

ಕಳೆದ ತಿಂಗಳು ಚೀನಾದಲ್ಲಿ ನಡೆದ ಶಾಂಘೈ ಸಹಕಾರ ಸಂಘದ ಸಭೆಯಲ್ಲಿ ಭಾಗಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ನಡೆಸಲಾಗಿತ್ತು ಎಂಬ ಸ್ಫೋಟಕ ಮಾಹಿತಿ ಈಗ ಬಹಿರಂಗವಾಗಿದೆ.
ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ವಿರುದ್ಧ ಇಂಥಹದ್ದೊಂದು ಆರೋಪ ಕೇಳಿಬರುತ್ತಿದ್ದು, ಈ ಕುರಿತಂತೆ ಸಾಕಷ್ಟು ಮಾಧ್ಯಮಗಳು ವರದಿಗಳನ್ನು ಪ್ರಕಟಿಸುತ್ತಿದೆ.
ಅಮೆರಿಕ ಭಾರತದ ಮೇಲೆ ರಷ್ಯಾ ತೈಲ ಖರೀದಿಸದಂತೆ ಒತ್ತಡ ಹೇರುತ್ತಿರುವುದು ಹಾಗೂ ಭಾರತದ ಕೃಷಿ, ಹಾಲಿನ ಮಾರುಕಟ್ಟೆಯನ್ನು ತನಗೆ ಮುಕ್ತಮಾಡಿಕೊಡಬೇಕೆಂಬ ಬೇಡಿಕೆಗೆ ಭಾರತ ಈ ವರೆಗೂ ಬಗ್ಗದೇ ಇರುವ ಹಿನ್ನೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಭಾರತ- ಅಮೆರಿಕ ನಡುವಿನ ಸಂಬಂಧಗಳಲ್ಲಿ ಬಿರುಕು ಮೂಡಿರುವುದರ ನಡುವೆಯೇ ಇಂಥಹ ವರದಿಗಳು ಪ್ರಕಟವಾಗಿರುವುದು ಸಾಕಷ್ಟು ಊಹಾಪೋಹ, ಚರ್ಚೆಗಳಿಗೆ ಕಾರಣವಾಗಿದೆ.
ಅಮೆರಿಕದ ಸುಂಕ ಬೆದರಿಕೆಗಳ ಬೆನ್ನಲ್ಲೇ ಭಾರತ- ಚೀನಾ ಸಂಬಂಧಗಳಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿತ್ತು ಅದಷ್ಟೇ ಅಲ್ಲದೇ ರಷ್ಯಾ-ಭಾರತ-ಚೀನಾಗಳು ಒಗ್ಗೂಡಿರುವುದನ್ನು ಸಹಿಸದ ದೇಶವೊಂದು ಮೋದಿ ಹತ್ಯೆಗೆ ಸಂಚು ರೂಪಿಸಿದೆ ಎಂದು ಈ ವರದಿಗಳನ್ನು ಆಧರಿಸಿ ವಿಶ್ಲೇಷಿಸಲಾಗುತ್ತಿದೆ.
ಇಷ್ಟೆಲ್ಲಾ ಮಾಹಿತಿಗಳು ಬಹಿರಂಗಗೊಳ್ಳುತ್ತಿರುವುದಕ್ಕೆ ಕಾರಣ ಢಾಕಾದಲ್ಲಿ ನಿಯೋಜಿಸಲಾಗಿದ್ದ ಅಮೆರಿಕದ ವಿಶೇಷ ಪಡೆಗಳ ಅಧಿಕಾರಿ ಟೆರೆನ್ಸ್ ಅರ್ವೆಲ್ಲೆ ಜಾಕ್ಸನ್ ಆಗಸ್ಟ್ 31 ರಂದು ಶವವಾಗಿ ಪತ್ತೆಯಾಗಿರುವುದಾಗಿದೆ. ಈ ವ್ಯಕ್ತಿಯನ್ನು ಅಮೆರಿಕ ಮ್ಯಾನ್ಮಾರ್ ನಲ್ಲಿ ಅರಾಕನ್ ಆರ್ಮಿಗೆ ಬಾಂಗ್ಲಾ ನೆರವು ನೀಡಲು ನಿಯೋಜಿಸುವ ನೆಪದಲ್ಲಿ ಸಕ್ರಿಯವಾಗಿರಿಸಿತ್ತು. ಈ ನಿಗೂಢ ಸಾವು ಸಿಐಎ ಹೆಜ್ಜೆಗುರುತು ಹಾಗೂ ಚೀನಾದಲ್ಲಿ ಮೋದಿ ಹತ್ಯೆಯ ಸಂಚಿನ ಯೋಜನೆಯನ್ನು ಬಿಚ್ಚಿಡುತ್ತಿದೆ.
