ನವದೆಹಲಿ: ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಂಗಳವಾರ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ ವಿರುದ್ಧ ವಾಗ್ದಾಳಿ ನಡೆಸಿದ್ದು, ಅವರು ಆಮ್ ಆದ್ಮಿ ಪಕ್ಷದ (ಎಎಪಿ) ಕಾರ್ಯಕರ್ತನಾಗಿದ್ದು, ಜಂತರ್ ಮಂತರ್ನಲ್ಲಿ ಯುವಕರ ನೇತೃತ್ವದ ಪ್ರತಿಭಟನೆಯ ನಡುವೆ ತಮ್ಮನ್ನು ತಾವು ವಿದ್ಯಾರ್ಥಿ ನಾಯಕ ಎಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸುದ್ದಿಸಂಸ್ಥೆ ANI ಜೊತೆ ಮಾತನಾಡಿದ ಅವರು, ಪ್ರತಿಭಟನಾನಿರತ ವಿದ್ಯಾರ್ಥಿಗಳು ಎತ್ತಿರುವ ಕಳವಳಗಳು ನಿಜವಾದವು. ಆದರೆ, ಎಎಪಿ ತನ್ನ ಸ್ವಂತ ರಾಜಕೀಯ ಹಿತಾಸಕ್ತಿಗಳಿಗಾಗಿ ಚಳುವಳಿಯನ್ನು 'ಹೈಜಾಕ್' ಮಾಡಲು ಪ್ರಯತ್ನಿಸಿದೆ ಎಂದು ಆರೋಪಿಸಿದರು.
ಇತ್ತೀಚಿನ ವಿದ್ಯಾರ್ಥಿ ನೇತೃತ್ವದ ಚಳುವಳಿಗಳ ಮೂಲಕ ಯುವ ನಾಯಕರ ಹೊರಹೊಮ್ಮುವಿಕೆಯನ್ನು ಅವರು ಸ್ವಾಗತಿಸುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ರಿಜಿಜು, ಸರ್ಕಾರ ವಿದ್ಯಾರ್ಥಿಗಳ ಕಾಳಜಿಯನ್ನು ಗಂಭೀರವಾಗಿ ಪರಿಗಣಿಸುತ್ತದೆ. ಆದರೆ, ವಿದ್ಯಾರ್ಥಿ ಕ್ರಿಯಾಶೀಲತೆಯನ್ನು ರಾಜಕೀಯ ಅವಕಾಶವಾದದೊಂದಿಗೆ ಗೊಂದಲಗೊಳಿಸಬಾರದು ಎಂದು ಒತ್ತಿ ಹೇಳಿದರು.
'ವಿದ್ಯಾರ್ಥಿಗಳ ಕಳವಳಗಳು ಮಾನ್ಯವಾಗಿವೆ. ಆದರೆ, ಆಮ್ ಆದ್ಮಿ ಪಕ್ಷ ಮತ್ತು ಇತರರು ಪರಿಸ್ಥಿತಿಯನ್ನು ಹೈಜಾಕ್ ಮಾಡಲು ಪ್ರಯತ್ನಿಸುತ್ತಿರುವುದು ಸರಿಯಲ್ಲ. ಅಭಿಜಿತ್ ದೀಪ್ಕೆ ಮಹಾರಾಷ್ಟ್ರದವರಾಗಿದ್ದರೂ, ಅವರು ಆಮ್ ಆದ್ಮಿ ಪಕ್ಷದ ಕಾರ್ಯಕರ್ತ. ಅವರು ಹೇಗೆ 'ವಿದ್ಯಾರ್ಥಿ' ಆದರು?' ಎಂದು ಅವರು ಪ್ರಶ್ನಿಸಿದರು.
