

ನವದೆಹಲಿ: ಆಸ್ಟ್ರೇಲಿಯಾದ ಮೆಲ್ಬೋರ್ನ್ನಲ್ಲಿ ಮಹಾತ್ಮ ಗಾಂಧಿಯವರ ಕಂಚಿನ ಪ್ರತಿಮೆ ಕದ್ದಿರುವುದನ್ನು ಭಾರತ ತೀವ್ರವಾಗಿ ಖಂಡಿಸಿದೆ. ಭಾರತದ ವಿದೇಶಾಂಗ ಸಚಿವಾಲಯ ಆಸ್ಟ್ರೇಲಿಯಾದ ಅಧಿಕಾರಿಗಳೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಿದ್ದು, ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಮೆಲ್ಬೋರ್ನ್ನ ರೌವಿಲ್ಲಾದಲ್ಲಿರುವ ಆಸ್ಟ್ರೇಲಿಯನ್ ಇಂಡಿಯನ್ ಕಮ್ಯುನಿಟಿ ಸೆಂಟರ್ನಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಯನ್ನು ಅಪರಿಚಿತ ವ್ಯಕ್ತಿಗಳು ಧ್ವಂಸಗೊಳಿಸಿ, ತೆಗೆದುಹಾಕುವುದನ್ನು ಭಾರತ ತೀವ್ರವಾಗಿ ಖಂಡಿಸುತ್ತದೆ. ನಾವು ಆಸ್ಟ್ರೇಲಿಯಾದ ಅಧಿಕಾರಿಗಳೊಂದಿಗೆ ಈ ವಿಷಯವನ್ನು ಬಲವಾಗಿ ಪ್ರಸ್ತಾಪಿಸಿದ್ದಿದ್ದು, ನಾಪತ್ತೆಯಾದ ಪ್ರತಿಮೆ ಮರುಪಡೆಯಲು ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದೇವೆ ಎಂದು ತಿಳಿಸಿದ್ದಾರೆ.
ಕಳ್ಳತನವಾಗಿರುವ ಪ್ರತಿಮೆಯನ್ನು ದೆಹಲಿಯ ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಭಾರತೀಯ ಮಂಡಳಿ (ICCR)ಯಿಂದ ಗಿಪ್ಟ್ ಆಗಿ ನೀಡಲಾಗಿತ್ತು.
ಆಸ್ಟ್ರೇಲಿಯ ಟುಡೆ ವರದಿಯ ಪ್ರಕಾರ, ಸೋಮವಾರ ಮಧ್ಯರಾತ್ರಿ 12.50ರ ಸುಮಾರಿಗೆ ಕಳ್ಳತನ ನಡೆದಿದೆ. ಪ್ರತಿಮೆಯನ್ನು ಅದರ ಅಡಿಪಾಯದಿಂದ ಕತ್ತರಿಸಲು ದುಷ್ಕರ್ಮಿಗಳು ಕೋನ ಗ್ರೈಂಡರ್ ( angle grinder) ಬಳಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ವಿಕ್ಟೋರಿಯಾ ಪೊಲೀಸ್ ನಾಕ್ಸ್ ಅಪರಾಧ ತನಿಖಾ ಘಟಕದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಮತ್ತು ಕಂಚಿನ ಪ್ರತಿಮೆಯನ್ನು ಮಾರಾಟ ಮಾಡಲು ಪ್ರಯತ್ನಿಸುವ ಯಾರಾದರೂ ಜಾಗರೂಕರಾಗಿರಲು ಮತ್ತು ಯಾವುದೇ ಅನುಮಾನಾಸ್ಪದ ಚಟುವಟಿಕೆಯನ್ನು ತಕ್ಷಣವೇ ವರದಿ ಮಾಡುವಂತೆ ಸ್ಕ್ರ್ಯಾಪ್ ಲೋಹದ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತಿಮೆ ಗುರಿಯಾಗಿರುವುದು ಇದೇ ಮೊದಲಲ್ಲ. ನವೆಂಬರ್ 2021 ರಲ್ಲಿ ಉದ್ಘಾಟನೆಯಾದ 24 ಗಂಟೆಗಳ ನಂತರ, ಗಾಂಧಿ ಪ್ರತಿಮೆಯನ್ನು ಅಪರಿಚಿತ ಜನರು ಧ್ವಂಸಗೊಳಿಸಿದ್ದರು. ಆಸ್ಟ್ರೇಲಿಯಾದಲ್ಲಿ ಭಾರತ-ವಿರೋಧಿ ಭಾವನೆಗಳ ಹೆಚ್ಚಳದ ನಡುವೆ ಈ ವಿಧ್ವಂಸಕತೆ ನಡೆದಿದೆ.
Advertisement