ಸಿಐಎ ವಿರುದ್ಧದ ಆರೋಪ ಮತ್ತೊಂದು ತಾಷ್ಕೆಂಟ್ ಘಟನೆಯಂತೆ ಮಾಡುವ ಪ್ರಯತ್ನ ಎಂದೇ ವ್ಯಾಪಕವಾಗಿ ವಿಶ್ಲೇಷಿಸಲಾಗುತ್ತಿದೆ. ಚೀನಾದ ನೆಲದಲ್ಲಿ ಭಾರತದ ಪ್ರಧಾನಿಯನ್ನು ಹತ್ಯೆ ಮಾಡಿದರೆ, ಶಾಶ್ವತವಾಗಿ ಚೀನಾ- ಭಾರತವನ್ನು ದೂರ ಮಾಡುವ ಮತ್ತು ಭಾರತದಲ್ಲಿ ಈಗಿನ ದೃಢ ಸರ್ಕಾರವನ್ನು ತೆಗೆದು ಅರಾಜಕತೆ ಉಂಟುಮಾಡಿ ತನ್ನ ಮಾತು ಕೇಳುವ ಸರ್ಕಾರವನ್ನು ಸ್ಥಾಪಿಸಬಹುದು ಎಂಬುದು ಈ ಯೋಜನೆಯ ಹಿಂದಿನ ಲೆಕ್ಕಾಚಾರವಾಗಿತ್ತು ಆದರೆ ರಷ್ಯಾ- ಭಾರತ ಜಂಟಿಯಾಗಿ ಈ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿದವು ಎಂದು ಹೇಳಲಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡಲು ಬಂದಿದ್ದ ಏಜೆಂಟ್ ಅತ್ಯಂತ ನಿಗೂಢವಾಗಿ ಬಾಂಗ್ಲಾದೇಶದ ಹೊಟೆಲ್ ನಲ್ಲಿ ಸಾವಿಗೀಡಾಗಿದ್ದಾನೆ. ಈ ಮೂಲಕ ಸಿಐಎ ಲೆಕ್ಕಾಚಾರವನ್ನು ಭಾರತದ ರಾ ಸಂಪೂರ್ಣವಾಗಿ ತಲೆಕೆಳಗೆ ಮಾಡಿದೆ.
ಇದಕ್ಕೆ ಪೂರಕವೆಂಬಂತೆ ಚೀನಾದಲ್ಲಿ ನಡೆದ ಕೆಲವು ಘಟನೆಗಳು ಹೊಂದಾಣಿಕೆಯಾಗುತ್ತಿವೆ. ಪ್ರಧಾನಿ ಮೋದಿ ಇದ್ದ ಹೊಟೆಲ್ ಗೆ ರಷ್ಯಾ ಅಧ್ಯಕ್ಷ ಪುಟಿನ್ ದಿಢೀರ್ ಭೇಟಿ ನೀಡಿದ್ದು, ಯಾರಿಗೂ ಯವತ್ತೂ ಕಾಯದ ಪುಟಿನ್ ಮೋದಿಗಾಗಿ ಕಾದು ಅವರನ್ನು ತಮ್ಮ ಕಾರಿನಲ್ಲೇ ಶೃಂಗಸಭೆ ನಡೆಯುತ್ತಿದ್ದ ಸ್ಥಳಕ್ಕೆ ಒಟ್ಟಿಗೆ ಕರೆದೊಯ್ದಿದ್ದು, ಇವೆಲ್ಲವೂ ಹತ್ಯೆಯ ಸಂಚನ್ನು ವಿಫಲಗೊಳಿಸಿದ್ದ ಪ್ರತಿತಂತ್ರದ ಭಾಗವೆಂದು ವಿಶ್ಲೇಷಿಸಲಾಗುತ್ತಿದೆ.
ಇದಷ್ಟೇ ಅಲ್ಲದೇ ಪ್ರಧಾನಿ ಮೋದಿ ಅವರು ದೃಢಪಡಿಸಿದ ಮತ್ತೊಂದು ಹೇಳಿಕೆಯು ಮೇಲಿನ ಊಹಾಪೋಹಗಳಿಗೆ ಮತ್ತಷ್ಟು ಬಲವನ್ನು ನೀಡುತ್ತದೆ. ಸೆಪ್ಟೆಂಬರ್ 2 ರಂದು, ಚೀನಾದ ಟಿಯಾಂಜಿನ್ನಿಂದ ಹಿಂದಿರುಗಿದ ಮರುದಿನ, ಪ್ರಧಾನಿ ಮೋದಿ ನವದೆಹಲಿಯಲ್ಲಿ ನಡೆದ ಸೆಮಿಕಾನ್ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಕಾರ್ಯಕ್ರಮದ ಸಮಯದಲ್ಲಿ, ಅವರ ಭಾಷಣದಲ್ಲಿ ಒಗಟಾಗಿ ಮಾತನಾಡಿದ್ದರು. ಅನೇಕ ಮಾಧ್ಯಮ ವೃತ್ತಿಪರರು ಮತ್ತು ಡೊಮೇನ್ ತಜ್ಞರು ಪ್ರಧಾನಿಯವರ ಹೇಳಿಕೆಯ ನಿಜವಾದ ಅರ್ಥವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರು. "ನಾನು ಚೀನಾಕ್ಕೆ ಹೋಗಿದ್ದರಿಂದ ನೀವು ಚಪ್ಪಾಳೆ ತಟ್ಟುತ್ತಿದ್ದೀರಾ ಅಥವಾ ನಾನು ಹಿಂತಿರುಗಿದ್ದರಿಂದ ನೀವು ಚಪ್ಪಾಳೆ ತಟ್ಟುತ್ತಿದ್ದೀರಾ?" ಎಂದು ಪ್ರಧಾನಿ ಮೋದಿ ಗೂಢಾರ್ಥದಲ್ಲಿ ಕೇಳಿದರು. ವಿಶ್ಲೇಷಕರ ಪ್ರಕಾರ, ಪ್ರಧಾನಿ ಮೋದಿಯವರ ಈ ನಿಗೂಢ ಹೇಳಿಕೆಗಳು ಗಂಭೀರ ಸಂದೇಶವಾಗಿತ್ತು. ಇದು ಪ್ರಧಾನಿ ಎದುರಿಸುತ್ತಿರುವ ಜೀವ ಬೆದರಿಕೆಗಳ ಬಗ್ಗೆ ಸಂದೇಶಗಳನ್ನು ಒಳಗೊಂಡಿತ್ತು ಎಂದು ಹೇಳಲಾಗುತ್ತಿದೆ.
Advertisement