'ಇದು ನಮ್ಮ ಧರ್ಮ, ಇಸ್ಲಾಂಗೆ ಯಾವುದು ಅಗತ್ಯ- ಯಾವುದು ಅನಗತ್ಯ ಎಂಬುದನ್ನು ನಾವೇ ನಿರ್ಧರಿಸುತ್ತೇವೆ': ಅಸಾದುದ್ದೀನ್ ಓವೈಸಿ

ನ್ಯಾಯಮೂರ್ತಿಗಳಾದ ಜೆ.ಜೆ. ಮುನೀರ್ ಮತ್ತು ಇಂದ್ರಜಿತ್ ಶುಕ್ಲಾ ಅವರಿದ್ದ ಪೀಠವು, ಹೆಡ್‌ಸ್ಕಾರ್ಫ್ ಧರಿಸುವುದು ಇಸ್ಲಾಂ ಧರ್ಮದ ಅಗತ್ಯ ಆಚರಣೆಯಾಗಿದೆ ಎಂಬ ವಾದವನ್ನು ತಿರಸ್ಕರಿಸಿತು.
AIMIM chief Asaduddin Owaisi
ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ
Updated on

ಹೈದರಾಬಾದ್: ಶಾಲೆಯಲ್ಲಿ ಹೆಡ್‌ಸ್ಕಾರ್ಫ್ ಧರಿಸಲು ಅನುಮತಿ ಕೋರಿ ಮುಸ್ಲಿಂ ಬಾಲಕಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಅಲಹಾಬಾದ್ ಹೈಕೋರ್ಟ್‌ನ ತೀರ್ಪನ್ನು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದ್-ಉಲ್-ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಹಾಗೂ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ತೀವ್ರವಾಗಿ ಟೀಕಿಸಿದ್ದಾರೆ.

ಈ ತೀರ್ಪನ್ನು 'ಇಸ್ಲಾಂ ಮೇಲಿನ ದಾಳಿ' ಎಂದು ಬಣ್ಣಿಸಿದ ಓವೈಸಿ, ಇಸ್ಲಾಂಗೆ ಯಾವುದು ಅಗತ್ಯ ಮತ್ತು ಯಾವುದು ಅನಗತ್ಯ ಎಂಬುದನ್ನು ನಿರ್ಧರಿಸುವ ಕೆಲಸ ನ್ಯಾಯಾಧೀಶರದ್ದಲ್ಲ. ಇದು ನಮ್ಮ ಧರ್ಮ, ಯಾವುದು ಅಗತ್ಯ ಎಂಬುದನ್ನು ನಾವೇ ನಿರ್ಧರಿಸುತ್ತೇವೆ. ನಿರ್ಧರಿಸಲು ನ್ಯಾಯಾಧೀಶರು ಯಾರು? ಇದು ನಮ್ಮ ಧರ್ಮದ ಮೇಲಿನ ದಾಳಿ ಎಂದು ಹೇಳಿದರು.

ಆಗಸ್ಟ್ 21 ರಂದು ನೀಡಿದ ಮಹತ್ವದ ತೀರ್ಪಿನಲ್ಲಿ, ಶೈಕ್ಷಣಿಕ ಸಂಸ್ಥೆಯು ನಿಗದಿಪಡಿಸಿದ ಡ್ರೆಸ್ ಕೋಡ್ ಅನ್ನು ತಮ್ಮ ವೈಯಕ್ತಿಕ ಇಚ್ಛೆಯಂತೆ ಬದಲಾಯಿಸುವ ಹಕ್ಕನ್ನು ವಿದ್ಯಾರ್ಥಿಗಳು ಹೊಂದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಸ್ಪಷ್ಟಪಡಿಸಿತು. ಶಾಲೆಯು ನಿಗದಿಪಡಿಸಿದ ಸಮವಸ್ತ್ರದ ಜೊತೆಗೆ ಹಿಜಾಬ್ ಧರಿಸಲು ಅನುಮತಿ ನೀಡುವಂತೆ ಶಾಲಾ ಆಡಳಿತ ಮಂಡಳಿಗೆ ನಿರ್ದೇಶನ ಕೋರಿ ವಿದ್ಯಾರ್ಥಿನಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸಿತು.

ಪ್ರಯಾಗ್‌ರಾಜ್‌ನ ಖಾಸಗಿ ಶಾಲೆಯ ವಿದ್ಯಾರ್ಥಿನಿಯೊಬ್ಬರು ಈ ಅರ್ಜಿಯನ್ನು ಸಲ್ಲಿಸಿದ್ದರು. ಪ್ರೌಢಶಾಲಾ ಶಿಕ್ಷಣವನ್ನು ಪೂರೈಸಿರುವ ಆಕೆ, ಅದೇ ಶಿಕ್ಷಣ ಸಂಸ್ಥೆಯಲ್ಲಿ 11ನೇ ತರಗತಿಗೆ ಪ್ರವೇಶ ಪಡೆಯಲು ಬಯಸಿದ್ದಾರೆ.

ನ್ಯಾಯಮೂರ್ತಿಗಳಾದ ಜೆ.ಜೆ. ಮುನೀರ್ ಮತ್ತು ಇಂದ್ರಜಿತ್ ಶುಕ್ಲಾ ಅವರಿದ್ದ ಪೀಠವು, ಹೆಡ್‌ಸ್ಕಾರ್ಫ್ ಧರಿಸುವುದು ಇಸ್ಲಾಂ ಧರ್ಮದ ಅಗತ್ಯ ಆಚರಣೆಯಾಗಿದೆ ಎಂಬ ವಾದವನ್ನು ತಿರಸ್ಕರಿಸಿತು.

