

ಶ್ರೀನಗರ: ಭಾರತದ ಕೋಲ್ಕತಾ ಮೇಲೆ ದಾಳಿ ಮಾಡಬೇಕು ಎಂಬ ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಮಾತಿಗೆ ಖಡಕ್ ತಿರುಗೇಟು ನೀಡಿರುವ ಜಮ್ಮು ಮತ್ತು ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ಕೋಲ್ಕತಾ ಬಿಡಿ.. ಕಾಶ್ಮೀರಕ್ಕೂ ಕಾಲಿಡಲಾಗಲ್ಲ ಎಂದು ಹೇಳಿದ್ದಾರೆ.
ಕಾಶ್ಮೀರದ ಹಾತ್ ನಲ್ಲಿ 'ನಿಮ್ಮ ಕುಶಲಕರ್ಮಿಗಳನ್ನು ತಿಳಿದುಕೊಳ್ಳಿ' ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಲು ಆಗಮಿಸಿದ್ದ ಒಮರ್ ಅಬ್ದುಲ್ಲಾ ಕಾರ್ಯಕ್ರಮ ಉದ್ಘಾಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
"ಆಪರೇಷನ್ ಸಿಂಧೂರ್ ಆಗಿ ಇನ್ನೂ ಒಂದು ವರ್ಷ ಕೂಡ ಆಗಿಲ್ಲ. ಅವರು (ಪಾಕಿಸ್ತಾನ) ಜಮ್ಮು ತಲುಪಿದ್ದು ಅಷ್ಟೇನೂ ಗಮನಾರ್ಹ ಹಾನಿಯಾಗಿಲ್ಲ. ಕೋಲ್ಕತ್ತಾ ತಲುಪುವುದು ಕೇವಲ ಕನಸು ಎಂದು ಕಿಡಿಕಾರಿದರು.
ಅಂತೆಯೇ "ಅವರ ಗಮನ ಉಭಯ ದೇಶಗಳ ಸಂಬಂಧಗಳನ್ನು ಸುಧಾರಿಸುವತ್ತ ಇರಬೇಕು, ನಮ್ಮನ್ನು ಬೆದರಿಸುವತ್ತ ಅಲ್ಲ. ನಮ್ಮ ವಿಮಾನಗಳು ಇನ್ನೂ ಹಾರುತ್ತಿವೆ. ಆದರೆ ಪಾಕಿಸ್ತಾನವನ್ನು ನೋಡಿ, ಅವರು ಅಂತರರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳಿಗೆ ತಮ್ಮದೇ ಆದ ಇಂಧನವನ್ನು ತರುವಂತೆ ಹೇಳುತ್ತಿದ್ದಾರೆ.
ಏಕೆಂದರೆ ಅವರಲ್ಲಿ ಇಂಧನ ಖಾಲಿಯಾಗಿದ್ದು, ಅವರು ಅದನ್ನು ಪೂರೈಸಲು ಸಾಧ್ಯವಿಲ್ಲ. ಬೆದರಿಕೆ ಹಾಕುವ ಬದಲು, ಪರಿಸ್ಥಿತಿಯನ್ನು ಹೆಚ್ಚು ಅನುಕೂಲಕರವಾಗಿಸುವಲ್ಲಿ ಅವರು ಪಾತ್ರ ವಹಿಸಿದರೆ ಉತ್ತಮ' ಎಂದು ಒಮರ್ ಅಬ್ದುಲ್ಲಾ ಹೇಳಿದರು.
ಏನದು ಕೋಲ್ಕತಾ ಬೆದರಿಕೆ? ಖ್ವಾಜಾ ಅಸಿಫ್ ಹೇಳಿದ್ದೇನು?
ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಏಪ್ರಿಲ್ 4, 2026 ರಂದು, ಭಾರತದ ಯಾವುದೇ "ಭವಿಷ್ಯದ ದುಸ್ಸಾಹಸಗಳು" ಅಥವಾ "ಸುಳ್ಳು ಧ್ವಜ ಕಾರ್ಯಾಚರಣೆಗಳಿಗೆ" ಪ್ರತಿಕ್ರಿಯೆಯಾಗಿ ಪಾಕಿಸ್ತಾನವು ಕೋಲ್ಕತ್ತಾವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಇ
ದಕ್ಕೆ ತಿರುಗೇಟು ನೀಡಿದ್ದ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್, '1971 ರ ಯುದ್ಧವನ್ನು ಉಲ್ಲೇಖಿಸಿ ಅಂತಹ ಯಾವುದೇ ಆಕ್ರಮಣವು ಪಾಕಿಸ್ತಾನವನ್ನು ಮತ್ತಷ್ಟು ಛಿದ್ರಗೊಳಿಸಬಹುದು ಎಂದು ಎಚ್ಚರಿಸಿದ್ದರು. ಅಲ್ಲದೆ ಈ ಬೆದರಿಕೆ ರಾಜಕೀಯ ಚರ್ಚೆಗೆ ನಾಂದಿ ಹಾಡಿದ್ದು, ಟಿಎಂಸಿ ಈ ವಿಷಯದ ಬಗ್ಗೆ ಕೇಂದ್ರ ಸರ್ಕಾರದ ಮೌನವನ್ನು ಪ್ರಶ್ನಿಸಿದೆ.
Advertisement