

ತಿರುಪತಿ: ಹಿಂದೂಗಳ ಪವಿತ್ರ ಧಾರ್ಮಿಕ ಯಾತ್ರಾ ತಾಣ ತಿರುಮಲದಲ್ಲಿ ಹೂಕೋಸು ಬಳಸಿದ ಆಹಾರಗಳನ್ನು ನಿಷೇಧಿಸಿ ತಿರುಮಲ ತಿರುಪತಿ ದೇವಸ್ಥಾನಂ (TTD) ಆಡಳಿತ ಮಂಡಳಿ ಹೊಸ ಆದೇಶ ಹೊರಡಿಸಿದೆ.
ಕಲಿಯುಗ ದೈವ ಎಂದೇ ಖ್ಯಾತಿಯಾಗಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದರ್ಶನಕ್ಕಾಗಿ ತಿರುಮಲ ಕ್ಷೇತ್ರಕ್ಕೆ ಆಗಮಿಸುವ ಲಕ್ಷಾಂತರ ಭಕ್ತಾದಿಗಳ ಆರೋಗ್ಯ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ಟಿಟಿಡಿ ಈ ಮಹತ್ವದ ನಿರ್ಧಾರ ಕೈಗೊಂಡಿದ್ದು, ತಿರುಮಲದಲ್ಲಿರುವ ಹೋಟೆಲ್ಗಳು, ರೆಸ್ಟೋರೆಂಟ್ಗಳು ಹಾಗೂ ಫಾಸ್ಟ್ ಫುಡ್ ಸೆಂಟರ್ಗಳಲ್ಲಿ ಹೂಕೋಸಿನಿಂದ (ಕಾಲಿಫ್ಲವರ್) ತಯಾರಿಸುವ ಗೋಬಿ ಖಾದ್ಯಗಳ ಮಾರಾಟವನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ.
ಇತ್ತೀಚೆಗೆ ಹೂಕೋಸು ಅಥವಾ ಗೋಬಿಯಲ್ಲಿ ಹುಳುಗಳು ಕಂಡುಬಂದ ಹಿನ್ನೆಲೆಯಲ್ಲಿ ಭಕ್ತರ ಆರೋಗ್ಯಕ್ಕೆ ಯಾವುದೇ ಅಪಾಯ ಎದುರಾಗಬಾರದು ಎಂಬ ಮುನ್ನೆಚ್ಚರಿಕಾ ಕ್ರಮವಾಗಿ ಟಿಟಿಡಿ ಈ ತೀರ್ಮಾನ ತೆಗೆದುಕೊಂಡಿದೆ.
ಈ ಕುರಿತು ಟಿಟಿಡಿ ಆರೋಗ್ಯ ಉಪ ಕಾರ್ಯನಿರ್ವಹಣಾಧಿಕಾರಿ (ಇಒ) ಸೋಮನ್ನಾರಾಯಣ ಅವರು ಶುಕ್ರವಾರ ತಿರುಮಲದ ಎಲ್ಲಾ ಹೋಟೆಲ್, ರೆಸ್ಟೋರೆಂಟ್ ಮತ್ತು ಫಾಸ್ಟ್ ಫುಡ್ ಕೇಂದ್ರಗಳ ಮಾಲೀಕರು ಹಾಗೂ ನಿರ್ವಾಹಕರೊಂದಿಗೆ ವಿಶೇಷ ಸಭೆ ನಡೆಸಿದರು.
ಸಭೆಯಲ್ಲಿ ಭಕ್ತರಿಗೆ ಶುದ್ಧ ಮತ್ತು ನೈರ್ಮಲ್ಯಯುತ ಆಹಾರವನ್ನು ಮಾತ್ರ ಪೂರೈಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು. ಹೂಕೋಸಿನಲ್ಲಿ ಕ್ರಿಮಿ-ಕೀಟಗಳು ಕಂಡುಬರುತ್ತಿರುವುದರಿಂದ ಪ್ರಸ್ತುತ ಪರಿಸ್ಥಿತಿಯಲ್ಲಿ ಗೋಬಿ ಖಾದ್ಯಗಳ ತಯಾರಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ಆದೇಶಿಸಲಾಗಿದೆ.
ಇದು ಶಾಶ್ವತ ನಿಷೇಧವಲ್ಲ, ಬದಲಿಗೆ ಭಕ್ತರ ಆರೋಗ್ಯ ರಕ್ಷಣೆಗಾಗಿ ಕೈಗೊಂಡಿರುವ ತಾತ್ಕಾಲಿಕ ಕ್ರಮವಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.