AIMIM chief Asaduddin Owaisi
'ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದಲ್ಲಿ ಕಡ್ಡಾಯ ಆಚರಣೆಯಲ್ಲ': ಅಲಹಾಬಾದ್ ಹೈಕೋರ್ಟ್

'ಈ ವಿಷಯವು ಎಲ್ಲಿಯೇ ಉದ್ಭವಿಸಿದ್ದರೂ, ಮಹಿಳೆಯರು ಹೆಡ್‌ಸ್ಕಾರ್ಫ್ ಧರಿಸುವುದು ಇಸ್ಲಾಮಿಕ್ ಧರ್ಮದ ಅತ್ಯಗತ್ಯ ಭಾಗವಲ್ಲ ಮತ್ತು ಅದನ್ನು ಧರಿಸದಿದ್ದರೆ ಧರ್ಮಕ್ಕೆ ಧಕ್ಕೆ ಬರುತ್ತದೆ ಎಂಬ ಸ್ಥಿತಿಯೂ ಇಲ್ಲ ಎಂಬ ಅಭಿಪ್ರಾಯದೊಂದಿಗೆ ಹೈಕೋರ್ಟ್‌ ಒಮ್ಮತದ ತೀರ್ಪು ನೀಡಿದೆ' ಎಂದು ನ್ಯಾಯಾಲಯವು ಹೇಳಿದೆ.

ಶಾಲೆಯ ಸಮವಸ್ತ್ರ ನಿಯಮವು ನ್ಯಾಯಯುತವಾಗಿದ್ದು, ತಾರತಮ್ಯರಹಿತವಾಗಿದ್ದರೆ ಹಾಗೂ ಸಾಂಸ್ಥಿಕ ಶಿಸ್ತು ಮತ್ತು ಸಮಾನತೆಯನ್ನು ಕಾಪಾಡುವ ಉದ್ದೇಶದಿಂದ ಜಾರಿಯಲ್ಲಿದ್ದರೆ, ಆಂತರಿಕ ಶಿಸ್ತು ಮತ್ತು ಉಡುಪಿನ ನಿಯಮವನ್ನು ಜಾರಿಗೊಳಿಸಲು ಸಂಸ್ಥೆಯು ಸಂಪೂರ್ಣ ಸ್ವಾಯತ್ತತೆಯನ್ನು ಹೊಂದಿರುತ್ತದೆ ಎಂದು ನ್ಯಾಯಾಲಯ ಇದೇ ವೇಳೆ ತಿಳಿಸಿತು.

ಶಬರಿಮಲೆಗೆ ಸಂಬಂಧಿಸಿದಂತೆ 'ಧರ್ಮದ ಅತ್ಯಗತ್ಯ ಆಚರಣೆಗಳ' ವಿಷಯವನ್ನು ಸುಪ್ರೀಂ ಕೋರ್ಟ್ ಈಗಾಗಲೇ ವಿಚಾರಣೆ ನಡೆಸುತ್ತಿದೆ. ಸುಪ್ರೀಂ ಕೋರ್ಟ್ ಈ ವಿಷಯವನ್ನು ಈಗಾಗಲೇ ಪರಿಗಣಿಸುತ್ತಿರುವಾಗ, ಅಲಹಾಬಾದ್ ನ್ಯಾಯಾಲಯದ ನ್ಯಾಯಾಧೀಶರು ಈ ವಿಷಯದ ಕುರಿತು ತೀರ್ಪು ನೀಡಬಾರದಿತ್ತು' ಎಂದು ಓವೈಸಿ ಹೇಳಿದರು.

'ಅಲಹಾಬಾದ್ ಹೈಕೋರ್ಟ್‌ನ ಆದೇಶವು ಸಂವಿಧಾನದ 19 ಮತ್ತು 25ನೇ ವಿಧಿಗಳಿಗೆ ವಿರುದ್ಧವಾಗಿದೆ'. ತನ್ನ ಆಯ್ಕೆ ಮತ್ತು ಖಾಸಗಿತನದ ಭಾಗವಾಗಿ ಹಿಜಾಬ್ ಧರಿಸಲು ಅನುಮತಿ ಕೋರಿದ ಬಾಲಕಿಯ ಬೇಡಿಕೆಯನ್ನು ಬೆಂಬಲಿಸಿದ ಓವೈಸಿ, 'ಆಕೆ ಹಿಜಾಬ್ ಅನ್ನು ತನ್ನ ತಲೆಯ ಮೇಲೆ ಧರಿಸುತ್ತಾಳೆ, ಮನಸ್ಸಿನ ಮೇಲಲ್ಲ' ಎಂದರು.

ಈ ತೀರ್ಪು ಬಾಲಕಿಯರ ಶಿಕ್ಷಣಕ್ಕೆ ಅಡ್ಡಿಯಾಗಲಿದೆ. ಉತ್ತರ ಪ್ರದೇಶದಲ್ಲಿ ಪ್ರೌಢಶಾಲೆಗಳಿಗೆ ಸೇರುವ ಮುಸ್ಲಿಂ ಬಾಲಕಿಯರ ಸಂಖ್ಯೆ ಅತ್ಯಂತ ಕಡಿಮೆಯಿದೆ. ಅವರು ಮುಸ್ಲಿಂ ಬಾಲಕಿಯರ ಶಿಕ್ಷಣವನ್ನು ತಡೆಯಲು ಬಯಸುತ್ತಿದ್ದಾರೆ. ಈ ತೀರ್ಪನ್ನು ವಿರೋಧಿಸಿದ ಓವೈಸಿ, 'ಏಕರೂಪತೆ ಸಮಾನತೆಯಲ್ಲ' ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com