

ನವದೆಹಲಿ: ನಾಸಿಕ್ ನಲ್ಲಿ ನಡೆದಿದ್ದ ಕಾರ್ಪೋರೇಟ್ ಮತಾಂತರ ಪ್ರಕರಣದ ಪ್ರಮುಖ ಆರೋಪಿ ಮಾಜಿ ಟಿಸಿಎಸ್ ಉದ್ಯೋಗಿ ನಿದಾಖಾನ್ ಗೆ ಆಶ್ರಯ ನೀಡಿದ್ದ ಆರೋಪದ ಮೇರೆಗೆ AIMIM ಕಾರ್ಪೋರೇಟರ್ ರನ್ನು ಬಂಧಿಸಲಾಗಿದೆ.
ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷದ ಕಾರ್ಪೊರೇಟರ್ ಮತೀನ್ ಪಟೇಲ್ ಅವರು ಟಿಸಿಎಸ್ ಧರ್ಮಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಪದೇಪದೆ ಸಮನ್ಸ್ ಜಾರಿಯಾದರೂ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ.
ಧರ್ಮಾಂತರ ಪ್ರಕರಣದಲ್ಲಿ ಹೆಸರು ಕೇಳಿಬಂದಿದ್ದ ಮಾಜಿ ಟಿಸಿಎಸ್ ಉದ್ಯೋಗಿ ನಿದಾ ಖಾನ್ಗೆ ಆಶ್ರಯ ನೀಡಿದ ಆರೋಪ ಮತೀನ್ ಪಟೇಲ್ ವಿರುದ್ಧ ಕೇಳಿಬಂದಿತ್ತು. ಈ ಸಂಬಂಧ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ನ್ಯಾಯಾಲಯಕ್ಕೆ ಹಾಜರಾಗಲು ವಿಫಲವಾದ ಹಿನ್ನೆಲೆಯಲ್ಲಿ ಪೊಲೀಸರು ಪಟೇಲ್ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸಿದ್ದರು.
ಬಳಿಕ ಗುರುವಾರ ರಾತ್ರಿ ಸುಮಾರು 7 ಗಂಟೆಗೆ ಪೊಲೀಸರು ಅವರನ್ನು ಬಂಧಿಸಿ ವಿಚಾರಣೆಗಾಗಿ ನಾಸಿಕ್ಗೆ ಕರೆದೊಯ್ದಿದ್ದಾರೆ. ಇದರ ಬೆನ್ನಲ್ಲೇ ಪಟೇಲ್ ಅವರ ನಿವಾಸ ಮತ್ತು ಕಚೇರಿ ವಿರುದ್ಧವೂ ಅಧಿಕಾರಿಗಳು ಬುಲ್ಡೋಜರ್ ಕಾರ್ಯಾಚರಣೆ ಆರಂಭಿಸಿದ್ದಾರೆ.
ಏನಿದು ಟಿಸಿಎಸ್ ಪ್ರಕರಣ?
ಮಹಾರಾಷ್ಟ್ರದ ನಾಸಿಕ್ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಘಟಕದಲ್ಲಿನ ಧರ್ಮಾಂತರ ಪ್ರಕರಣದಲ್ಲಿ ಹೆಸರು ಕೇಳಿಬಂದ ಬಳಿಕ ಕೆಲಸದಿಂದ ವಜಾಗೊಂಡಿದ್ದ ಮಾಜಿ ಉದ್ಯೋಗಿ ನಿದಾ ಖಾನ್ ಅವರನ್ನು ಸುಮಾರು 25 ದಿನಗಳ ಕಾಲ ತಲೆಮರೆಸಿಕೊಂಡಿದ್ದ ನಂತರ ಮೇ 7ರಂದು ಛತ್ರಪತಿ ಸಂಭಾಜಿನಗರದ ಬಾಡಿಗೆ ಫ್ಲ್ಯಾಟ್ನಲ್ಲಿ ಬಂಧಿಸಲಾಗಿತ್ತು.
2022ರಲ್ಲಿ ಈಗಾಗಲೇ ಮತ್ತೊಬ್ಬ ಮಹಿಳೆಯನ್ನು ವಿವಾಹವಾಗಿದ್ದ ಸಹೋದ್ಯೋಗಿ ದಾನಿಶ್ ಶೇಖ್ ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ತನ್ನೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದಾನೆ ಎಂದು ಮಹಿಳೆಯೊಬ್ಬರು ಆರೋಪಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿತ್ತು.
ಪೊಲೀಸ್ ವರದಿ ಪ್ರಕಾರ, ದಾನಿಶ್ ಶೇಖ್ ಅವರ ಸಹೋದರಿ ನಿದಾ ಖಾನ್ ದೂರುದಾರೆಯ ಧಾರ್ಮಿಕ ನಂಬಿಕೆಗಳ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಲ್ಲದೆ, ಧರ್ಮ ಬದಲಾಯಿಸುವಂತೆ ಒತ್ತಡ ಹೇರಲು ಪ್ರಯತ್ನಿಸಿದ್ದರು ಎನ್ನಲಾಗಿದೆ.
ಟಿಸಿಎಸ್ ಘಟಕದಲ್ಲಿ ಮಹಿಳಾ ಉದ್ಯೋಗಿಗಳ ಶೋಷಣೆ, ಬಲವಂತದ ಧರ್ಮಾಂತರಕ್ಕೆ ಯತ್ನ, ಧಾರ್ಮಿಕ ಭಾವನೆಗಳಿಗೆ ಧಕ್ಕೆ, ಕಿರುಕುಳ ಮತ್ತು ಮಾನಸಿಕ ಹಿಂಸೆ ಆರೋಪಗಳಿಗೆ ಸಂಬಂಧಿಸಿದ ಒಟ್ಟು ಒಂಬತ್ತು ಪ್ರಕರಣಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದರು.
ಬುರ್ಖಾ, ಧರ್ಮಗ್ರಂಥ ನೀಡಿದ್ದ ನಿದಾಖಾನ್
ತನಿಖಾಧಿಕಾರಿಗಳ ಪ್ರಕಾರ, ನಿದಾ ಖಾನ್ ಸಂತ್ರಸ್ತೆಯೊಬ್ಬರಿಗೆ ಬುರ್ಖಾ ಮತ್ತು ಧಾರ್ಮಿಕ ಸಾಹಿತ್ಯ ನೀಡಿ ಆಕೆಯ ಮನಸ್ಸನ್ನು ಬದಲಾಯಿಸಲು ಪ್ರಯತ್ನಿಸಿದ್ದರು ಎನ್ನಲಾಗಿದೆ. ಸಂತ್ರಸ್ತೆಯ ಮೊಬೈಲ್ನಲ್ಲಿ ಇಸ್ಲಾಂಗೆ ಸಂಬಂಧಿಸಿದ ಆ್ಯಪ್ಗಳನ್ನು ಅಳವಡಿಸುವುದು, ನಮಾಜ್ ಮಾಡುವ ವಿಧಾನ ಕಲಿಸಲು ಆಕೆಯ ಮನೆಗೆ ತೆರಳುವುದು ಹಾಗೂ ಹಿಜಾಬ್ ಧರಿಸುವುದನ್ನು ತೋರಿಸಿಕೊಟ್ಟ ಆರೋಪವೂ ಅವರ ಮೇಲಿತ್ತು.
ಕಳೆದ ತಿಂಗಳು ನಿದಾ ಖಾನ್ ಅವರು ತಾವು ಗರ್ಭಿಣಿಯಾಗಿರುವುದನ್ನು ಪ್ರಮುಖ ಕಾರಣವಾಗಿ ಮುಂದಿಟ್ಟುಕೊಂಡು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ನಾಸಿಕ್ನ ಸ್ಥಳೀಯ ನ್ಯಾಯಾಲಯ ಅವರಿಗೆ ಜಾಮೀನು ಮಂಜೂರು ಮಾಡಿತ್ತು. ಮೂರು ದಿನಗಳ ಬಳಿಕ ನ್ಯಾಯಾಲಯ ಜಾಮೀನು ನೀಡುವ ವೇಳೆ, ಜೈಲಿನಲ್ಲಿ ಮಗುವಿಗೆ ಜನ್ಮ ನೀಡುವ ಸಂದರ್ಭ ಯಾವುದೇ ಮಹಿಳೆಗೆ ಸಹಿಸಲಾಗದಷ್ಟು ನೋವಿನಿಂದ ಕೂಡಿರುತ್ತದೆ ಎಂದು ಅಭಿಪ್ರಾಯಪಟ್ಟಿತ್ತು. ಈ ಸಂದರ್ಭದಲ್ಲಿ ಶ್ರೀಕೃಷ್ಣನ ಜನನದ ಸಂದರ್ಭಕ್ಕೂ ನ್ಯಾಯಾಲಯ ಹೋಲಿಕೆ ಮಾಡಿತ್ತು.
ಪ್ರಕರಣದಲ್ಲಿ ಭಾಗಿಯಾಗಿರುವ ಉದ್ಯೋಗಿಗಳನ್ನು ಟಿಸಿಎಸ್ ಅಮಾನತುಗೊಳಿಸಿತ್ತು. ಯಾವುದೇ ರೀತಿಯ ಕಿರುಕುಳ ಅಥವಾ ಬಲವಂತದ ವಿರುದ್ಧ ಸಂಸ್ಥೆ ದೀರ್ಘಕಾಲದಿಂದ ಶೂನ್ಯ ಸಹಿಷ್ಣುತೆ ನೀತಿಯನ್ನು ಅನುಸರಿಸುತ್ತಿದೆ ಎಂದು ಟಿಸಿಎಸ್ ತಿಳಿಸಿತ್ತು.