'ವಿದ್ಯಾರ್ಥಿಗಳ ನಿಜವಾದ ಬೇಡಿಕೆಗಳ ಕುರಿತು ನೇರವಾಗಿ ಅವರೊಂದಿಗೆ ಮಾತುಕತೆ ನಡೆಸಲು ಸರ್ಕಾರ ಮುಕ್ತವಾಗಿದೆ. ಆದರೆ, ಚುನಾವಣಾ ಹಿನ್ನಡೆಗಳ ನಂತರ ರಾಜಕೀಯ ಪಕ್ಷಗಳು ಆ ಚಳವಳಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ. ವಿದ್ಯಾರ್ಥಿಗಳಿಗೆ ಒಂದು ನಿರ್ದಿಷ್ಟ ಉತ್ಸಾಹವಿದೆ ಮತ್ತು ಅವರೊಂದಿಗೆ ಸಂವಾದದಲ್ಲಿ ತೊಡಗಬಹುದು. ಆದರೆ, ರಾಜಕೀಯ ಪಕ್ಷಗಳು ವಿದ್ಯಾರ್ಥಿಗಳ ಹಿಂದೆ ಅಡಗಿಕೊಂಡು ತಮ್ಮದೇ ಆದ ರಾಜಕೀಯ ಅಜೆಂಡಾಗಳನ್ನು ಹೇರಲು ಪ್ರಯತ್ನಿಸಿದಾಗ - ಅದು ಸರಿಯಲ್ಲ' ಎಂದು ಅವರು ಹೇಳಿದರು.
ಕಿರಣ್ ರಿಜಿಜು, ಬಿಜೆಪಿ ಮತ್ತು ಜೆನ್ ಝೆಡ್ ನಡುವಿನ ಸಂಬಂಧದ ಬಗ್ಗೆ ಇರುವ ಗ್ರಹಿಕೆಗಳನ್ನು ಉಲ್ಲೇಖಿಸಿ, ಪಕ್ಷವು ಕಿರಿಯ ಮತದಾರರಿಂದ ದೂರವಿದೆ ಎಂಬ ಕಲ್ಪನೆಯನ್ನು ತಿರಸ್ಕರಿಸಿದರು.
ಸಾಂಪ್ರದಾಯಿಕ ಏಷ್ಯನ್ ಸಾಂಸ್ಕೃತಿಕ ರೂಢಿಗಳು ಯುವಜನರು ತಮ್ಮ ಹಿರಿಯರ ಮಾತನ್ನು ಕೇಳಲು ಪ್ರೋತ್ಸಾಹಿಸುತ್ತವೆ. ಇದರಿಂದಾಗಿ ಪೀಳಿಗೆಯ ನಡುವಿನ ಹೊಂದಾಣಿಕೆಯು ಕ್ರಮೇಣ ಪ್ರಕ್ರಿಯೆಯಾಗುತ್ತದೆ. ಯುವ ಪೀಳಿಗೆಯ ಅಂತರವನ್ನು ಕಡಿಮೆ ಮಾಡಲು ಜೆನ್ ಝೆಡ್ ಜೊತೆ ನಿರಂತರ ಮತ್ತು ಸಕ್ರಿಯ ಸಂವಾದದ ಅಗತ್ಯವಿದೆ ಎಂದು ರಿಜಿಜು ಒತ್ತಿ ಹೇಳಿದರು.
'ಬಿಜೆಪಿ ಮತ್ತು ಅವರ ನಡುವೆ ಯಾವುದೇ ಸಂಪರ್ಕದ ಕೊರತೆಯಿಲ್ಲ. ಅವರು ನಮ್ಮ ಸ್ವಂತ ಮಕ್ಕಳು. ನಮ್ಮದು ಏಷ್ಯನ್ ಸಮಾಜ. ಏಷ್ಯಾದ ಜನರು ಕೌಟುಂಬಿಕ ಸಂಬಂಧಗಳೊಂದಿಗೆ ಬಂಧಿತರಾಗಿದ್ದಾರೆ. ಇದು ಪಾಶ್ಚಿಮಾತ್ಯ ಸಮಾಜದಂತಲ್ಲ. ನಾವು ಸಂಪರ್ಕದಲ್ಲಿರುತ್ತೇವೆ. ಮಕ್ಕಳು ತಮ್ಮ ಹಿರಿಯರ ಮಾತನ್ನು ಕೇಳಬೇಕೆಂಬ ವಾತಾವರಣದಲ್ಲಿ ನಾವು ವಾಸಿಸುತ್ತೇವೆ. ಬೇಡಿಕೆಗಳನ್ನು ಮುಂದಿಡುವ ಮೂಲಕ ಯಾರಾದರೂ ಅವರನ್ನು ಪ್ರಚೋದಿಸುತ್ತಿದ್ದರೆ, ಆ ಅಂತರ ಕಡಿಮೆಯಾಗಲು ಸಮಯ ತೆಗೆದುಕೊಳ್ಳುತ್ತದೆ; ನಾವು ಅವರ ಮಾತನ್ನು ಕೇಳಬೇಕು ಮತ್ತು ಅವರಿಗೆ ವಿಷಯಗಳನ್ನು ವಿವರಿಸಬೇಕು. ನಿರಂತರ ಸಂವಾದ ನಡೆಯಬೇಕು' ಎಂದು ಅವರು ಹೇಳಿದರು.
