

ಚೆನ್ನೈ: ನಟಿ ತ್ರಿಷಾ ಕುರಿತು ಮಾಡಲಾಗಿದೆ ಎನ್ನಲಾದ ವಿವಾದಾತ್ಮಕ ಹೇಳಿಕೆಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ತಮಿಳುನಾಡಿನ ಡಿಎಂಕೆ ನಾಯಕ ಹಾಗೂ ಪ್ರತಿಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಬಂಧನದ ಬೆನ್ನಲ್ಲೇ ನಟಿ ನಿವೇತಾ ಪೇತುರಾಜ್ ಅವರ ಇತ್ತೀಚಿನ ಎಕ್ಸ್ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಇತ್ತೀಚೆಗೆ ತಂಜಾವೂರಿನಲ್ಲಿ ನಡೆದ ರಾಜಕೀಯ ಸಮಾವೇಶದಲ್ಲಿ ದ್ವಂದ್ವಾರ್ಥದ ಹೇಳಿಕೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ದಾಖಲಾಗಿದ್ದ ದೂರಿನ ಮೇರೆಗೆ ಆಗಸ್ಟ್ 4ರಂದು ಉದಯನಿಧಿ ಸ್ಟಾಲಿನ್ ಅವರನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಅವರನ್ನು ವಿಚಾರಣೆ ನಡೆಸಿದ ನಂತರ, ಮದ್ರಾಸ್ ಹೈಕೋರ್ಟ್ ನಿರ್ದೇಶನದಂತೆ ಠಾಣೆ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.
ಈ ವಿವಾದದ ನಡುವೆಯೇ ನಟಿ ನಿವೇತಾ ಪೇತುರಾಜ್ ಅವರು ಎಕ್ಸ್ನಲ್ಲಿ ತಿರುಕ್ಕುರಳಿನ ಒಂದು ಕುರಳನ್ನು ಉಲ್ಲೇಖಿಸಿ ನಿಗೂಢ ಪೋಸ್ಟ್ ಹಂಚಿಕೊಂಡಿದ್ದಾರೆ. ಅವರು ಉಲ್ಲೇಖಿಸಿರುವ ತಿರುಕ್ಕುರಳ್ 183ರಲ್ಲಿ 'ಕಠೋರ ಅಥವಾ ನೋವುಂಟುಮಾಡುವ ಮಾತುಗಳ ಪರಿಣಾಮ'ಗಳ ಬಗ್ಗೆ ಉಲ್ಲೇಖಿಸಲಾಗಿದೆ.
ನಿವೇತಾ ಹೇಳಿದ್ದೇನು?
"ಸಾವಿನಷ್ಟು ನೋವುಂಟು ಮಾಡುವ ಕಠೋರ ಮಾತುಗಳನ್ನು ಆಡಬಾರದು. ಹೇಳುವುದು ಸತ್ಯವೇ ಆಗಿದ್ದರೂ, ಅಂತಹ ಮಾತುಗಳಿಂದ ಯಾವ ಪ್ರಯೋಜನವೂ ಇಲ್ಲ." — ತಿರುಕ್ಕುರಳ್ 183 ಎಂದು ನಿವೇತಾ ಪೋಸ್ಟ್ ಮಾಡಿದ್ದಾರೆ.
ಈ ಪೋಸ್ಟ್ ಕ್ಷಣಾರ್ಧದಲ್ಲೇ ವೈರಲ್ ಆಗಿದ್ದು, ಹಲವಾರು ಸಾಮಾಜಿಕ ಜಾಲತಾಣ ಬಳಕೆದಾರರು ಅದನ್ನು ಉದಯನಿಧಿ ಸ್ಟಾಲಿನ್ ಸುತ್ತಲಿನ ವಿವಾದಕ್ಕೆ ಸಂಬಂಧಿಸಿ ವ್ಯಾಖ್ಯಾನಿಸಿದ್ದಾರೆ. ಆದರೆ, ತಮ್ಮ ಪೋಸ್ಟ್ನಲ್ಲಿ ನಿವೇತಾ ಪೇತುರಾಜ್ ಅವರು ಉದಯನಿಧಿ ಸ್ಟಾಲಿನ್, ತ್ರಿಷಾ ಅಥವಾ ಅವರ ಬಂಧನದ ಬಗ್ಗೆ ನೇರವಾಗಿ ಯಾವುದೇ ಉಲ್ಲೇಖ ಮಾಡಿಲ್ಲ. ಇದು ಸಾಮಾಜಿಕ ಜಾಲತಾಣ ಬಳಕೆದಾರರ ವ್ಯಾಖ್ಯಾನ ಮಾತ್ರ, ನಟಿಯ ನೇರ ಹೇಳಿಕೆ ಅಲ್ಲ ಎಂದು ವರದಿಗಳು ತಿಳಿಸಿವೆ.
