ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಉದ್ವಿಗ್ನತೆಗಳು ಜಾಗತಿಕ ಇಂಧನ ಬೆಲೆಗಳಲ್ಲಿ ಅನಿಶ್ಚಿತತೆ ಮತ್ತು ಏರಿಳಿತಗಳಿಗೆ ಕಾರಣವಾಗುತ್ತಿವೆ. ಈ ಪರಿಸ್ಥಿತಿಯಲ್ಲಿ, ರಷ್ಯಾ ಭಾರತಕ್ಕೆ ಹೆಚ್ಚಿನ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲವನ್ನು ಪೂರೈಸಲು ಮುಂದಾಗಿದೆ. ಇದೇ ಸಮಯದಲ್ಲಿ, ಎರಡೂ ದೇಶಗಳು ತಮ್ಮ ಒಟ್ಟಾರೆ ಸಂಬಂಧವನ್ನು ಬಲಪಡಿಸಲು ಒಪ್ಪಿಕೊಂಡಿವೆ.
ಗುರುವಾರ ರಷ್ಯಾದ ಮೊದಲ ಉಪ ಪ್ರಧಾನಿ ಡೆನಿಸ್ ಮಾಂಟುರೊವ್ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರೊಂದಿಗೆ ನಡೆಸಿದ ಸಭೆಗಳಲ್ಲಿ ಇಂಧನ ಸಹಕಾರವು ಪ್ರಮುಖ ವಿಚಾರವಾಗಿದೆ ಎಂದು ಮೂಲಗಳು ತಿಳಿಸಿವೆ.
ಮಂಟುರೋವ್ ಅವರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಮಾತುಕತೆ ನಡೆಸಿದರು ಮತ್ತು ನಿನ್ನೆ ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ನವದೆಹಲಿಯಲ್ಲಿ ನಡೆದ ಸಭೆ ಕುರಿತು ರಷ್ಯಾದ ಅಧಿಕೃತ ಹೇಳಿಕೆಯು, ರಷ್ಯಾ ಮತ್ತು ಭಾರತದ ನಡುವಿನ ತೈಲ ಮತ್ತು ಅನಿಲ ವಲಯದಲ್ಲಿ ದ್ವಿಪಕ್ಷೀಯ ಸಹಕಾರಕ್ಕೆ ವಿಶೇಷ ಗಮನ ನೀಡಲಾಗಿದೆ ಎಂದು ಹೇಳಿದೆ.
'ಭಾರತೀಯ ಮಾರುಕಟ್ಟೆಗೆ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲದ ಸರಬರಾಜನ್ನು ಸ್ಥಿರವಾಗಿ ಹೆಚ್ಚಿಸುವ ಸಾಮರ್ಥ್ಯವನ್ನು ರಷ್ಯಾದ ಕಂಪನಿಗಳು ಹೊಂದಿವೆ ಎಂದು ಡೆನಿಸ್ ಮಾಂಟುರೊವ್ ದೃಢಪಡಿಸಿದ್ದಾರೆ' ಎಂದು ಅದು ಹೇಳಿದೆ.
ಹಾರ್ಮುಜ್ ಜಲಸಂಧಿಯ ಮೂಲಕ ಕಚ್ಚಾ ತೈಲ ಮತ್ತು ಅನಿಲ ಸರಬರಾಜಿನಲ್ಲಿನ ಅಡಚಣೆಗಳಿಂದಾಗಿ ಪಶ್ಚಿಮ ಏಷ್ಯಾ ಬಿಕ್ಕಟ್ಟು ಜಾಗತಿಕ ಇಂಧನ ಮಾರುಕಟ್ಟೆಯ ಮೇಲೆ ವ್ಯಾಪಕ ಪರಿಣಾಮ ಬೀರುತ್ತಿರುವ ಹೊತ್ತಿನಲ್ಲಿ ರಷ್ಯಾ ಈ ಹೇಳಿಕೆ ನೀಡಿದೆ.
ಇಸ್ರೇಲ್ ಮತ್ತು ಅಮೆರಕ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿದ ನಂತರ ಪಶ್ಚಿಮ ಏಷ್ಯಾದಲ್ಲಿ ಯುದ್ಧ ಆರಂಭವಾಗಿದ್ದು, ಪರ್ಷಿಯನ್ ಕೊಲ್ಲಿ ಮತ್ತು ಓಮನ್ ಕೊಲ್ಲಿ ನಡುವಿನ ಕಿರಿದಾದ ಹಡಗು ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಇರಾನ್ ನಿರ್ಬಂಧಿಸಿದೆ. ಇದು ಜಾಗತಿಕ ತೈಲ ಮತ್ತು ಎಲ್ಎನ್ಜಿ (ದ್ರವೀಕೃತ ನೈಸರ್ಗಿಕ ಅನಿಲ) ದ ಸರಿಸುಮಾರು ಶೇ 20 ರಷ್ಟು ಅವಶ್ಯಕತೆಯನ್ನು ನಿರ್ವಹಿಸುತ್ತದೆ. ಹೀಗಾಗಿ, ಜಾಗತಿಕ ತೈಲ ಮತ್ತು ಅನಿಲ ಬೆಲೆಗಳು ಗಗನಕ್ಕೇರಿವೆ.
ಪಶ್ಚಿಮ ಏಷ್ಯಾವು ಭಾರತದ ಇಂಧನ ಸಂಗ್ರಹಣೆಯ ಪ್ರಮುಖ ಮೂಲವಾಗಿದೆ.
ಭಾರತ-ರಷ್ಯಾ ಅಂತರ-ಸರ್ಕಾರಿ ವ್ಯಾಪಾರ, ಆರ್ಥಿಕ, ವೈಜ್ಞಾನಿಕ, ತಾಂತ್ರಿಕ ಮತ್ತು ಸಾಂಸ್ಕೃತಿಕ ಸಹಕಾರ ಸಹಯೋಗದಲ್ಲಿ (IRIGC-TEC) ದ್ವಿಪಕ್ಷೀಯ ಸಂಬಂಧಗಳಿಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ವ್ಯಾಪಕವಾಗಿ ಚರ್ಚಿಸಲಾಯಿತು. ಮಾಂಟುರೋವ್ ಮತ್ತು ಜೈಶಂಕರ್ ಸಭೆಯ ಸಹ ಅಧ್ಯಕ್ಷತೆ ವಹಿಸಿದ್ದರು.
Advertisement