ಸುಪ್ರೀಂ ಕೋರ್ಟ್ ವಿಚಾರಣೆಯ ಸಂದರ್ಭದಲ್ಲಿ 'ಕಾಕ್ರೋಚ್ಗಳು' ಮತ್ತು "ಸಮಾಜದ ಪರಾವಲಂಬಿಗಳು" ಎಂಬ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ಹೇಳಿಕೆಗಳ ನಂತರ ಹೊರಹೊಮ್ಮಿದ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಎಂಬ ಚಳುವಳಿಯನ್ನು ಪ್ರಾರಂಭಿಸುವ ಮೊದಲು ದೀಪ್ಕೆ ಆಮ್ ಆದ್ಮಿ ಪಕ್ಷದೊಂದಿಗೆ ಕೆಲಸ ಮಾಡಿದ್ದರು.
2021 ರಿಂದ 2024 ರವರೆಗಿನ ಮತ್ತು ಎಎಪಿಗೆ ಬೆಂಬಲ ವ್ಯಕ್ತಪಡಿಸುವ ದೀಪ್ಕೆ ಅವರ ಹಳೆಯ ಪೋಸ್ಟ್ಗಳು, ಪಕ್ಷದೊಂದಿಗಿನ ಅವರ ಸದ್ಯದ ಸಂಬಂಧದ ಬಗ್ಗೆ ಮತ್ತಷ್ಟು ಊಹಾಪೋಹಗಳಿಗೆ ಕಾರಣವಾಗಿವೆ.
ಸಿಜೆಪಿ ಸದ್ಯ ಒತ್ತಡದ ಗುಂಪಾಗಿ ಉಳಿಯಲಿದೆ ಎಂದು ತಿಳಿಸಿದ್ದು, ನಾವು ರಾಜಕೀಯ ಪಕ್ಷವನ್ನು ರಚಿಸುತ್ತಿಲ್ಲ; ನಾವು ಕೇವಲ ಒತ್ತಡದ ಗುಂಪಾಗಿ ಕಾರ್ಯನಿರ್ವಹಿಸುತ್ತೇವೆ ಎಂದು ಹೇಳಿದೆ. ಹಳ್ಳಿಗಳಲ್ಲಿನ ಸರ್ಕಾರಿ ಶಾಲೆಗಳಲ್ಲಿ ಇರುವ ಸಮಸ್ಯೆಗಳನ್ನು ಎತ್ತಿ ತೋರಿಸಲು ಇದು ಸದ್ಯ 'ಸ್ಕೂಲ್ ಥಿಕ್ ಕರೋ' ಅಭಿಯಾನವನ್ನು ನಡೆಸುತ್ತಿದೆ.
ಜೂನ್ನಿಂದ ಜುಲೈ ವರೆಗೆ ನಡೆದ ಸಿಜೆಪಿ ನೇತೃತ್ವದ ಬೃಹತ್ ಪ್ರತಿಭಟನೆಯು ಆಗಿನ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಪಡೆಯುವಲ್ಲಿ ಯಶಸ್ವಿಯಾಯಿತು. ಇದಕ್ಕೆ ಕಾಂಗ್ರೆಸ್, ಎಎಪಿ ಮತ್ತು ಸಮಾಜವಾದಿ ಪಕ್ಷ ಸೇರಿದಂತೆ ಹಲವಾರು ರಾಜಕೀಯ ಪಕ್ಷಗಳಿಂದ ಬೆಂಬಲವೂ ದೊರೆಯಿತು.