ವ್ಯಾಪಕ ವೈರಲ್, ಭಾರಿ ಚರ್ಚೆ
ಇನ್ನು ನಿವೇತಾ ಪೇತುರಾಜ್ ಹಲವರು ಹಲವು ಬಗೆಯ ಪ್ರತಿಕ್ರಿಯೆಗಳನ್ನು ಹಂಚಿಕೊಳ್ಳುತ್ತಿದ್ದು, ಅಭಿಜಿತ್ ಬಾಲಾಜಿ (@balaji_abhijit) ಎಂಬ ಬಳಕೆದಾರ, ಈ ಕುರಳಿನ ಅರ್ಥ ಅದಲ್ಲ.. ನಿಜವಾದ ತರ್ಜುಮೆ ಇಲ್ಲಿದೆ ಎಂದು ಹೇಳಿ "ಸುಳ್ಳು ಹೇಳುತ್ತಾ, ಪರರ ಬಗ್ಗೆ ಬೆನ್ನ ಹಿಂದೆ ಮಾತನಾಡುತ್ತಾ ಬದುಕುವುದಕ್ಕಿಂತ ಸಾಯುವುದೇ ಉತ್ತಮ. ಸತ್ಯನಿಷ್ಠೆಯಿಂದ ಬದುಕುವುದು ಮಾತ್ರ ನಿಜವಾದ ಒಳಿತನ್ನು ತರುತ್ತದೆ." ಎಂದು ಟ್ವೀಟ್ ಮಾಡಿದ್ದಾರೆ.
ಅಂದಹಾಗೆ ಕಾವೇರಿ ನೀರಿನ ವಿವಾದಕ್ಕೆ ಸಂಬಂಧಿಸಿದ ರಾಜಕೀಯ ಸಭೆಯಲ್ಲಿ ಉದಯನಿಧಿ ಮಾಡಿದ್ದ ಹೇಳಿಕೆಗಳು ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗಿ, ಅವರ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ರಾಜಕೀಯ ಪ್ರೇರಿತವಾಗಿದ್ದು, ತಮ್ಮ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಉದಯನಿಧಿ ಪ್ರತಿಪಾದಿಸಿದ್ದಾರೆ.
ಊಹಾಪೋಹ ತಳ್ಳಿ ಹಾಕಿದ್ದ ನಟಿ ನಿವೇತಾ
ಈ ಹಿಂದೆ ಕೂಡ ನಿವೇತಾ ಪೇತುರಾಜ್ ಮತ್ತು ಉದಯನಿಧಿ ಸ್ಟಾಲಿನ್ ನಡುವಿನ ಸಂಬಂಧದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಲವು ಊಹಾಪೋಹಗಳು ಹರಿದಾಡಿದ್ದವು.
2024ರಲ್ಲಿ ತಮ್ಮ ಬಗ್ಗೆ ಹರಿದಾಡಿದ್ದ ಐಷಾರಾಮಿ ವೆಚ್ಚದ ಆರೋಪಗಳನ್ನು ಅವರು ಸಾರ್ವಜನಿಕವಾಗಿ ತಳ್ಳಿಹಾಕಿ, ವ್ಯಕ್ತಿಯ ಘನತೆಗೆ ಧಕ್ಕೆ ತರುವ ಮಾಹಿತಿಯನ್ನು ಪರಿಶೀಲಿಸದೆ ಪ್ರಸಾರ ಮಾಡಬಾರದು ಎಂದು ಪತ್ರಕರ್ತರು ಮತ್ತು ಸಾಮಾಜಿಕ ಜಾಲತಾಣ ಬಳಕೆದಾರರಿಗೆ ಮನವಿ ಮಾಡಿದ್ದರು.
ಈಗ ತಿರುಕ್ಕುರಳ್ ಉಲ್ಲೇಖದೊಂದಿಗೆ ಬಂದಿರುವ ಅವರ ಹೊಸ ಪೋಸ್ಟ್ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದ್ದು, ಆದರೆ, ಈ ಪೋಸ್ಟ್ ಉದಯನಿಧಿ ಸ್ಟಾಲಿನ್ ಅಥವಾ ಅವರ ಬಂಧನವನ್ನು ಉದ್ದೇಶಿಸಿ ಮಾಡಲಾಗಿದೆ ಎಂಬುದಕ್ಕೆ ನಿವೇತಾ ಪೇತುರಾಜ್ ಅವರಿಂದ ಯಾವುದೇ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ.