

ಕಣ್ಣೂರು: ಬಸ್ ಹತ್ತುವಾಗ ಆಯತಪ್ಪಿ ಕೆಳಗೆ ಬೀಳುವ ಹಂತಕ್ಕೆ ತಲುಪಿದ್ದ ವೃದ್ಧ ಪ್ರಯಾಣಿಕನನ್ನು ಬಸ್ ಕ್ಲೀನರ್ವೊಬ್ಬರು ಸಮಯಪ್ರಜ್ಞೆ ಮೆರೆದು ರಕ್ಷಿಸಿದ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ.
ಕೇರಳದ ಕುಟ್ಟಿಯಟ್ಟೂರು–ಕಣ್ಣೂರು ಮಾರ್ಗದಲ್ಲಿ ಸಂಚರಿಸುವ ಪಾರ್ವತಿ ಬಸ್ನಲ್ಲಿ ಈ ಘಟನೆ ನಡೆದಿದ್ದು, ಬಸ್ ನಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಕ್ಲೀನರ್ ಸಾಹಸ ಸೆರೆಯಾಗಿದೆ.
ಅಂತೆಯೇ ಕ್ಲೀನರ್ ಅವರ ಈ ತ್ವರಿತ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ವೃದ್ಧನ ರಕ್ಷಿಸಿದ ಸಿಬ್ಬಂದಿಯನ್ನು ಕುಟ್ಟಿಯಟ್ಟೂರು–ಕಣ್ಣೂರು ಮಾರ್ಗದಲ್ಲಿ ಸಂಚರಿಸುವ ಪಾರ್ವತಿ ಬಸ್ನ ಕ್ಲೀನರ್ ಅತುಲ್ ಕುಕು ಎಂದು ಗುರುತಿಸಲಾಗಿದೆ.
ಆಗಿದ್ದೇನು?
ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುತ್ತಿದ್ದ ವೃದ್ಧ ಬಸ್ ಬರುತ್ತಲೇ ಅದು ನಿಂತಾಗ ಬಸ್ ಹತ್ತಿದ್ದಾರೆ. ಒಬ್ಬರೇ ಪ್ರಯಾಣಿಕರು ಇದ್ದಿದ್ದರಿಂದ ಬಸ್ ಚಾಲಕ ಪ್ರಯಾಣಿಕ ಬಸ್ ಒಳಗೆ ಹತ್ತುತ್ತಲೇ ಬಸ್ ಅನ್ನು ಚಲಾಯಿಸಿಕೊಂಡು ಮುಂದಕ್ಕೆ ಹೋಗಿದ್ದಾರೆ.
ಇದರಿಂದ ವೃದ್ಧ ವ್ಯಕ್ತಿ ನಿಯಂತ್ರಣ ಕಳೆದುಕೊಂಡು ಬಸ್ ಬಾಗಿಲಲ್ಲೇ ಕೆಳಕ್ಕೆ ಬೀಳುತ್ತಿದ್ದರು. ಇದನ್ನು ಗಮನಿಸಿದ ಕ್ಲೀನರ್ ಅತುಲ್ ಕುಕು ಕ್ಷಣವೂ ತಡ ಮಾಡದೆ ತಕ್ಷಣವೇ ಕೈಚಾಚಿ ಅವರನ್ನು ಹಿಡಿದುಕೊಂಡಿದ್ದಾರೆ.
ಬಳಿಕ ಸುರಕ್ಷಿತವಾಗಿ ಬಸ್ ಹತ್ತಲು ಸಹಾಯ ಮಾಡಿದ್ದಾರೆ. ಅವರ ತ್ವರಿತ ಪ್ರತಿಕ್ರಿಯೆ, ಸಮಯಪ್ರಜ್ಞೆ ಮತ್ತು ಮಾನವೀಯತೆ ವೃದ್ಧ ಪ್ರಯಾಣಿಕನನ್ನು ಸಂಭವಿಸಬಹುದಾಗಿದ್ದ ಗಂಭೀರ ಅಪಾಯದಿಂದ ಪಾರು ಮಾಡಿದೆ.
ವ್ಯಾಪಕ ಮೆಚ್ಚುಗೆ
ಘಟನೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅತುಲ್ ಕುಕು ಅವರ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ. ಜೀವನದಲ್ಲಿ ಕೆಲವೊಮ್ಮೆ ದೊಡ್ಡ ಬದಲಾವಣೆ ತರಲು ದೊಡ್ಡ ಕೆಲಸವೇ ಬೇಕಾಗಿಲ್ಲ. ಸಮಯಕ್ಕೆ ಮಾಡಿದ ಒಂದು ಸಣ್ಣ ಸಹಾಯವೂ ಒಬ್ಬರ ಜೀವವನ್ನೇ ಉಳಿಸಬಹುದು ಎಂಬುದಕ್ಕೆ ಅತುಲ್ ಕುಕು ಅವರ ಕಾರ್ಯ ನೈಜ ಉದಾಹರಣೆಯಾಗಿದೆ.
ಈ ಹಿಂದೆ ಇಂತಹುದೇ ಒಂದು ಘಟನೆ ವೈರಲ್ ಆಗಿತ್ತು. ಬಸ್ ಹತ್ತಿದ ಪ್ರಯಾಣಿಕ ಬಸ್ ಚಲಿಸುತ್ತಿರುವಾಗ ಆಯತಪ್ಪಿ ಬಸ್ ನಿಂದ ಹೊರಕ್ಕೆ ಬೀಳುತ್ತಿದ್ದ. ಈ ವೇಳೆ ಕಂಡಕ್ಟರ್ ರಜನಿಕಾಂತ್ ಸ್ಟೈಲ್ ನಲ್ಲಿ ಆತನ ಕೈ ಹಿಡಿದು ಒಳಗೆ ಎಳೆದುಕೊಂಡು ರಕ್ಷಣೆ ಮಾಡಿದ್ದರು.