಬಿಜೆಪಿಯ ಚುನಾವಣಾ ಹಾನಿಗೆ ಕಾರಣವಾಗಬಹುದು.
ಆರ್ಜೆಡಿಯ ಸಾಂಪ್ರದಾಯಿಕ ಯಾದವ್ ಮತದಾರರನ್ನು ಸೆಳೆಯಲು ಬಿಜೆಪಿ ಹಲವು ವರ್ಷಗಳಿಂದ ಪ್ರಯತ್ನಿಸುತ್ತಿದೆ. ಆದರೂ ಅದು ಸಾಧ್ಯವಾಗಿಲ್ಲ. ಇದೀಗ ಹಲವಾರು ಸುಶಿಕ್ಷಿತ ಮತ್ತು ಪ್ರಭಾವಿ ಯಾದವ್ ನಾಯಕರನ್ನು ಕೈಬಿಟ್ಟಿದೆ. ಇದರಲ್ಲಿ ಪಾಟ್ನಾ ಸಾಹಿಬ್ ಅನ್ನು ದೀರ್ಘಕಾಲ ಪ್ರತಿನಿಧಿಸುತ್ತಿರುವ ವಿಧಾನಸಭಾ ಸ್ಪೀಕರ್ ನಂದ ಕಿಶೋರ್ ಯಾದವ್ ಮತ್ತು ಮಾನೇರ್ ವಿಧಾನಸಭಾ ಕ್ಷೇತ್ರದ ಪ್ರಭಾವಿ ನಾಯಕ, ಬಿಜೆಪಿಯ ರಾಷ್ಟ್ರೀಯ ವಕ್ತಾರ ಮತ್ತು ಒಬಿಸಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ನಿಖಿಲ್ ಆನಂದ್ ಅವರು ಸೇರಿದ್ದಾರೆ.
ಎಂಫಿಲ್ ಮತ್ತು ಪಿಎಚ್ಡಿ ಪದವಿ ಪಡೆದಿರುವ ಡಾ. ಆನಂದ್ ಅವರು, ಸೀಟು ಹಂಚಿಕೆ ವ್ಯವಸ್ಥೆಯಲ್ಲಿ ಎಲ್ಜೆಪಿಗೆ ಅವರ ಸ್ಥಾನವನ್ನು ಹಂಚಿಕೆ ಮಾಡಿದ ನಂತರ ಅವರಿಗೆ ಮಾನೇರ್ನಿಂದ ಟಿಕೆಟ್ ನಿರಾಕರಿಸಲಾಯಿತು. ಬಿಹಾರದ ರಾಜಕೀಯದಲ್ಲಿ ಜಾತಿ ನಿರ್ಣಾಯಕ ಅಂಶವಾಗಿ ಉಳಿದಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.
1990 ರಿಂದ 2005 ರವರೆಗೆ, ಲಾಲು ಪ್ರಸಾದ್ ಯಾದವ್ ಮತ್ತು ನಂತರ ರಾಬ್ರಿ ದೇವಿ ನೇತೃತ್ವದ ರಾಷ್ಟ್ರೀಯ ಜನತಾ ದಳ(ಆರ್ಜೆಡಿ) ಬಿಹಾರದ ರಾಜಕೀಯದಲ್ಲಿ ಪ್ರಾಬಲ್ಯ ಸಾಧಿಸಿತು. ಈ ಅವಧಿಯಲ್ಲಿ ಮತ್ತು ನಂತರ, ಯಾದವ್ ರಾಜ್ಯದ ಅತಿದೊಡ್ಡ ಸಮುದಾಯವಾಗಿದ್ದು, ಜನಸಂಖ್ಯೆಯ ಸುಮಾರು 14 ಪ್ರತಿಶತವನ್ನು ಹೊಂದಿದೆ. ಇವರಲ್ಲಿ ಹೆಚ್ಚಾಗಿ ಆರ್ಜೆಡಿ ಮೈತ್ರಿಕೂಟಕ್ಕೆ ನಿಷ್ಠರಾಗಿ ಉಳಿದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ


