ನಿನ್ನೆ ಟ್ರೈಲರ್, ಇಂದು ಪಿಕ್ಚರ್..: ನಗರಾದ್ಯಂತ ಧಾರಾಕಾರ ಮಳೆ, ತಾಪಮಾನ ಗಣನೀಯ ಇಳಿಕೆ, ವಿಧಾನಸೌಧಕ್ಕೂ ನುಗ್ಗಿದ ನೀರು

ಬೆಂಗಳೂರಿನಲ್ಲಿ ಸಂಜೆ ಬಿರುಗಾಳಿ ಸಮೇತ ಧಾರಾಕಾರ ಮಳೆ ಸುರಿದಿದ್ದು, ಹಲವೆಡೆ ಅಲಿಕಲ್ಲು ಸಹಿತ ಮಳೆಯಾಗಿದೆ.
Bengaluru has finally received heavy rains
ಬೆಂಗಳೂರಿನಲ್ಲಿ ಧಾರಾಕಾರ ಮಳೆ
Updated on

ಬೆಂಗಳೂರು: ಕೆಲ ದಿನಗಳಿಂದ ಬಿರು ಬಿಸಿಲಿನಿಂದ ಕಂಗಾಲಾಗಿದ್ದ ಬೆಂಗಳೂರಿನ ಜನತೆಗೆ ವರುಣದೇವ ಏಕಾಏಕಿ ಶಾಕ್ ನೀಡಿದ್ದು, ನಗರಾದ್ಯಂತ ಧಾರಾಕಾರ ಮಳೆಯಾಗಿ ಸಂಚಾರ ತೀವ್ರ ಅಸ್ಥವ್ಯಸ್ಥವಾಗಿದೆ.

ಬೆಂಗಳೂರಿನಲ್ಲಿ ಸಂಜೆ ಬಿರುಗಾಳಿ ಸಮೇತ ಧಾರಾಕಾರ ಮಳೆ ಸುರಿದಿದ್ದು, ಹಲವೆಡೆ ಅಲಿಕಲ್ಲು ಸಹಿತ ಮಳೆಯಾಗಿದೆ. ನಗರದ ಮೆಜೆಸ್ಟಿಕ್, ಶಾಂತಿನಗರ, ಕೋರಮಂಗಲ, ವಿಧಾನಸೌಧ, ಶಿವಾಜಿನಗರ, ಚಾಮರಾಜಪೇಟೆ ಸೇರಿದಂತೆ ನಗರದ ಬಹುತೇಕ ಎಲ್ಲ ಪ್ರದೇಶಗಳಲ್ಲಿ ಭಾರೀ ಮಳೆ ಸುರಿದಿದೆ.

ಅಲ್ಲದೇ ಯಲಹಂಕ, ವಿದ್ಯಾರಣ್ಯಪುರ, ಜಾಲಹಳ್ಳಿ ಸೇರಿದಂತೆ ಬಹುತೇಕ ಕಡೆ ಮೋಡ ಕವಿದ ವಾತಾವರಣವಿದ್ದು ಗುಡುಗು ಸಹಿತ ಮಳೆ ನಿರೀಕ್ಷಿಸಲಾಗಿದೆ. ಏಕಾಏಕಿ ಸುರಿದ ಮಳೆಯಿಂದಾಗಿ ನಗರದ ಕೆಲೆವೆಡೆ ವಾಹನ ಸಂಚಾರದಲ್ಲಿ ವ್ಯತ್ಯಯ ಆಯಿತು. ಹೀಗಾಗಿ ಸಂಜೆ ವೇಳೆ ಮನೆ ಕಡೆ ತೆರಳುತ್ತಿದ್ದವರು ಟ್ರಾಫಿಕ್ ನಲ್ಲಿ ಸಿಲುಕಿ ಸಂಕಷ್ಟ ಎದುರಿಸಿದರು.

Bengaluru has finally received heavy rains
ಬೆಂಗಳೂರಿಗೆ ಕೊನೆಗೂ ತಂಪರೆದ ಮಳೆರಾಯ, ಮೇ 2ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ

ಎಲ್ಲೆಲ್ಲಿ ಮಳೆ?

ಶಾಂತಿನಗರ, ಲಾಲ್ಬಾಗ್‌, ವಿಲ್ಸನ್ ಗಾರ್ಡನ್, ಕಾರ್ಪೋರೇಶನ್, ಜಯನಗರ, ಚಿನ್ನಸ್ವಾಮಿ, ಮಹಾತ್ಮ ಗಾಂಧಿ ರಸ್ತೆ, ಹಲಸೂರು, ವಿಧಾನಸೌಧ, ಶಿವಾಜಿನಗರ, ರೇಸ್ ಕೋರ್ಸ್ ರಸ್ತೆ, ಮೆಜೆಸ್ಟಿಕ್, ಶಿವಾನಂದ ಸರ್ಕಲ್, ಮಲ್ಲೇಶ್ವರಂ, ಜಯನಗರ, ಜೆಪಿ ನಗರ, ಬಸವನಗುಡಿ ಮೊದಲಾದೆಡೆ ಗಾಳಿಯಿಂದ ಕೂಡಿದ ಆಲಿಕಲ್ಲು ಮಳೆ ಸುರಿದಿದೆ. ಟ್ರಿನಿಟಿ ಸರ್ಕಲ್ ಬಳಿ ಆಲಿಕಲ್ಲು ಮಳೆಯಾಗಿದೆ.

ಸಂಚಾರ ಅಸ್ತವ್ಯಸ್ತ, ವಿಧಾನಸೌಧಕ್ಕೂ ನುಗ್ಗಿದ ನೀರು

ಅನಿರೀಕ್ಷಿತ ಮಳೆಯಿಂದಾಗಿ ಅಲ್ಲಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಮಳೆಯಿಂದಾಗಿ ಸಂಚಾರ ಅಸ್ತವ್ಯಸ್ಥವಾಗಿತ್ತು.

ಇತ್ತ ವಿಧಾನಸೌಧಕ್ಕೂ ಮಳೆ ನೀರು ನುಗ್ಗಿದ್ದು, ವಿಧಾನ ಸೌಧದಲ್ಲಿ ವಿಪಕ್ಷ ನಾಯಕ ಆರ್‌. ಅಶೋಕ್‌ ಅವರ ಕೊಠಡಿಗೆ ನೀರು ನುಗ್ಗಿದೆ. ದ್ವಾರದ ಮೂಲಕವೇ ನೀರು ನುಗ್ಗಿದ್ದು, ಕಚೇರಿಯಲ್ಲಿ ಹಲವು ವಸ್ತುಗಳು ಹಾನಿಯಾಗಿವೆ ಎಂದು ಹೇಳಲಾಗಿದೆ

ಮೊದಲೇ ಸೂಚನೆ ನೀಡಿದ್ದ ಹವಾಮಾನ ಇಲಾಖೆ

ಹವಾಮಾನ ಇಲಾಖೆಯು ಏಪ್ರಿಲ್ 29 ಮತ್ತು 30 ರಂದು ಬೆಂಗಳೂರು ಸೇರಿದಂತೆ ಕರ್ನಾಟಕ (Karnataka) ರಾಜ್ಯದ ವಿವಿಧೆಡೆ ಮಳೆಯಾಗುವುದಾಗಿ ಸೂಚನೆ ನೀಡಿತ್ತು. ಜೊತೆ ಆರೆಂಟ್ ಅಲರ್ಟ್ ಸಹ ಮಾಡಿತ್ತು. ಅಂತೆಯೇ ಇದೀಗ ಬೆಂಗಳೂರು ಸುತ್ತಮುತ್ತ ಮಳೆಯಾಗಿರುವುದರಿಂದ ವಾತಾವರಣ ತಂಪಾಗಿದೆ.

ತಾಪಮಾನ ಗಣನೀಯ ಇಳಿಕೆ, 16 ದಿನಗಳಲ್ಲಿ ಕನಿಷ್ಛ ತಾಪಮಾನ

ಈ ತಿಂಗಳ ಆರಂಭದಲ್ಲಿ ಉಷ್ಣಾಂಶವು 36.8°C ವರೆಗೆ ಏರಿಕೆ ಕಂಡು ತೀವ್ರ ಬಿಸಿಲಿನ ತಾಪವಿತ್ತು, ಆದರೆ ಈಗ ಮಾನ್ಸೂನ್ ಪೂರ್ವ ಮಳೆ ಚುರುಕುಗೊಂಡಿರುವುದರಿಂದ ನಗರದಲ್ಲಿ ಹವಾಮಾನ ಬದಲಾಗಿದೆ.

2026ರ ಏಪ್ರಿಲ್ 29, ಬುಧವಾರದಂದು, ನಗರದ ಹಲವು ಭಾಗಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾಗುತ್ತಿದ್ದು, ಇಂದು ತಡರಾತ್ರಿಯವರೆಗೆ ಯೆಲ್ಲೋ ಅಲರ್ಟ್ (Yellow Alert) ಮತ್ತು ಮಿಂಚಿನ ಮುನ್ನೆಚ್ಚರಿಕೆ ನೀಡಲಾಗಿದೆ.

ಇಂದು ಸಂಜೆ 5:18ರ ವೇಳೆಗೆ ಉಷ್ಣಾಂಶವು 31°C - 33°C ಕ್ಕೆ ಇಳಿಕೆಯಾಗಿದೆ. ಮೋಡ ಕವಿದ ವಾತಾವರಣ ಮತ್ತು ಮಳೆಯಿಂದಾಗಿ ಕಳೆದ 16 ದಿನಗಳಲ್ಲೇ ಅತ್ಯಂತ ಕಡಿಮೆ ಗರಿಷ್ಠ ತಾಪಮಾನ ಇಂದು ದಾಖಲಾಗಿದೆ.

Bengaluru has finally received heavy rains
ಬೆಂಗಳೂರಲ್ಲಿ ರಣ ಬಿಸಿಲು: KIAಯಲ್ಲಿ 38 ಡಿಗ್ರಿ ತಲುಪಿದ ತಾಪಮಾನ; 2 ದಿನಗಳಲ್ಲಿ ಮಳೆ ಸಾಧ್ಯತೆ

ಮಳೆ ಮುನ್ಸೂಚನೆ

ಹವಾಮಾನ ಇಲಾಖೆ ಮಾಹಿತಿಯ ಪ್ರಕಾರ ಏಪ್ರಿಲ್ 30 ವರೆಗೂ ಮಳೆ ಮುಂದುವರೆಯಲಿದೆ. ಗುರುವಾರ ನಗರದಲ್ಲಿ ಶೇ.80ರಷ್ಟು ಭಾರಿ ಮಳೆ ಸಾಧ್ಯತೆ ಇದೆ. ಬಳಿಕ ಮೇ 01 ರಂದು ಬಿಸಿಲು ಮತ್ತು ಸಾಧಾರಣ ಮಳೆಯಾಗುವ ಸಾಧ್ಯತೆ (35% ಸಂಭವನೀಯತೆ) ಇದೆ ಎಂದು ಹೇಳಿದೆ.

ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಗುಡುಗು ಸಹಿತ ಮಳೆ ಮತ್ತು ಬಲವಾದ ಗಾಳಿ ಮುಂದುವರಿಯಲಿದೆ. ಗುಡುಗು ಮಿಂಚಿನ ಸಂದರ್ಭದಲ್ಲಿ ಮರದ ಕೆಳಗೆ ನಿಲ್ಲಬೇಡಿ ಮತ್ತು ಸುರಕ್ಷಿತವಾಗಿ ಮನೆಯಲ್ಲಿಯೇ ಇರಲು ಸೂಚಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com